ಕನ್ನಡ ಭವನದಲ್ಲಿ ಗಣರಾಜ್ಯೋತ್ಸವ ಧ್ವಜಾರೋಹಣ ; ಸಂವಿಧಾನವನ್ನು ಅರ್ಥಪೂರ್ಣವಾಗಿ ಜಾರಿಗೊಳಿಸುವುದೇ ಅಂಬೇಡ್ಕರ್ ಅವರಿಗೆ ಸಲ್ಲಿಸುವ ದೊಡ್ಡ ಗೌರವ : ನಾಗರಾಜ ಹರಪನಹಳ್ಳಿ
ಕಾರವಾರ: ಸಂವಿಧಾನವನ್ನು ಅರ್ಥಪೂರ್ಣವಾಗಿ ಜಾರಿಗೊಳಿಸುವುದೇ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಸಲ್ಲಿಸುವ ದೊಡ್ಡ ಗೌರವಾಗಿದೆ ಎಂದು ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗರಾಜ ಹರಪನಹಳ್ಳಿ ಅಭಿಪ್ರಾಯಪಟ್ಟರು.
ಇಲ್ಲಿನ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಏರ್ಪಟ್ಟ 71ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರಧ್ವಜರೋಹಣ ಮಾಡಿ ಅವರು ಮಾತನಾಡಿದರು. 1950ರಲ್ಲಿ ಭಾರತದ ಪಾರ್ಲಿಮೆಂಟ್ ಸಂವಿಧಾನವನ್ನು ಅಂಗೀಕರಿಸಿ, ಗಣರಾಜ್ಯೋತ್ಸವ ಆಚರಿಸಿ ಸಂದರ್ಭದಲ್ಲಿ ಅಂಬೇಡ್ಕರ್ ಸಂವಿಧಾನವನ್ನು ಒಪ್ಪಿಯಾಗಿದೆ. ಅದನ್ನು ಅನುಷ್ಟಾನ ಮಾಡುವವರು ಕೆಟ್ಟವರಾಗಿದ್ದರೆ ಸಂವಿಧಾನ ಇದ್ದೂ ವ್ಯರ್ಥ, ಪ್ರಜಾಪ್ರಭುತ್ವ ಉಳಿದು, ಜನ ಸಮಾನರಾಗಿ, ನ್ಯಾಯಯುತ ಸಾಮಾಜಿಕ ಸ್ಥಾನಮಾನ ಪಡೆಯಬೇಕಾದರೆ ಸಂವಿಧಾನ ಅನುಷ್ಟಾನ ಮಾಡುವ ಮನಸುಗಳು ಪ್ರಜಾಪ್ರಭುತ್ವವನ್ನು ಅರ್ಥ ಮಾಡಿಕೊಂಡು ಜಾರಿಗೊಳಿಸಬೇಕು ಎಂದು ಆಶಯ ವ್ಯಕ್ತಪಡಿಸಿದ್ದರು. ಇಂದು ಸಂವಿಧಾನ ಮತ್ತು ಅದರ ಆಶಯಗಳಿಗೆ ಧಕ್ಕೆ ಬರುವ ಸಂಗತಿಗಳು ನಡೆಯುತ್ತಿವೆ. ಈ ಬಗ್ಗೆ ಯುವ ಜನತೆ ಧ್ವನಿ ಎತ್ತಬೇಕಿದೆ ಎಂದರು. ಸಂವಿಧಾನದ ಆಶಯಗಳನ್ನು ವಿದ್ಯಾರ್ಥಿ ಸಮೂಹ ಅರ್ಥ ಮಾಡಿಕೊಳ್ಳಬೇಕು. ಅಂತಿಯೇ ಸಂವಿಧಾನದ ಪೀಠಿಕೆಯನ್ನು ಶಾಲಾ ಪ್ರಾರ್ಥನೆಯ ವೇಳೆಯಲ್ಲಿ ಓದುವುದು ಕಡ್ಡಾಯ ಮಾಡಲಾಗಿದೆ. ನೂರಾರು ಪ್ರಾಂತಗಳಲ್ಲಿ ರಾಜ ಮನೆತನಗಳಲ್ಲಿ ಹಂಚಿಹೋಗಿದ್ದ ಭಾರತ ಪ್ರಜಾಪ್ರಭುತ್ವ ದೇಶವಾಗಿ ಸಂವಿಧಾನದ ಅಡಿ ಒಂದಾಗಿದೆ. ಗಣರಾಜ್ಯವಾಗಿದೆ. ಅನೇಕ ಭಾಷೆ, ಸಮುದಾಯ,ಜಾತಿ, ಸಂಪ್ರದಾಯ, ಆಚರಣೆ ಇರುವ ಈ ದೇಶವನ್ನು ಸಂವಿಧಾನ ಒಗ್ಗಟ್ಟಾಗಿಟ್ಟಿದೆ. ಸಂವಿಧಾನ ಮಾತ್ರ ನಮ್ಮನ್ನು ಬದುಕಿಸಬಲ್ಲದು. ಇದನ್ನು ತಿಳಿದೇ ಅಂಬೇಡ್ಕರ್ ವಿಶ್ವದ ನಾನಾ ಸಂವಿಧಾನಗಳನ್ನು ಅರ್ಥ ಮಾಡಿಕೊಂಡು ಭಾರತೀಯರ ಮನಸ್ಥಿತಿಗೆ ಅನುಕೂಲವಾಗುವ ಸಂವಿಧಾನ ರಚಿಸಿದ್ದಾರೆ. ಸಂವಿಧಾನ ಅರ್ಥ ಮಾಡಿಕೊಂಡರೆ ಅಂಬೇಡ್ಕರ್ ಅರ್ಥವಾಗುತ್ತಾರೆ. ಹಾಗಾಗಿ ಆಡಳಿತ ಮಾಡುವವರು ಗಾಂಧಿ ಮತ್ತು ಅಂಬೇಡ್ಕರರನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಕನ್ನಡ ಭವನದ ಬಳಿ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣಕ್ಕೆ ಮುನ್ನ ಅಂಬೇಡ್ಕರ್ ಭಾವಚಿತ್ರಕ್ಕೆ ಗೌರವ ಸಲ್ಲಿಸಲಾಯಿತು. ಸಮಾರಂಭದಲ್ಲಿ ಕಸಾಪ ಹಿರಿಯ ಸದಸ್ಯರಾದ ನಜೀರ್ ಅಹಮ್ಮದ್ ಯು .ಶೇಖ್, ಎಸ್.ಡಿ.ನಾಯ್ಕ,ಮಚ್ಚೇಂದ್ರ ಮಹಾಲೆ, ಮಾರುತಿ ಬಾಡಕರ್, ಎಸ್.ಜಿ.ಭಟ್. ಮಹಿಳಾ ಕಾಲೇಜಿನ ಪ್ರಿನ್ಸಿಪಾಲ ವಿನಾಯಕ ಗಂಗೊಳ್ಳಿ, ಉದಯ್ ಬರ್ಗಿ, ದೀಪಕ್ ಕುಮಾರ್ ಶೆಣೈ, ಮಹಿಳಾ ಕಾಲೇಜಿನ ಉಪನ್ಯಾಸಕ ವರ್ಗ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.