ಕಾರವಾರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಡಿಯಲ್ಲಿ ಲಭ್ಯವಿರುವ ವಿವಿಧ ಯೋಜನೆ ಮತ್ತು ಸೌಲಭ್ಯಗಳ ಮಾಹಿತಿ ಪ್ರತಿ ಮಹಿಳೆಯರಿಗೂ ತಲುಪುವಂತೆ ನೋಡಿಕೊಳ್ಳುವುದು ಅಧಿಕಾರಿಗಳ ಹೊಣೆಯಾಗಿದ್ದು, ಆ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಕಾರ್ಯವಾಗಬೇಕೆಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅಧಿಕಾರಿಗಳಿಗೆ ಸೂಚಿಸಿದರು.
ಗುರುವಾರ ಜಿಲ್ಲಾಧಿಕಾರಿ ಕಛೇರಿ ನ್ಯಾಯಾಲಯ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಯೋಜನೆಗಳ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ತ್ರೈ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ, ಅವರು ಮಹಿಳೆಯರ ಮೇಲಿನ ದೌರ್ಜನ್ಯ ತಡೆಯುವಲ್ಲಿ ಪೊಲೀಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯ ಮಹತ್ವರವಾದದ್ದು. ಈ ಇಲಾಖೆಗಳು ಜಂಟಿಯಾಗಿ ಇಂತಹ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕಿದೆ, ಮಹಿಳಾ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ದಾಖಲಾಗುವ ಪ್ರತಿ ಪ್ರಕರಣಗಳ ವಿವರಗಳನ್ನೊಳಗೊಂಡ ವರದಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೀಡಬೇಕು ಹಾಗೂ ಜಿಲ್ಲಾಧಿಕಾರಿ ಗಮನಕ್ಕೂ ಕೂಡ ತರಬೇಕು ಎಂದರು.
ಬಾಲ್ಯಾ ವಿವಾಹವನ್ನು ತಡೆಗಟ್ಟುವಲ್ಲಿ ಶಿಕ್ಷಣ ಇಲಾಖೆಯ ಪಾತ್ರ ಕೂಡ ಇದ್ದು, ಶಾಲಾ ಕಾಲೇಜಿಲ್ಲಿ ಓದುತ್ತಿರುವ ಮಕ್ಕಳ ಮಾಹಿತಿಯನ್ನು ಪ್ರತಿ ಶಾಲಾ ಕಾಲೇಜು ಶಿಕ್ಷಕರಿಂದ ಡಿ ಡಿ ಪಿ ಯು ಮತ್ತು ಡಿ ಡಿ ಪಿ ಐ ಅವರು ಪಡೆಯಬೇಕು.
ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರಿಗೆ ತ್ವರಿತ ಪರಿಹಾರ ಸಿಗುವಂತಹ ಸಾಕಷ್ಟು ಯೋಜನೆಗಳಿದ್ದು, ಈ ನಿಟ್ಟಿನಲ್ಲಿ ಸಾಕಷ್ಟು ಕೆಲಸಗಳ ಆಗಬೇಕಿದೆ ಹಾಗೂ ಅವುಗಳ ಕುರಿತು ನಿಖರ ಮಾಹಿತಿ, ಅಂಕಿ-ಅಂಶಗಳನ್ನು ಸಂಗ್ರಹಿಸುವ ಕೆಲಸ ಮಾಡಿ ಎಂದು ಸೂಚಿಸಿದರು.
ಜಿಲ್ಲಾ ಮಟ್ಟದ ವಿಧವಾ ಕೋಶ ಯೋಜನೆಯಡಿ ವಿಧವೆಯರಿಗೆ ಮನೆ ಸಹಾಯಧನ ನೀಡುವಂತಹ ಸಾಕಷ್ಟು ಯೋಜನೆಗಳಿವೆ. ಈ ನಿಟ್ಟಿನಲ್ಲಿ ಅಧಿಕಾರಿಗಳ ಅಂಕಿಅಂಶಗಳ ಪಟ್ಟಿಯನ್ನು ಗಮನಿಸಿ, ಮತ್ತೊಮ್ಮೆ ವಿಧವಾ ಮಹಿಳೆಯ ಮಾಹಿತಿಯನ್ನು ಸರಿಯಾಗಿ ಅಂಕಿ ಅಂಶಗಳನ್ನು ಸಂಗ್ರಹಿಸಿವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ ಅವರು ಸಭೆಗೆ ಮಾಹಿತಿ ನೀಡಿ ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ಏಪ್ರಿಲ್ ನಿಂದ ಜೂನ್ ವರೆಗೆ 2 ಪ್ರಕರಣಗಳು, ಸಖಿ ಒನ್ ಸ್ಟಾಪ್ ಸೆಂಟರ್ನಲ್ಲಿ ಪೋಕ್ಸೊ ಕಾಯ್ದೆಯಡಿ ಒಂದು ಪ್ರಕರಣ ಹಾಗೂ ಕೌಟುಂಬಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ 3 ಪ್ರಕರಣಗಳು ದಾಖಲಾಗಿವೆ. ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆಯಡಿ ಏಪ್ರಿಲ್ ನಿಂದ ಜೂನ್ ವರೆಗೆ 15 ಪ್ರಕರಣಗಳ ದಾಖಲಾಗಿದ್ದು 9 ಪ್ರಕರಣಗಳು ಈಗಾಗಲೇ ಇತ್ಯರ್ಥವಾಗಿದೆ. ಹಾಗೂ ಮಹಿಳಾ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ಸಂಬಂಧಿಸಿದಂತೆ ಏಪ್ರೀಲ್ ನಿಂದ ಜೂನ್ ವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದರು.
ಪ್ರಥಮ ಬಾರಿ ತಾಯಿಯಾಗುವ ಮಹಿಳೆಯರಿಗೆ ಮೀಸಲಿರುವ ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆಯಡಿ ಜಿಲ್ಲೆಯ 1550 ಫಲಾನುಭವಿಗಳಿಗೆ ತಲಾ 5 ಸಾವಿರ ರೂ ತಲುಪಿಸಲಾಗಿದೆ ಹಾಗೂ ಪೋಷಣಾ ಅಭಿಯಾನದ ನಾವಿನ್ಯತೆ ಚಟುವಟಿಕೆಯಡಿ 380 ಅಂಗನವಾಡಿ ಕೇಂದ್ರಗಳಲ್ಲಿ ಕೈತೋಟ ನಿರ್ಮಾಣ ಮಾಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಧನುಶ್ರೀ, ಚೇತನಾ, ಉದ್ಯೋಗಿನಿ, ಮೈತ್ರಿ ಯೋಜನೆಗಳಿಗೆ ಅರ್ಜಿ ಸಲ್ಲಿಸಿದಂತಹ ಫಲಾಲುಭವಿಗಳ ಆಯ್ಕೆಯನ್ನು ಸಭೆಯಲ್ಲಿ ಮಾಡಲಾಯಿತು.
ಜಿಲ್ಲಾ ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷ್ ಕುಮಾರ್ ಎನ್ , ಡಿಹೆಚ್ಓ ಶರದ್ ನಾಯಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂಧಿ ಉಪಸ್ಥಿತರಿದ್ದರು.
ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿದ ಜಿಲ್ಲಾಧಿಕಾರಿ· ಸಖಿ ಒನ್ ಸ್ಟಪ್ ಸೆಂಟರ್ ಹೊಸ ಕಟ್ಟಡದಲ್ಲಿ ನೀರು ಮತ್ತು ವಿದ್ಯತ್ ಮೂಲ ಸೌಲಭ್ಯದ ಸಮಸ್ಯೆ ಇರುವುದನ್ನು ಮನಗೊಂಡು ಒಂದು ವಾರದ ಒಳಗಾಗಿ ಸರಿಮಾಡಲು ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚನೆ
· ಒನ್ ಸ್ಟಾಪ್ ಸೆಂಟರ್ನಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿಯ ನೇಮಕಗೊಳ್ಳದೇ ಇರುವ ಸಮಸ್ಯೆ ಮನಗೊಂಡುಮಹಿಳಾ ಪೊಲೀಸ್ ಸಿಭ್ಬಂಧಿಯ ಅವಶ್ಯಕತೆ ಇರುವಾಗ ಪೊಲೀಸ್ ಠಾಣೆಯಿಂದ ಮಹಿಳಾ ಸಿಭ್ಬಂಧಿಯನ್ನು ನೀಯೋಜನೆಗೊಳಿಸುವಂತೆ ಪೊಲೀಸ್ ಇಲಾಖೆಗೆ ಸೂಚನೆ
· ಘಟ್ಟದ ಮೇಲಿನ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯದಲ್ಲಿ ರಕ್ಷಿಸಿದ ಮಕ್ಕಳನ್ನು ಅಂದೇ ಕಾರವಾರದ ಕೇಂದ್ರಕ್ಕೆ ಕಳುಹಿಸಿಕೊಡಬೇಕು. ಅರಬೈಲ್ ಘಟ್ಟ ಕುಸಿದಾಗ ತುಂಬಾ ಸಮಸ್ಯೆ ಎದರಿಸಿದ ಅಧಿಕಾರಿಗಳ ಸಮಸ್ಯೆಗಳನ್ನು ಅರಿತ ಜಿಲ್ಲಾಧಿಕಾರಿ ತಾತ್ಕಾಲಿಕವಾಗಿ ಶಿರಸಿಯ ಸ್ವಾಧಾರ್ ಕೇಂದ್ರದಲ್ಲಿ ಮಕ್ಕಳನ್ನು ಇರಿಸಲು ಅವಕಾಶ ಮಾಡಿಕೊಡುವ ಭರವಸೆ
ತ್ರೈ ಮಾಸಿಕ ಸಭೆ ಎಂದರೆ ಕೇವಲ ಅಂಕಿ ಅಂಶಗಳನ್ನು ಬಗ್ಗೆ ಮಾಹಿತಿ ಒಪ್ಪಿಸುವಂತಿರಬಾರದು