ಕಾರವಾರ :ಡಾ.ಯು.ಆರ್.ರಾವ್ ಅವರ ನಿಧನ-ಸಚಿವ ಆರ್ ವಿ ದೇಶಪಾಂಡೆಯವರಿಂದ ಶೋಕ ಸಂದೇಶ
ಕಾರವಾರ ಜುಲೈ 24 : ಕನ್ನಡ ನಾಡಿನ ಹೆಮ್ಮೆಯ ಪುತ್ರರು, ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದ, ಖ್ಯಾತ ವಿಜ್ಞಾನಿಯೂ ಆಗಿದ್ದ ಡಾ.ಯು.ಆರ್.ರಾವ್ ಅವರ ನಿಧನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಆರ್.ವಿ.ದೇಶಪಾಂಡೆಯವರು ಶೋಕ ವ್ಯಕ್ತಪಡಿಸಿದ್ದಾರೆ.
ಹಲವು ದಶಕಗಳಿಂದ ನನಗೆ ಆಪ್ತ ಸ್ನೇಹಿತರಾಗಿದ್ದ ಡಾ.ರಾವ್ ಅವರು ಕಳೆದ ವಾರವಷ್ಟೇ ಭೇಟಿಯಾಗಿದ್ದರು. ಈಗ ಅವರು ನಮ್ಮೊಂದಿಗಿಲ್ಲ ಎಂಬುದನ್ನು ನಂಬುವುದಕ್ಕೇ ಸಾಧ್ಯವಾಗುತ್ತಿಲ್ಲ.
ಬಾಹ್ಯಾಕಾಶ ವಿಜ್ಞಾನ, ಕ್ಷಿಪಣ ಆವಿಷ್ಕಾರ, ರಾಕೆಟ್ ತಂತ್ರಜ್ಞಾನ, ಉಪಗ್ರಹ ಉಡಾವಣೆ, ಖಗೋಳಶಾಸ್ತ್ರ ಮುಂತಾದ ಅನೇಕ ಕ್ಷೇತ್ರಗಳಲ್ಲಿ ತಮ್ಮ ಅಪ್ರತಿಮ ಸಂಶೋಧನೆ ಮತ್ತು ಕೊಡುಗೆಗಳಿಂದ ಡಾ.ರಾವ್ ಅವರು ಅಜರಾಮರರಾಗಿದ್ದಾರೆ. ಇಸ್ರೋದಂತಹ ಸಂಸ್ಥೆಯ ಮುಖ್ಯಸ್ಥರಾಗಿ ಅನೇಕ ಸಾಧನೆಗಳಿಗೆ ಪ್ರೇರಕರಾಗಿದ್ದ ಡಾ. ರಾವ್ ಅವರು ಜಗತ್ತಿನ ಅಗ್ರಪಂಕ್ತಿಯ ಶ್ರೇಷ್ಠ ಸಾಧಕರ ಸಾಲಿನಲ್ಲಿ ನಿಂತು ನಮ್ಮ ರಾಜ್ಯದ ಮತ್ತು ನಮ್ಮ ರಾಷ್ಟ್ರದ ಕೀರ್ತಿ ಪತಾಕೆಯನ್ನು ಜಾಗತಿಕ ಮಟ್ಟದಲ್ಲಿ ಎತ್ತಿ ಹಿಡಿದು ಇಂದಿನ ಯುವ ಜನಾಂಗಕ್ಕೆ ಸ್ಫೂರ್ತಿಯಾಗಿದ್ದರು. ಇಂತಹ ಮೇರು ವ್ಯಕ್ತಿಯನ್ನು ಕಳೆದುಕೊಂಡಿದ್ದು, ನಿಜಕ್ಕೂ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ಕೋರುತ್ತಾ ಡಾ.ರಾವ್ ಅವರ ಅಗಲಿಕೆಯಿಂದ ತೀವ್ರ ಆಘಾತದಲ್ಲಿರುವ ಅವರ ಕುಟುಂಬದ ಸದಸ್ಯರಿಗೂ ಈ ಮೂಲಕ ಸಾಂತ್ವನಗಳನ್ನು ತಿಳಿಸಿದ್ದಾರೆ.
ಜುಲೈ 26ರಂದು ಡೆಂಘಿ ಜಾಗೃತಿ ಜಾಥಾ
ಕಾರವಾರ ಜುಲೈ 24 : ಡೆಂಘಿ ವಿರೋಧಿ ಮಾಸಾಚರಣೆ ಪ್ರಯುಕ್ತ ಜುಲೈ 26 ರಂದು ಬೆಳಿಗ್ಗೆ 10 ಗಂಟೆಗೆ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಆವರಣ ಕಾರವಾರದಿಂದ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಅಶೋಕ್ ಕುಮಾರ್ ತಿಳಿಸಿದ್ದಾರೆ.