ಕಾರವಾರ ಅಕ್ಟೋಬರ್ 17: ಅಕ್ಟೋಬರ್ 18 ರಿಂದ 20 ರವರೆಗೆ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತಿದ್ದು, ಸಾರ್ವಜನಿಕರು ದೀಪಾವಳಿ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸುವಂತೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪಟಾಕಿಗಳ ಮಾರಾಟ ಮತ್ತು ಬಳಕೆ, ಧ್ವನಿವರ್ಧಕ ಬಳಸುವುದು ಅಥವಾ ಇನ್ನಿತರ ಸಲಕರಣೆಗಳಿಂದ ಶಬ್ದ ಮಾಡುವುದು ತಡೆಗಟ್ಟುವ ಕಾನೂನು ಅನುಷ್ಠಾನಗೊಳಿಸುವದರೊಂದಿಗೆ ಈ ಕೆಳಕಂಡ ಸೂಚನೆಗಳನ್ನು ಪಾಲಿಸಲು ಜಿಲ್ಲಾಧಿಕಾರಿ ಕೋರಿದ್ದಾರೆ.
ಹಬ್ಬದ ಆಚರಣೆಯಲ್ಲಿ ದೀಪಗಳ ಬಳಕೆ ಪ್ರಧಾನವಾಗಿರಲಿ. ರಾತ್ರಿ 10-00 ರಿಂದ ಬೆಳಿಗ್ಗೆ 6-00 ರವರೆಗೆ ಪಟಾಕಿಗಳನ್ನು ಸಿಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ. 125 ಡೆಸಿಬಲ್ಸ್ಗಳಿಗಿಂತ ಹೆಚ್ಚು ಶಬ್ದ ಉಂಟು ಮಾಡುವ ಪಟಾಕಿಗಳನ್ನು ದಾಸ್ತಾನು / ಮಾರಾಟ ಮಾಡುವುದನ್ನು ಮತ್ತು ಈ ತರಹದ ಪಟಾಕಿಗಳನ್ನು ಸಿಡಿಸುವುದನ್ನು ನಿಷೇಧಿಸಲಾಗಿದೆ. ಪರಿಸರ ಮಾಲಿನ್ಯ ಮತ್ತು ಶಬ್ಧ ಮಾಲಿನ್ಯ ನಿಯಂತ್ರಣದಲ್ಲಿಡುವ ಉದ್ದೇಶದಿಂದ ಪರಿಸರ (ಸಂರಕ್ಷಣೆ) (ಎರಡನೆಯ ತಿದ್ದುಪಡಿ) ನಿಯಮಾವಳಿಗಳು, 1999 ರ ಅನ್ವಯ 125 ಡಿಬಿ (ಎ) ಗಿಂತ (4 ಮೀಟರ್ ಅಂತರದಲ್ಲಿ) ಹೆಚ್ಚು ಶಬ್ಧ ಮಾಡುವ ಪಟಾಕಿಗಳನ್ನು ಮಾರಾಟ ಮಾಡುವುದಾಗಲೀ ಅಥವಾ ಉಪಯೋಗಿಸುವುದನ್ನಾಗಲೀ ಕಟ್ಟನಿಟ್ಟಾಗಿ ನಿಷೇಧಿಸಲಾಗಿದೆ. ದಿನದ ಯಾವುದೇ ಸಮಯದಲ್ಲಿ ನಿಶ್ಯಬ್ಧ ವಲಯಗಳೆಂದು ಘೋಷಿಸಲ್ಪಟ್ಟಿರುವ ಸ್ಥಳಗಳ (ಆಸ್ಪತ್ರೆ, ಶಾಲೆ, ಪ್ರಾರ್ಥನಾ ಮಂದಿರ ಇತ್ಯಾದಿಗಳು) ಸುತ್ತಮುತ್ತ ಯಾವುದೇ ರೀತಿಯ ಶಬ್ದ ಉಂಟುಮಾಡುವ ಪಟಾಕಿ ಅಥವಾ ಸಿಡಿಮದ್ದುಗಳನ್ನು ಬಳಸುವಂತಿಲ್ಲ. ಪಟಾಕಿಗಳು ಹೊರಸೂಸುವ ವಿಷಯುಕ್ತ ಅನಿಲ ಆರೋಗ್ಯ ಸಂಬಂಧಿತ ಕಾಯಿಲೆಗಳು ಹಾಗೂ ಪರಿಸರ ಮಾಲಿನ್ಯಕ್ಕೆ ಕಾರಣವಾಗುವುದರಿಂದ ಪಟಾಕಿಗಳ ಸಿಡಿತವನ್ನು ಕಡಿಮೆಗೊಳಿಸುವುದು. ಹಬ್ಬದ ಸಮಯದಲ್ಲಿ ಉತ್ಪತ್ತಿಯಾಗುವ ಘನ ತ್ಯಾಜ್ಯ ವಸ್ತುಗಳನ್ನು ಪ್ರತ್ಯೇಕವಾಗಿ ವಿಂಗಡಿಸಿ ಜೈವಿಕ ವಿಘಟನೆಯಾಗುವ ಪದಾರ್ಥಗಳನ್ನು ಮರು ಬಳಕೆ ಮತ್ತು ಗೊಬ್ಬರ ತಯಾರಿಕೆಗೆ ಹಾಗೂ ಇತರೆ ಜೈವಿಕ ವಿಘಟನೆಯಾಗದ ಪದಾರ್ಥಗಳನ್ನು ವ್ಶೆಜ್ಞಾನಿಕವಾಗಿ ವಿಲೇವಾರಿ ಮಾಡಬೇಕು.
ಮೇಲಿನ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಉಲ್ಲಂಘಿಸುವವರು ಉಪಯೋಗಿಸುತ್ತಿರುವ ಧ್ವನಿವರ್ಧಕ ಹಾಗೂ ಇನ್ನಿತರ ಸಲಕರಣೆಗಳನ್ನು ಜಪ್ತು ಮಾಡಿ, ಪರಿಸರ (ಸಂರಕ್ಷಣೆ) ಕಾಯ್ದೆ, 1986 ರ ಅಡಿಯಲ್ಲಿ ಕಾನೂನು ರೀತ್ಯಾ ಕ್ರಮವನ್ನು ಕೈಗೊಳ್ಳಲಾಗುವುದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.