ಚಿಲುಮೆ ಹಗರಣ; ಮೂವರು ಆರ್ಒಗಳ ಸಹಿತ ನಾಲ್ವರ ಬಂಧನ
ಬೆಂಗಳೂರು:ಚಿಲುಮೆ ಸಂಸ್ಥೆ ಪ್ರತಿನಿಧಿಗಳಿಗೆ ಗುರುತಿನ ಚೀಟಿ ನೀಡಿದ ಆರೋಪದಡಿ ಬಿಬಿಎಂಪಿಯ ಮೂವರು ಕಂದಾಯ ಅಧಿಕಾರಿ(ಆರ್ಒ) ಹಾಗೂ ಒಬ್ಬರು ಉಪ ಕಂದಾಯ ಅಧಿಕಾರಿ ಸೇರಿದಂತೆ ನಾಲ್ವರನ್ನು ಇಲ್ಲಿನ ಹಲಸೂರು ಗೇಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಚಿಲುಮೆ ಸಂಸ್ಥೆಯ ಪ್ರಕರಣದಲ್ಲಿ ಕರ್ತವ್ಯಲೋಪ ಆರೋಪದಡಿ ಅಮಾನತುಗೊಂಡಿದ್ದ ಶಿವಾಜಿನಗರದ ಕಂದಾಯ ಅಧಿಕಾರಿ ಸುಹೇಲ್ ಅಹ್ಮದ್, ಮಹದೇವಪುರದ ಕಂದಾಯ ಅಧಿಕಾರಿ ಕೆ.ಚಂದ್ರಶೇಖರ್, ಆರ್.ಆರ್.ನಗರದ ಕಂದಾಯ ಅಧಿಕಾರಿ ಮಹೇಶ್ ಹಾಗೂ ಚಿಕ್ಕಪೇಟೆಯ ಉಪ ಕಂದಾಯ ಅಧಿಕಾರಿ ವಿ.ಬಿ.ಭೀಮಾಶಂಕರ್ ಅವರನ್ನು ಬಂಧಿಸಲಾಗಿದ್ದು, ಇವರು ಮತದಾರರ ನೋಂದಣಾಧಿ ಕಾರಿಯಾಗಿ ಕಾರ್ಯನಿರ್ವಹಿಸಿದ್ದರು.
ನ.21ರಂದು ಈ ಮೂವರು ಅಧಿಕಾರಿಗಳನ್ನು ಬಿಬಿಎಂಪಿ ಅಮಾನತು ಮಾಡಿತ್ತು. ಅಲ್ಲದೆ, ಇಲ್ಲಿನ ಶಿವಾಜಿನಗರ ಕ್ಷೇತ್ರದಲ್ಲಿ ಚಿಲುಮೆಪ್ರತಿನಿಧಿಗಳ ಮನವಿ ಮೇರೆಗೆ ಆರೋಪಿ ಚಂದ್ರಶೇಖರ್ಗೆ 14 ಮತಗಟ್ಟೆ ಮಟ್ಟದ ಸಂಯೋಜಕ (ಬಿಎಲ್ಸಿ) ಗುರುತಿನ ಚೀಟಿಗಳನ್ನು ಸುಹೇಲ್ ವಿತರಿಸಿದ ಗಂಭೀರ ಆರೋಪವಿದೆ. ಮಹದೇವಪುರ ವಿಧಾನಸಭೆ ಕ್ಷೇತ್ರದಲ್ಲೂ ಕೆ.ಚಂದ್ರಶೇಖರ್ ಅವರು ಚಿಲುಮೆ ಸಂಸ್ಥೆಯ ಲೋಕೇಶ್ ಕೆ.ಎಂ. ಎಂಬಾತನಿಗೆ ಮತದಾರರ ನೋಂದಣಾಧಿಕಾರಿ ಮತಗಟ್ಟೆ ಮಟ್ಟದ ಅಧಿಕಾರಿ (ಬಿಎಲ್ ಒ) ಗುರುತಿನ ಚೀಟಿ ನೀಡಿದ್ದಾರೆ. ಇನ್ನೂ, ವಿ.ಬಿ.ಭೀಮಾಶಂಕರ್ ಸಹ ಚಿಕ್ಕಪೇಟೆ ವಿಧಾನಸಭೆ ಕ್ಷೇತ್ರ ಹಾಗೂ ಮಹೇಶ್ ಆರ್.ಆರ್. ನಗರದ ವಿಧಾನಸಭೆ ಕ್ಷೇತ್ರದಲ್ಲಿ ಚಿಲುಮೆ ಸಂಸ್ಥೆಯ ಪ್ರತಿನಿಧಿಗಳಿಗೆ ಬಿಎಲ್ಸಿ ಗುರುತಿನ ಚೀಟಿ ನೀಡಿರುವ ಪುರಾವೆ ಸಿಕ್ಕಿತ್ತು ಎನ್ನಲಾಗಿದೆ. ಸದ್ಯ ಈ ನಾಲ್ವರನ್ನು ಬಂಧಿಸಿರುವ ತನಿಖಾ ತಂಡ, ಚುನಾವಣೆ ಆಯೋಗದ ನಿಯಮ ಉಲ್ಲಂಘಿಸಿ ಖಾಸಗಿ ವ್ಯಕ್ತಿಗಳಿಗೆ ಗುರುತಿನ ಚೀಟಿ ವಿತರಿಸಿರುವ ಕುರಿತು ವಿಚಾರಣೆಗೊಳಪಡಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.