ಕೊಡಗು: ಪಾನಮತ್ತನಿಂದ ಪೆಟ್ರೋಲ್ ಸುರಿದು ಮನೆಗೆ ಬೆಂಕಿ ಮಗು ಸೇರಿ6 ಮಂದಿ ಸಜೀವ ದಹನ
ಮಡಿಕೇರಿ: ಪತ್ನಿಯೊಂದಿಗೆ ಕಲಹವಾಡಿದ ದುಷ್ಕರ್ಮಿ ಯೊಬ್ಬ ಕುಟುಂಬದ ಸದಸ್ಯರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪರಿಣಾಮ ಮಗು ಸೇರಿ ಆರು ಮಂದಿ ಸಾವನ್ನಪ್ಪಿರುವ ಅಮಾನವೀಯ ಘಟನೆ ವೀರಾಜಪೇಟೆ ತಾಲೂಕಿನ ಮುಗುಟಗೇರಿ ಗ್ರಾಮದ ಕಾನೂರು ರಸ್ತೆಯಲ್ಲಿ ವರದಿಯಾಗಿದೆ.
ಎರವರ ಬೋಜ(50) ಎಂಬಾತ ಬೆಂಕಿ ಹಚ್ಚಿದ ಆರೋಪಿಯಾಗಿದ್ದು, ದುಷ್ಕೃತ್ಯ ನಡೆಸಿ ತಲೆಮರೆಸಿಕೊಂಡಿದ್ದಾನೆ. ಶುಕ್ರವಾರ ಮಧ್ಯರಾತ್ರಿ ಮನೆಯಲ್ಲಿ ಪುಟ್ಟ ಮಕ್ಕಳ ಸಹಿತ ಮಹಿಳೆಯರು ಗಾಢ ನಿದ್ದೆಯಲ್ಲಿದ್ದ ಸಂದರ್ಭ ದುಷ್ಕರ್ಮಿ ಬೋಜ ಮನೆಯ ಕಿಟಕಿ ಬಾಗಿಲುಗಳನ್ನು ಮುಚ್ಚಿ, ಮೇಲಿನ ಹೆಂಚು ತೆಗೆದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪರಿಣಾಮ ಓರ್ವ ಪುಟ್ಟ ಬಾಲಕಿ ಸಹಿತ ಮಹಿಳೆಯರಿಬ್ಬರು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಬೆಂಕಿಯ ತೀವ್ರತೆಗೆ ಸಂಪೂರ್ಣ ಸುಟ್ಟು ಹೋಗಿದ್ದ ಮೂವರು ಮಕ್ಕಳನ್ನು ಮೈಸೂರು ಆಸ್ಪತ್ರೆಗೆ ರಾತ್ರಿಯೇ ಸ್ಥಳಾಂತರಿಸಲಾಯಿತಾದರೂ ಶನಿವಾರ ಬೆಳಗ್ಗೆ ಮೂವರು ಮಕ್ಕಳೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಆರೋಪಿ ಬೋಜನ #ಪ ಬೇಬಿ(40), ಅತ್ತೆ ಸೀತೆ(55), ತೋಲ ಎಂಬವರ ಮಗಳು ಪ್ರಾರ್ಥನಾ(6) ಸ್ಥಳದಲ್ಲೇ ಸಜೀವ ದಹನವಾದರೆ, ಮಂಜು ಎಂಬವರ ಮಕ್ಕಳಾದ ಪ್ರಕಾಶ್ (6), ವಿಶ್ವಾಸ್ (3) ಹಾಗೂ ತೋಲ ಅವರ ಮಗ ವಿಶ್ವಾಸ್ (7) ಚಿಂತಾಜನಕ ಸ್ಥಿತಿಯಲ್ಲಿ ಮೈಸೂರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಮತ್ತೊಂದು ಕೋಣೆಯಲ್ಲಿ ಮಲಗಿದ್ದ ಮಂಜು ಮತ್ತು ತೋಲ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.
ಆರೋಪಿ ಎರವರ ಬೋಜ ಘಟನೆಯ ಬಳಿಕ ರಾತ್ರಿಯೇ ತಲೆಮರೆಸಿಕೊಂಡಿದ್ದಾನೆ. ಆತನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದು ಶನಿವಾರ ಸಂಜೆಯಾದರೂ ಆತ ಪತ್ತೆಯಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಘಟನೆಯ ವಿವರ: ಆರೋಪಿ ಬೋಜ ಹೈಸೊಲ್ಲೂರಿನಲ್ಲಿ ವಾಸವಿದ್ದು, ಮದ್ಯ ವ್ಯಸನಿಯಾಗಿದ್ದ. ಈ ನಡುವೆ ಬೋಜ, ಪತ್ನಿ ಬೇಬಿ ಜೊತೆ ಜಗಳವಾಡಿದ್ದಾನೆ. ಪತಿಯ ಕಿರುಕುಳದಿಂದ ಬೇಸತ್ತ ಬೇಬಿ ತನ್ನ ಮಕ್ಕಳನ್ನು ಕರೆದುಕೊಂಡು ತನ್ನ ಸಂಬಂಧಿ ಮಂಜು ಎಂಬವರ ಮನೆಗೆ ಆಗಮಿಸಿದ್ದರು.
ಬೋಜ ಶುಕ್ರವಾರ ಮಧ್ಯರಾತ್ರಿ ಪೆಟ್ರೋಲ್ ಸಹಿತ ಮುಗುಟಗೇರಿಯ ಮಂಜು ಮನೆಗೆ ಬಂದಿದ್ದಾನೆ. ಎಲ್ಲರೂ ಮಲಗಿರುವುದನ್ನು ಖಚಿತಪಡಿಸಿಕೊಂಡು ಮುಂದಿನ ಬಾಗಿಲಿಗೆ ಚಿಲಕ ಹಾಕಿ ಕಿಟಕಿಗಳನ್ನು ಮುಚ್ಚಿ ಯಾರೂ ಹೊರ ಬಾರದಂತೆ ಭದ್ರಪಡಿಸಿದ್ದಾನೆ. ಬಳಿಕ ಏಣಿಯ ಸಹಾಯದಿಂದ ಮನೆಯ ಮೇಲಿನ ಹೆಂಚು ತೆಗೆದು ಮನೆಯ ಒಳಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸ್ಥಳದಿಂದ ಓಡಿ ಹೋಗಿದ್ದಾನೆ ಎನ್ನಲಾಗಿದೆ. ಮನೆಯಲ್ಲಿದ್ದ ವಸ್ತುಗಳು ಸಂಪೂರ್ಣವಾಗಿ ಭಸ್ಮವಾಗಿದ್ದು, ಘಟನೆಯ ತೀವ್ರತೆಗೆ ಸಾಕ್ಷಿಯಾಗಿವೆ.
ಘಟನಾ ಸ್ಥಳಕ್ಕೆ ದಕ್ಷಿಣ ವಲಯದ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಮಧುಕರ್ ಪವಾರ್, ಎಸ್ಪಿ ಕ್ಷಮಾ ಮಿಶ್ರಾ, ಪೊಲೀಸ್ ಬೆರಳಚ್ಚು ತಂಡ, ಶ್ವಾನ ದಳ ಆಗಮಿಸಿ ಪರಿಶೀಲನೆ ನಡೆಸಿತು. ಪೊನ್ನಂಪೇಟೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಬೋಜನ ಪತ್ತೆಗಾಗಿ ಬಲೆ ಬೀಸಿದ್ದಾರೆ ಎಂದು ತಿಳಿದು ಬಂದಿದೆ.