ಪೇಜಾವರ ಶ್ರೀಗಳಿಗೆ ಅಂತಿಮ ನಮನ; ಹರಿದು ಬಂದ ಜನಸಾಗರ
ಬೆಂಗಳೂರು: ಇಂದು ನಿಧನರಾದ ಉಡುಪಿಯ ಅಷ್ಟಮಠದ ಹಿರಿಯ ಯತಿ, ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮಿ(88)ಯ ಅಂತ್ಯಕ್ರಿಯೆಯನ್ನು ಸಕಲ ಸರಕಾರಿ ಗೌರವಗಳೊಂದಿಗೆ ಬೆಂಗಳೂರಿನ ಪೂರ್ಣ ಪ್ರಜ್ಞಾ ವಿದ್ಯಾಪೀಠದಲ್ಲಿ ನೆರವೇರಿಸಲಾಯಿತು.
ರವಿವಾರ ಬೆಳಗ್ಗೆ 9.20ಕ್ಕೆ ಉಡುಪಿಯ ಶ್ರೀ ಕೃಷ್ಣಮಠದಲ್ಲಿ ವಿಧಿವಶರಾದ ವಿಶ್ವೇಶ ತೀರ್ಥ ಸ್ವಾಮೀಜಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಉಡುಪಿ ಜಿಲ್ಲಾ ಕ್ರೀಡಾಂಗಣದಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಬಳಿಕ ಶ್ರೀಗಳ ಪ್ರಾರ್ಥಿವ ಶರೀರವನ್ನು ವಾಯು ಸೇನೆಯ ಹೆಲಿಕಾಪ್ಟರ್ ಮೂಲಕ ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ತರಲಾಯಿತು.
ಅಲ್ಲಿಂದ ಪ್ರಾರ್ಥಿವ ಶರೀರವನ್ನು ತೆರೆದ ವಾಹನದಲ್ಲಿ ನ್ಯಾಷನಲ್ ಕಾಲೇಜು ಮೈದಾನಕ್ಕೆ ತಂದು, ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಭಕ್ತಾದಿಗಳಿಗೆ ಶ್ರೀಗಳ ಅಂತಿಮ ದರ್ಶನ ಪಡೆಯಲು ರಾಜ್ಯ ಸರಕಾರ ಸಕಲ ಸಿದ್ಧತೆಗಳನ್ನು ಕಲ್ಪಿಸಿತ್ತು.
ಆನಂತರ, ಕತ್ರಿಗುಪ್ಪೆ ಬಳಿಯಿರುವ ಪೂರ್ಣಪ್ರಜ್ಞ ವಿದ್ಯಾಪೀಠದ ಆವರಣದಲ್ಲಿ ಪಾರ್ಥಿವ ಶರೀರವನ್ನು ಇರಿಸಿ ಗಣ್ಯರು ಅಂತಿಮ ನಮನ ಸಲ್ಲಿಸಿದರು. ಸಕಲ ಸರಕಾರಿ ಗೌರವಗಳು ಹಾಗೂ ಧಾರ್ಮಿಕ ವಿಧಿ ವಿಧಾನಗಳಂತೆ ಅವರ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕೇಂದ್ರದ ಮಾಜಿ ಸಚಿವೆ ಉಮಾಭಾರತಿ, ಸಂಸದರಾದ ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಕಟೀಲ್ ಸೇರಿದಂತೆ ಹಿರಿಯ ಸಚಿವರು, ಶಾಸಕರು, ವಿವಿಧ ಮಠಗಳ ಸ್ವಾಮೀಜಿಗಳು ವಿಶ್ವೇಶತೀರ್ಥರ ಪಾರ್ಥಿವ ಶರೀರಕ್ಕೆ ಪುಷ್ಪ ನಮನ ಸಲ್ಲಿಸಿದರು. ಪೊಲೀಸರು ಮೂರು ಸುತ್ತು ಕುಶಾಲ ತೋಪು ಹಾರಿಸುವ ಮೂಲಕ ಶ್ರೀಗಳಿಗೆ ಅಂತಿಮ ಗೌರವ ಸಲ್ಲಿಸಿದರು.
ಪೇಜಾವರ ಶ್ರೀಗಳ ಪಾರ್ಥಿವ ಶರೀರಕ್ಕೆ ಗಂಗಾ ಜಲದಿಂದ ಸ್ನಾನ ಮಾಡಿಸಿದ ಬಳಿಕ ಮಧ್ವ ಸಂಪ್ರದಾಯದಂತೆ ನಾಮ ಇಡಲಾಯಿತು. ಬಳಿಕ ಮುದ್ರೆ, ಅಕ್ಷತೆ, ಅಂಗಾರಕ, ತುಳಸಿ ವನಮಾಲೆ ಧಾರಣೆ ಮಾಡಿಸಲಾಯಿತು. ಬಳಿಕ ಕೃಷ್ಣ ಮಂದಿರದಲ್ಲಿ ದೇವರಿಗೆ ಆರತಿ ಬೆಳಗಿಸಿ, 5 5 ಅಳತೆಯ ಗುಂಡಿಯಲ್ಲಿ ಪದ್ಮಾಸನದಲ್ಲಿ ಕೂತಿರುವಂತೆ ಪಾರ್ಥಿವ ಶರೀರವನ್ನು ಇರಿಸಲಾಯಿತು.
ಪಂಚಗವ್ಯ, ಪ್ರೋಕ್ಷಣೆ, ಗೋಮಯ ಲೇಪನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ 5 ಕಲಶಗಳಿಗೆ ಗಂಗಾ ಸನ್ನಿಧಾನ ಆವಾಹಿಸಿ ಅಭಿಷೇಕ ಮಾಡಲಾಯಿತು. ಜಪಾನುಷ್ಠಾನ ಸಾಧನಗಳನ್ನು ಪಾರ್ಥಿವ ಶರೀರದ ಮುಂದಿಡಲಾಯಿತು. ನಂತರ 5 ಪ್ರಮುಖ ದ್ರವ್ಯಗಳಾದ ಉಪ್ಪು, ಸಾಸಿವೆ, ಕರ್ಪುರ, ಕರಿಮೆಣಸು, ಹತ್ತಿ ಹಾಗೂ ನೇತ್ರಾವತಿ, ಕುಮಾರಧಾರ, ಗೋದಾವರಿ, ಗಂಗಾ ನದಿ, ಕಾವೇರಿ, ಕೃಷ್ಣ, ಸ್ವರ್ಣ, ಹೇಮಾವತಿ ನದಿಗಳ ಮರಳಿನಿಂದ ಮೃತ್ತಿಕ ಅಧಿವಾಸ ನಡೆಸಿ, ಬಳಿಕ ತಲೆಯ ಮೇಲೆ ಇಷ್ಟ ಸಾಲಿಗ್ರಾಮವಿಟ್ಟು ಸಮಾಧಿ ಮಾಡಲಾಯಿತು.
ಅಂತಿಮ ನಮನ ಸಲ್ಲಿಸಿದ ಮಾಜಿ ಸಿಎಂ ಸಿದ್ದರಾಮಯ್ಯ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಶಾಸಕ ರಾಮಲಿಂಗಾರೆಡ್ಡಿ, ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಸಚಿವ ಅರವಿಂದ ಲಿಂಬಾವಳಿ, ಎಚ್.ಕೆ.ಪಾಟೀಲ್, ನಿವೃತ್ತ ಪೊಲೀಸ್ ಅಧಿಕಾರಿ ಶಂಕರ್ ಬಿದರಿ ಸೇರಿ ಹಲವರು ನ್ಯಾಷನಲ್ ಕಾಲೇಜು ಮೈದಾನಕ್ಕೆ ತೆರಳಿ ಪೇಜಾವರ ಶ್ರೀಗಳ ಅಂತಿಮ ದರ್ಶನ ಪಡೆದರು.