2001ರ ಕಾನ್ಪುರ ಗಲಭೆ ಪ್ರಕರಣ; ಎಲ್ಲ ಮುಸ್ಲಿಮರ ಖುಲಾಸೆ
ಹೊಸದಿಲ್ಲಿ: 2001ರ ಕಾನ್ಪುರ ಗಲಭೆ ಪ್ರಕರಣದ ಪ್ರಧಾನ ಆರೋಪಿಗಳಾದ ನಾಲ್ವರು ಮುಸ್ಲಿಮರ ವಿರುದ್ಧದ ಗಲಭೆ, ಹತ್ಯೆ ಹಾಗೂ ಭಯೋತ್ಪಾದನೆಯ ಎಲ್ಲ ಆರೋಪವನ್ನು ಸುಪ್ರೀಂ ಕೋರ್ಟ್ ತಳ್ಳಿ ಹಾಕಿದೆ.
ನ್ಯಾಯಾಲಯದ ಮುಂದೆ ಸಾಕಷ್ಟು ಸಾಕ್ಷ್ಯಗಳನ್ನು ನೀಡಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಸೈಯದ್ ವಾಸಿಫ್ ಹೈದರ್ ಹಾಗೂ ಇತರ ಮೂವರ ವಿರುದ್ಧದ ಉತ್ತರ ಪ್ರದೇಶ ಸರಕಾರದ ಮನವಿ ತಳ್ಳಿ ಹಾಕಿದ ನ್ಯಾಯಮೂರ್ತಿಗಳಾದ ಎನ್.ವಿ. ರಾಮಣ್ಣ ಹಾಗೂ ಮೋಹನ್ ಎಂ. ಶಾಂತನಗೌಡರ್ ಅವರನ್ನು ಒಳಗೊಂಡ ಪೀಠ, ಪೊಲೀಸ್ ತನಿಖೆಯಲ್ಲಿ ಹಲವು ನ್ಯೂನತೆಗಳಿವೆ ಎಂದು ಹೇಳಿತು.
ವಾಸಿಫ್ ಹೈದರ್ ಅವರೊಂದಿಗೆ ಹಾಜಿ ಅತೀಕ್, ಮುಮ್ತಾಝ್ ಹಾಗೂ ಸಫಾತ್ ರಸೂಲ್ ಅವರನ್ನು ಖುಲಾಸೆಗೊಳಿಸಿ ಅಲಹಾಬಾದ್ ನ್ಯಾಯಾಲಯ 2009 ಮೇ 29ರಂದು ನೀಡಿದ ತೀರ್ಪಿನಲ್ಲಿ ಯಾವುದೇ ವೈಪರಿತ್ಯ ಇಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.