ತುಮಕೂರು: ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ಸತ್ಯನಾರಾಯಣ ನಿಧನದಿಂದ ತೆರವಾಗಿದ್ದ ಶಾಸಕ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ಸಾಧಿಸಿದೆ. ಬಿಜೆಪಿ ಅಭ್ಯರ್ಥಿ ಡಾ.ರಾಜೇಶ್ ಗೌಡ 12 ಸಾವಿರದಷ್ಟು ಮತಗಳ ಅಂತರದಿಂದ ಜಯಿಸಿದ್ದಾರೆ.
ಪ್ರತೀ ಸುತ್ತಿನ ಮತ ಎಣಿಕೆಯಲ್ಲೂ ಜಿದ್ದಾಜಿದ್ದಿನ ಪೈಪೋಟಿ ನೀಡಿದ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರು ಅಂತಿಮವಾಗಿ 12 ಸಾವಿರದಷ್ಟು ಮತಗಳಿಂದ ಸೋಲೊಪ್ಪಿಕೊಂಡಿದ್ದಾರೆ. ಜೆಡಿಎಸ್ನಿಂದ ಕಣಕ್ಕಿಳಿದಿದ್ದ ಮಾಜಿ ಸಚಿವ ಸತ್ಯನಾರಾಯಣ ಅವರ ಪತ್ನಿ ಅಮ್ಮಾಜಮ್ಮ 35982 ಮತಗಳನ್ನು ಗಳಿಸಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.
ಅಂತಿಮ ಹಾಗೂ 24ನೇ ಸುತ್ತಿನ ಮತ ಎಣಿಕೆ ಪೂರ್ಣಗೊಂಡಾಗ ಬಿಜೆಪಿಯ ರಾಜೇಶ್ ಗೌಡ - 74522 ಮತ, ಕಾಂಗ್ರೆಸ್ ನ ಜಯಚಂದ್ರ - 61573 , ಜೆಡಿಎಸ್ ನ ಅಮ್ಮಾಜಮ್ಮ - 35982 ಮತ ಗಳಿಸಿದ್ದಾರೆ. 500ಕ್ಕೂ ಹೆಚ್ಚಿನ ನೋಟಾ ಚಲಾವಣೆಯಾಗಿವೆ.
ಇದುವರೆಗೆ ಜೆಡಿಎಸ್, ಕಾಂಗ್ರೆಸ್ನ ರಾಜಕೀಯ ಮೇಲಾಟಕ್ಕೆ ಸಾಕ್ಷಿಯಾಗುತ್ತಿದ್ದ ಶಿರಾ ಕ್ಷೇತ್ರದಲ್ಲಿ ಅಸ್ತಿತ್ವಕ್ಕೆ ಹೋರಾಡುತ್ತಿದ್ದ ಬಿಜೆಪಿ ಮೊದಲ ಭಾರೀ ಗೆಲುವಿನ ನಗೆ ಬೀರಿದೆ. ಮೊದಲ ಸುತ್ತಿನಿಂದಲೂ ಮುನ್ನಡೆಯನ್ನು ಸಾಧಿಸಿದ್ದ ರಾಜೇಶ್ ಗೌಡ ಅವರು ಕೊನೆಯವರೆಗೂ ಅದನ್ನು ಮುಂದುವರಿಸುವಲ್ಲಿ ಸಫಲರಾದರು. 14 ಮತ್ತು 15ನೇ ಸುತ್ತಿನಲ್ಲಿ ರಾಜೇಶ್ರ ಮತಗಳ ಪ್ರಮಾಣದ ಮುನ್ನಡೆಯಲ್ಲಿ ಏಕಾಏಕಿ ಇಳಿಕೆಯಾದರೂ ಮುಂದಿನ ಸುತ್ತುಗಳಲ್ಲಿ ಮುನ್ನಡೆಯನ್ನು ವಿಸ್ತರಿಸುತ್ತಾ ಅಂತಿಮವಾಗಿ ಗೆಲುವಿನ ನಗೆ ಬೀರುವಲ್ಲಿ ಸಫಲರಾದರು.
ಹೊಸಮುಖ ಡಾ.ರಾಜೇಶ್ ಗೌಡ ಅವರ ಗೆಲುವಿನೊಂದಿಗೆ ಬಿಜೆಪಿ ಶಿರಾ ಕ್ಷೇತ್ರವನ್ನು ಇದೇ ಮೊದಲ ಬಾರಿ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.