ಕಾಯ್ಕಿಣಿ ವಿ.ಎಸ್.ಎಸ್. ನಿರ್ದೇಶಕರ ಚುನಾವಣೆ: ಮಾಜಿ ಶಾಸಕ ಮಂಕಾಳ ವೈದ್ಯ ಸಹಿತ 11ಮಂದಿ ಹಾಲಿ ಸೊಸೈಟಿ ನಿರ್ದೇಶಕ ಮಂಡಳಿ ಪುನರ್ ಆಯ್ಕೆ'
ಭಟ್ಕಳ: ಈ ಹಿಂದೆ ನಿಗದಿ ಯಂತೆ ನಡೆಯಬೇಕಿದ್ದ
ವ್ಯವಸಾಯ ಸೇವಾ ಸಹಕಾರಿ ಸಂಘ ಕಾಯ್ಕಿಣಿಯ ಚುನಾವಣೆಯ ಗದ್ದಲ ಗಲಾಟೆ ಪೊಲೀಸ್ ಠಾಣೆ ಮೆಟ್ಟಿಲೇರಿ ದೂರು ದಾಖಲಾದ ಮುಂದುಡಲ್ಪಟ್ಟಿದ್ದ ಚುನಾವಣೆ ಭಾನುವಾರದಂದು ನಡೆದಿದ್ದು, ಭಾರಿ ಕುತೂಹಲ ತಲುಪಿದ್ದ ಚುನಾವಣೆಯಲ್ಲಿ ಸೊಸೈಟಿಯ ಹಾಲಿ ಆಡಳಿತ ಮಂಡಳಿಯಲ್ಲಿರುವ ಎಲ್ಲಾ 12 ಸದಸ್ಯರು ಮರು ಆಯ್ಕೆಯಾಗುವ ಮೂಲಕ ಶಾಸಕ ಸುನೀಲ ನಾಯ್ಕ ಗುಂಪಿಗೆ ತೀವ್ರ ಹಿನ್ನೆಡೆಯಾಗಿದೆ.
ತಾಲೂಕಿನ ಕಾಯ್ಕಿಣಿ ವ್ಯವಸಾಯ ಸೇವಾ ಸಹಕಾರಿ ಸಂಘದ ಚುನಾವಣೆಯು ಈ ಹಿಂದೆಯೇ ನಿಗದಿಯಾಗಿದ್ದರೂ ಕೂಡಾ ಮಾಜಿ ಶಾಸಕ ಮಂಕಾಳ ವೈದ್ಯ ಹಾಗೂ ಹಾಲಿ ಶಾಸಕ ಸುನಿಲ್ ನಾಯ್ಕ ಅವರ ರಾಜಕೀಯ ಆಟದಿಂದಾಗಿ ಚುನಾವಣೆಯೇ ಮುಂದೂಡಲ್ಪಟ್ಟಿತ್ತಲ್ಲದೇ ಚುನಾವಣಾಧಿಕಾರಿಯನ್ನು ಅಮಾನತ್ತು ಗೊಳಿಸಲಾಗಿತ್ತು. ಫೆ.16ರಂದು ನಡೆದ ಚುನಾವಣೆಯು ಅತ್ಯಂತ ತುರುಸಿನಿಂದ ನಡೆದಿದ್ದು ಸಹಕಾರಿ ಸಂಘದ ಚುನಾವಣೆಯಲ್ಲಿ ಶಾಸಕರು ಸ್ವತಹ ನಿಂತು ನಿರ್ವಹಿಸಿದ್ದರು. ಮತದಾನವಾಗುವ ತನಕವೂ ನಿಂತ ಶಾಸಕರ ಗುಂಪಿಗೆ ಒಂದೇ ಒಂದು ಸ್ಥಾನವೂ ದೊರಕದೇ ಇರುವುದು ತೀವ್ರ ಹಿನ್ನೆಡೆಯಾಗಿದೆ.
ಚುನಾವಣೆಯಲ್ಲಿ ಹಾಲಿ ನಿಕಟಪೂರ್ವ ಅಧ್ಯಕ್ಷ ಈಶ್ವರ ಬಿಳಿಯಾ ನಾಯ್ಕ, ಕೆ.ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಮಂಕಾಳ ಎಸ್. ವೈದ್ಯ, ಚಂದ್ರಕಾಂತ ಕುಪ್ಪಯ್ಯ ನಾಯ್ಕ, ದೀಪಕ್ ದುರ್ಗಪ್ಪ ನಾಯ್ಕ, ಪ್ರಕಾಶ ಅಣ್ಣಪ್ಪ ನಾಯ್ಕ, ಮಂಜುನಾಥ ದುರ್ಗಯ್ಯ ದೇವಡಿಗ, ಕೃಷ್ಣ ನಾರಾಯಣ ಮೊಗೇರ, ಮಂಜುನಾಥ ಬಡ್ಕ ಗೊಂಡ, ಗೋವಿಂದ ಮಾಧವ ನಾಯ್ಕ, ಮಾದೇವ ಸುಕ್ರಯ್ಯ ದೇವಡಿಗ, ಗೌರಿ ಕುಪ್ಪ ದೇವಡಿಗ, ನೇತ್ರಾವತಿ ನಾಗಪ್ಪ ನಾಯ್ಕ ಆಯ್ಕೆಯಾಗುವುದರ ಮೂಲಕ ಈ ಹಿಂದಿನ ಆಡಳಿತ ಮಂಡಳಿಯೇ ಮತ್ತೆ ಐದು ವರ್ಷಗಳ ಕಾಲ ಆಡಳಿತ ನಡೆಸುವಂತಾಗಿದೆ.
ಶಾಸಕ ಸುನೀಲ ನಾಯ್ಕ ವಿರುದ್ದ ಮೊದಲ ಬಾರಿಗೆ ಗುಡುಗಿದ ಮಾಜಿ ಶಾಸಕ ಮಂಕಾಳ ವೈದ್ಯ ಅವರ ಅಭಿಮಾನಿಗಳೊಂದಿಗೆ ಚುನಾವಣಾ ಸ್ಥಳದಿಂದ ಮನೆಯ ತನಕ ನಡೆದುಕೊಂಡೆ ಸಿಡಿಮದ್ದು ಪ್ರದರ್ಶನದೊಂದಿಗೆ ಸಂಭ್ರಮಿಸಿ ಮೆರವಣಿಗೆಯಲ್ಲಿ ಸಾಗಿದರು. ಯಾವುದೇ ವಿಧಾನಸಭಾ ಚುನಾವಣೆಗೂ ಕಡಿಮೆಯಿಲ್ಲ ಎಂಬಂತೆ ಕಾಯ್ಕಿಣಿ ಸೊಸೈಟಿ ಚುನಾವಣೆ ನಡೆದಿರುವುದು ಸತ್ಯ.