ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ಆಕಾಂಕ್ಷಿಯಾಗಿದ್ದೇನೆ : ಕೆ.ಜೆ.ನಾಯ್ಕ
ಭಟ್ಕಳ: ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ನಾನು ಪ್ರಬಲ ಆಕಾಂಕ್ಷಿಯಾಗಿದ್ದೇನೆ ಎಂದು ತಾಲೂಕಾ ಕಿಸಾನ್ ಮತ್ತು ಖೇತ್ ಮಜ್ದೂರ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಕೆ.ಜೆ.ನಾಯ್ಕ ಹೇಳಿದ್ದಾರೆ.
ಅವರು ಈ ಕುರಿತು ಲಿಖಿತ ಹೇಳಿಕೆ ನೀಡಿದ್ದು, ಕಳೆದ 30 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ನಿಷ್ಟಾವಂತ ಕಾರ್ಯಕರ್ತನಾಗಿದ್ದು, ಯೂಥ್ ಕಾಂಗ್ರೆಸ್ ಅಧ್ಯಕ್ಷನಾಗಿ, ಜಿಲ್ಲಾ ಯೂಥ್ ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಪ್ರಸ್ತುತ ಕಾಂಗ್ರೆಸ್ಸಿನ ಭಟ್ಕಳ ತಾಲ್ಲೂಕಾ ಕಿಸಾನ್ ಮತ್ತು ಖೇತ್ ಮಜ್ದೂರ್ ಸಮಿತಿಯ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ.
ಮಾರುಕೇರಿ ಗ್ರಾಮ ಪಂಚಾಯತ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿದ್ದು, ಹಾಲಿ ಮಾರುಕೇರಿಯ ಗ್ರಾಮೀಣ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕನಾಗಿಯೂ ಸೇವೆ ಸಲ್ಲಿಸುತ್ತಿದ್ದೇನೆ. ಲೋಕಸಭೆ, ವಿಧಾನಸಭೆ, ಜಿಪಂ, ತಾಪಂ, ಗ್ರಾಪಂ ಹಾಗೂ ವಿವಿಧ ಸಂಘ ಸಂಸ್ಥೆಗಳ ಚುನಾವಣೆಯಲ್ಲಿ ನಾನು ಪಕ್ಷದ ಪರವಾಗಿ ದುಡಿಯುವುದರ ಮೂಲಕ ಪಕ್ಷ ಬೆಳೆಸುವಲ್ಲಿ ಶ್ರಮಿಸಿದ್ದೇನೆ.
ನಾನು ಕಾಂಗ್ರೆಸ್ಸಿನ ಹಿರಿಯ, ಕಿರಿಯ ಕಾರ್ಯಕರ್ತರು, ಮುಖಂಡರ ಜೊತೆ ಉತ್ತಮ ಬಾಂಧವ್ಯ ಒಡನಾಟ ಹೊಂದಿದ್ದು, ಪ್ರಸ್ತುತ ಭಟ್ಕಳದಲ್ಲಿ ಖಾಲಿ ಇರುವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ದೇನೆ. ಪಕ್ಷ ನನಗೆ ಸದ್ರಿ ಹುದ್ದೆಯನ್ನು ನೀಡಿದಲ್ಲಿ ನಾನು ಪ್ರಾಮಾಣಿಕವಾಗಿ ಅದನ್ನು ನಿಭಾಯಿಸಿ, ಪಕ್ಷದ ಎಲ್ಲ ಹಿರಿಯ, ಕಿರಿಯ ಮುಖಂಡರು ಕಾರ್ಯಕರ್ತರನ್ನು ಒಗ್ಗೂಡಿಸಿಕೊಂಡು ಪಕ್ಷವನ್ನು ತಾಲೂಕಿನಲ್ಲಿ ತಳಮಟ್ಟದಿಂದ ಸಂಘಟಿಸಲು ಉತ್ಸುಕನಾಗಿದ್ದೇನೆ. ಈ ಸಂಬಂಧ ಪಕ್ಷದ ಮುಖಂಡರು, ಕಾರ್ಯಕರ್ತರು ನನಗೆ ಒತ್ತಡ ಹಾಕುತ್ತಿದ್ದಾರೆ ಎಂದು ತಿಳಿಸಿದ್ದಾರೆ.