ಲಕ್ನೋ: ಕಪ್ಪನ್ ವಿರುದ್ಧದ ಶಾಂತಿಭಂಗ ಪ್ರಕರಣ ಕೈಬಿಟ್ಟ ನ್ಯಾಯಾಲಯ
ಲಕ್ನೋ: ಕೇರಳದ ಪತ್ರಕರ್ತ ಸಿದ್ದೀಕ್ ಕಪ್ಪನ್ ಹಾಗೂ ಇತರ ಮೂವರ ವಿರುದ್ಧ ದಾಖಲಾಗಿದ್ದ ಶಾಂತಿಭಂಗ ಪ್ರಕರಣದ ವಿಚಾರಣೆಯನ್ನು ಉತ್ತರಪ್ರದೇಶದ ಮಥುರಾ ನ್ಯಾಯಾಲಯ ಕೈಬಿಟ್ಟಿದೆ ಎಂದು ವರದಿಯಾಗಿದೆ.
ಕಪ್ಪನ್ ಹಾಗೂ ಪಿಎಫ್ಐ ಸಂಘಟನೆಯ ಜೊತೆ ನಂಟು ಹೊಂದಿದ್ದಾರೆ ಎಂದು ಆರೋಪಿಸಿರುವ ಇತರ ಮೂವರ ವಿರುದ್ಧ ದಾಖಲಿಸಿರುವ ಆರೋಪದ ತನಿಖೆಯನ್ನು ನಿಗದಿತ 6 ತಿಂಗಳೊಳಗೆ ಪೂರ್ಣಗೊಳಿಸಲು ಪೊಲೀಸರು ವಿಫಲರಾಗಿರುವುದರಿಂದ ನ್ಯಾಯಾಲಯ ಈ ಆದೇಶ ನೀಡಿದೆ ಎಂದು ವರದಿ ಹೇಳಿದೆ. ಉತ್ತರಪ್ರದೇಶದ ಹಾಥರಸ್ನಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ಮೃತಪಟ್ಟ ಯುವತಿಯ ಕುಟುಂಬದವರನ್ನು ಭೇಟಿಯಾಗಲು ತೆರಳುತ್ತಿದ್ದಾಗ ಕಳೆದ ವರ್ಷದ ಅಕ್ಟೋಬರ್ 5ರಂದು ಈ ನಾಲ್ವರನ್ನು ಮಥುರಾ ಪೊಲೀಸರು ಶಾಂತಿಭಂಗಕ್ಕೆ ಪ್ರಯತ್ನಿಸಿದ ಆರೋಪದಲ್ಲಿ ಬಂಧಿಸಿದ್ದರು. ಬಳಿಕ ಇವರ ವಿರುದ್ಧ ದೇಶದ್ರೋಹ, ಭಯೋತ್ಪಾದನಾ ವಿರೋಧಿ ಕಾನೂನು ಹಾಗೂ ಮಾಹಿತಿ ತಂತ್ರಜ್ಞಾನ ಕಾನೂನಿನ ಉಲ್ಲಂಘನೆ ಆರೋಪವನ್ನೂ ದಾಖಲಿಸಿದ್ದು ಈ ಆರೋಪಗಳ ವಿಚಾರಣೆ ಚಾಲ್ತಿಯಲ್ಲಿದೆ ಎಂದು ನ್ಯಾಯಾಲಯದ ಆದೇಶ ಹೇಳಿದೆ.