ಭಟ್ಕಳ: ತಾಲೂಕಿನ ಪುರವರ್ಗದ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಭಟ್ಕಳ ಹೊನ್ನಾವರ ಕ್ಷೇತ್ರದ ಶಾಸಕ ಸುನೀಲ್ ಬಿ ನಾಯ್ಕ, ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು
ಜೀವನದಲ್ಲಿ ಒಂದು ನಿರ್ದಿಷ್ಟ ಗುರಿ ಇರಬೇಕು. ಆ ಗುರಿ ಸಾಧಿಸುವ ಛಲ ನಮ್ಮಲ್ಲಿದ್ದಾಗ ಎಂತಹ ಸಾಧನೆಯನ್ನು ಕೂಡಾ ಮಾಡಬಹುದು ಎಂದು ಹೇಳಿದರು.
ಶಾಲೆಯ ಒಟ್ಟಾರೆ ಫಲಿತಾಂಶವನ್ನು ಶ್ಲಾಘಿಸುತ್ತಾ ಸರ್ಕಾರದ ಉನ್ನತ ಹುದ್ದೆಯಲ್ಲಿರುವವರೆಲ್ಲಾ ಸಾಮಾನ್ಯವಾಗಿ ಸರ್ಕಾರಿ ಶಾಲೆಯಲ್ಲಿ ಓದಿದವರಾಗಿದ್ದಾರೆ. ಸರ್ಕಾರ ವಿದ್ಯಾರ್ಥಿಗಳಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸಿ ಕೊಡುತ್ತಿದೆ. ಅದನ್ನು ಸದುಪಯೋಗ ಪಡಿಸಿಕೊಳ್ಳುವ ವ್ಯವಸ್ಥೆ ಈ ಶಾಲೆಯಲ್ಲಿ ಆಗುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ಸರಕಾರಿ ಶಾಲೆಗಳ ಫಲಿತಾಂಶ ಪಟ್ಟಿಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಕು. ಪ್ರಿಯಾಂಕಾ ರಾಘವೇಂದ್ರ ಜೋಗಿ, ಶಾಲೆಗೆ ದ್ವಿತೀಯ ಸ್ಥಾನ ಪಡೆದ ಕು. ತೇಜಸ್ವಿನಿ ತಿಮ್ಮಪ್ಪ ಗೌಡ ಹಾಗೂ ಶಾಲೆಗೆ ತೃತೀಯ ಸ್ಥಾನ ಪಡೆದ ಕು. ಸಿಂಧು ಮಂಜುನಾಥ ಮೊಗೇರ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು
ಇನ್ನೊರ್ವ ಅತಿಥಿಗಳಾದ ಕ್ಷೇತ್ರ ಶಿಕ್ಷಣಾಧಿಕಾರಿ, ಡಿ. ಎಮ್. ಮೊಗೇರ ಮಾತನಾಡಿ, ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ವಸತಿ ಶಾಲೆಯಲ್ಲಿ ಒಂದಿಷ್ಟು ಮೂಲಭೂತ ಸೌಲಭ್ಯಗಳ ಕೊರತೆಯ ನಡುವೆಯು ವಿದ್ಯಾರ್ಥಿಗಳು ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ಸಾಧಿಸಿದಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಸತಿ ಶಾಲೆಯ ಪ್ರಾಂಶುಪಾಲರಾದ ರಮೇಶ. ಕೆ. ನಾಯ್ಕ ವಹಿಸಿದ್ದರು. ಪಾಲಕ ಪ್ರತಿನಿಧಿಗಳಾದ ಮಾಸ್ತಿ ಗೊಂಡ ಮತ್ತು ಕಟ್ಟಡದ ಮಾಲೀಕ ಈರಪ್ಪ ನಾಯ್ಕ ಗರಡೀಕರ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಗೀತ ಶಿಕ್ಷಕ ಶ್ರೀಧರ ಹೆಗಡೆ ಪ್ರಾರ್ಥಿಸಿದರು. ಇಂಗ್ಲೀಷ್ ಶಿಕ್ಷಕ ಪ್ರವೀಣ ನಾಯ್ಕ ಸ್ವಾಗತಿಸಿದರು. ವಿಜ್ಞಾನ ಶಿಕ್ಷಕ ವಿಜಯ್ ಮೊಗೇರ ಕಾರ್ಯಕ್ರಮ ನಿರುಪಿಸಿದರು. ಕೊನೆಯಲ್ಲಿ ಕನ್ನಡ ಶಿಕ್ಷಕ. ಗಿರೀಶ್ ನಾಯ್ಕ ವಂದಿಸಿದರು.