ಧಾರವಾಡ:ಹಿಂದಿ ಭಾಷೆಯ ಕಲಿಕೆಗೆ ಶಿಕ್ಷಣದಲ್ಲಿ ಹೆಚ್ಚಿನ ಮಹತ್ವ ನೀಡಬೇಕಿದೆ. ಇದರಿಂದ ಹೆಚ್ಚಿನ ವಿದ್ಯಾರ್ಥಿಗಳು ಮಾತೃ ಭಾಷೆಯ ಜೊತೆಗೆ ಹಿಂದಿ ಭಾಷೆ ಕಲಿತು, ಕೇಂದ್ರ ಸರಕಾರ ಮತ್ತು ರಾಜ್ಯ, ಹೊರರಾಜ್ಯ ಸೇರಿದಂತೆ ವಿದೇಶದಲ್ಲಿ ಉದ್ಯೋಗ ಪಡೆಯಲು ಸಹಾಯಕವಾಗಲಿದೆ ಎಂದು ಸೋನಿಯಾ ಎಜುಕೇಷನ್ ಟ್ರಸ್ಟಿನ ಅಧ್ಯಕ್ಷ ಡಾ. ಎಚ್.ವಿ. ಡಂಬಳ ಹೇಳಿದರು.
ಕೇಂದ್ರ ಸರಕಾರದ ಕ್ಷೇತ್ರ ಜನಸಂಪರ್ಕ ಕಾರ್ಯಾಲಯ ಮತ್ತು ಸೋನಿಯಾ ಪದವಿ ಪೂರ್ವ ಕಲಾ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಸಹಯೋಗದಲ್ಲಿ ಆಯೋಜಿಸಿದ್ದ ಹಿಂದಿ ದಿವಸ್ ಕುರಿತ ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಣದಲ್ಲಿ ಹಿಂದಿಯನ್ನು ಕೇವಲ ಹೆಚ್ಚುವರಿ ಭಾಷೆಯಾಗಿ ಕಲಿಕೆಗೆ ಸೀಮಿತಗೊಳಿಸದೆ, ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಹಿಂದಿ ಕಡ್ಡಾಯಗೊಳಿಸಿಬೇಕು, ಇದರಿಂದ ಮುಂದಿನ ದಿನಗಳಲ್ಲಿ ಎಲ್ಲರೂ ಹಿಂದಿ ಭಾಷೆಯನ್ನು ಅರಿಯಲಿದ್ದಾರೆ ಎಂದರು.
ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಸಹಾಯಕ ಪ್ರಾಧ್ಯಾಪಕ ಡಾ. ರಾಜಕುಮಾರ ಎಸ್ ನಾಯ್ಕ ಮಾತನಾಡಿ, ರಾಷ್ಟ್ರೀಯ ಭಾವೈಕ್ಯತೆಗೆ ಹಿಂದಿ ಭಾಷೆಯ ಕೊಡುಗೆ ಆಪಾರ. ಆದ್ದರಿಂದ ಎಲ್ಲರೂ ಹಿಂದಿ ಭಾಷೆಯನ್ನು ಕಲಿತರೆ ಸಾಮರಸ್ಯ ಹೆಚ್ಚುತ್ತದೆ ಎಂದು ತಿಳಿಸಿದರು. ಹಿಂದಿ ಭಾಷಾ ಜ್ಞಾನವಿದ್ದರೆ ದೇಶದ ಯಾವುದೇ ಭಾಗದಲ್ಲಾದರೂ ಸುಲಭವಾಗಿ ವ್ಯವಹರಿಸಬಹುದು ಮತ್ತು ಉದ್ಯೋಗ ಲಭಿಸಲಿದೆ ಎಂದರು. ಹಿಂದಿ ಭಾಷೆಯನ್ನು ರಾಷ್ಟ್ರ ಭಾಷೆಯನ್ನಾಗಿ ಜಾರಿಗೆ ತರಬೇಕಾದ ಅಗತ್ಯವಿದೆ ಎಂದರು.
ಪ್ರತಿಯೊಬ್ಬ ವಿದ್ಯಾರ್ಥಿಯು ಕನ್ನಡದ ಜೊತೆಗೆ ಹಿಂದಿ ಭಾಷೆಯನ್ನು ಮಾತನಾಡುವುದನ್ನು ಕಲಿತುಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟರು. ದೇಶದಲ್ಲಿ ಹಿಂದಿ ಭಾಷೆಯನ್ನು ಬಲವಂತವಾಗಿ ಹೇರಲಾಗುತ್ತಿದೆ ಎಂಬ ಊಹೆಯಿಂದ ಹೊರಬರಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹಿಂದಿ ಭಾಷೆಯ ಕುರಿತು ಏರ್ಪಡಿಸಲಾಗಿದ್ದ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆಯ ಕ್ಷೇತ್ರಿಯ ಜನ ಸಂಪರ್ಕ ಕಾರ್ಯಾಲಯದ ಸಿ. ಕೆ. ಸುರೇಶ, ಸೋನಿಯಾ ಎಜುಕೇಷನ್ ಟ್ರಸ್ಟಿನ ಕಾರ್ಯದರ್ಶಿ ಎಸ್. ವಿ. ಡಂಬಳ ಉಪಸ್ಥಿತರಿದ್ದರು. ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಹಿಂದಿ ಉಪನ್ಯಾಸಕಿ ಪ್ರೊ. ಲತಾ ಪಿ. ಸಣ್ಣಮನಿ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಪ್ರೊ. ಮಹಮ್ಮದ್ಗೌಸ್ ಚಾಂದನವರ ಸ್ವಾಗತಿಸಿದರು. ಪ್ರೊ. ಜಕ್ಕಪ್ಪ ಈಳಗೇರ ವಂದಿಸಿದರು.