ಭಟ್ಕಳದಲ್ಲಿ ಸೌಹಾರ್ದ ಕ್ರಿಕೆಟ್ ಪಂದ್ಯ ಗೆದ್ದ ಪತ್ರಕರ್ತರು
ಭಟ್ಕಳ: ಜೆಸಿಐ ಭಟ್ಕಳ ಇವರ ಆಶ್ರಯದಲ್ಲಿ ಇಲ್ಲಿನ ಪೊಲೀಸ್ ಮೈದಾನದಲ್ಲಿ ನಡೆದ ಸೌಹಾರ್ದ ಕ್ರಿಕೆಟ್ ಪಂದ್ಯವನ್ನು ಭಟ್ಕಳ ಪತ್ರಕರ್ತರ ತಂಡ ಗೆದ್ದುಕೊಂಡಿದೆ.
ರವಿವಾರ ನಡೆದ ಅಂತಿಮ ರೋಚಕ ಪಂದ್ಯದಲ್ಲಿ ಪತ್ರಕರ್ತರ ತಂಡವು ಸೂಪರ್ ಓವರ್ನಲ್ಲಿ ಎದುರಾಳಿ ಪೊಲೀಸ್ ತಂಡವನ್ನು ಮಣಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಮೊದಲು ಬ್ಯಾಟಿಂಗ್ ನಡೆಸಿದ ಪೊಲೀಸ್ ತಂಡವು ನಿಗದಿತ 10 ಓವರ್ಗಳನ್ನು 45 ಓಟಗಳನ್ನು ಕಲೆ ಹಾಕಿತು. 46 ಓಟಗಳ ಗುರಿಯನ್ನು ಬೆನ್ನತ್ತಿದ್ದ ಪತ್ರಕರ್ತರ ತಂಡವು ಸುಲಭದ ಗೆಲುವಿನತ್ತ ಮುಂದಡಿ ಇಟ್ಟಿತ್ತಾದರೂ ಪೊಲೀಸ್ ತಂಡದ ಉತ್ತಮ ಕ್ಷೇತ್ರ ರಕ್ಷಣೆಯಿಂದಾಗಿ 7 ಆಟಗಾರರು ರನ್ ಔಟ್ ಆಗುವುದರೊಂದಿಗೆ ಪಂದ್ಯ ರೋಚಕ ಘಟ್ಟವನ್ನು ತಲುಪಿತು. ಅಂತಿಮ ಓವರ್ನ 6 ಎಸೆತಗಳಲ್ಲಿ ಪತ್ರಕರ್ತರ ತಂಡವು ಗೆಲುವಿಗಾಗಿ 5 ಓಟಗಳನ್ನು ಗಳಿಸಬೇಕಾಗಿತ್ತು. ಆದರೆ ಪತ್ರಕರ್ತರ ತಂಡವು ಕೇವಲ 4 ಓಟವನ್ನು ಗಳಿಸಲು ಶಕ್ತವಾದ ಕಾರಣ ಪಂದ್ಯ ಟೈ ಆಗುವುದರೊಂದಿಗೆ ಸೂಪರ್ ಓವರ್ ಮೊರೆ ಹೋಗಬೇಕಾಯಿತು.
ಸೂಪರ್ ಓವರ್ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಪತ್ರಕರ್ತರ ತಂಡವು ಕೇವಲ 3 ಓಟಗಳನ್ನು ಕಲೆ ಹಾಕಿ 4 ಓಟಗಳ ಗುರಿಯನ್ನು ನೀಡಿತು. ಪತ್ರಕರ್ತರ ತಂಡದ ಕರಾರುವಾಕ್ ಬೌಲಿಂಗ್ನಿಂದ ರನ್ನಿಗಾಗಿ ತಿಣುಕಾಡಿದ ಪೊಲೀಸ್ ತಂಡದ ಆಟಗಾರರು 2 ವಿಕೆಟ್ಗಳನ್ನು ಕಳೆದುಕೊಂಡು ಗುರಿ ತಲುಪುವಲ್ಲಿ ವಿಫಲರಾದರು. ಜೆಸಿಐ ಅಧ್ಯಕ್ಷ ಅಬ್ದುಲ್ ಜಬ್ಬಾರ್, ರಮೇಶ್ ಖಾರ್ವಿ, ನಾಗರಾಜ ಶೇಟ್, ಭಟ್ಕಳ ಶಹರ ಠಾಣಾ ಎಸೈ ಕುಸುಮಾಧರ ಮೊದಲಾದವರು ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.