ಖುಂಠಿ: ಜಾರ್ಖಂಡ್ನ ನಕ್ಸಲ್ಪೀಡಿತ ಖುಂಠಿ ಜಿಲ್ಲೆಯ ಬಾಗ್ಮಾ ಗ್ರಾಮದಲ್ಲಿ ಬಿಜೆಪಿ ನಾಯಕ ಭೈಯ್ಯಾ ರಾಮ ಮುಂಡಾ(38) ಅವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆಗೈದಿದ್ದಾರೆ. ಮುಂಡಾ ಬಿಜೆಪಿಯ ಪರಿಶಿಷ್ಟ ಪಂಗಡಗಳ ಘಟಕದ ಜಿಲ್ಲಾ ಕಾರ್ಯದರ್ಶಿಯಾಗಿದ್ದರು. ಘಟನೆಯಲ್ಲಿ ಅವರ ತಾಯಿ ಅಗುನಿ ದೇವಿ ಮತ್ತು ಸೋದರ ಸಂಬಂಧಿ ಬಿರ್ಸಾ ಅವರಿಗೂ ಗುಂಡುಗಳು ತಗುಲಿ ಗಾಯಗಳಾಗಿದ್ದು,ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೊಲೆಗೆ ನಿಖರ ಕಾರಣವಿನ್ನಷ್ಟೇ ಗೊತ್ತಾಗಬೇಕಾಗಿದೆಯಾದರೂ, ಪ್ರಾಥಮಿಕ ತನಿಖೆಗಳು ನಕ್ಸಲರು ತೆರಿಗೆ ವಸೂಲಿಗೆ ಸಂಬಂಧಿಸಿದಂತೆ ಈ ಹತ್ಯೆ ನಡೆಸಿದ್ದಾರೆಂದು ಬೆಟ್ಟು ಮಾಡುತ್ತಿವೆ ಎಂದು ಪೊಲೀಸರು ತಿಳಿಸಿದರು.
ಶುಕ್ರವಾರ ರಾತ್ರಿ ಗ್ರಾಮಕ್ಕೆ ನುಗ್ಗಿದ ದುಷ್ಕರ್ಮಿಗಳ ಗುಂಪು ಮುಂಡಾರನ್ನು ಅವರ ಮನೆಯಿಂದ ಹೊರಗೆಳೆದು ತಂದು ಗುಂಡುಗಳನ್ನು ಹಾರಿಸಿ ಹತ್ಯೆಗೈದಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾಗಿ ಬಿಜೆಪಿ ಜಿಲ್ಲಾಧ್ಯಕ್ಷ ಕಾಶಿನಾಥ ಮಹತೊ ತಿಳಿಸಿದರು.