ಭಟ್ಕಳ: ಕೆನರಾ ವೆಲ್ ಫೇರ್ ಟ್ರಸ್ಟ ಅಂಕೋಲಾದ ಜನತಾ ವಿದ್ಯಾಲಯ ಮುರ್ಡೇಶ್ವರ ಶಾಲೆಯ ಸುವರ್ಣ ಮಹೋತ್ಸವ ಸಂಭ್ರಮ-2019 ಕಾರ್ಯಕ್ರಮವೂ ಡಿಸೆಂಬರ್ 15 ಮತ್ತು 16 ರಂದು ಜನತಾ ವಿದ್ಯಾಲಯ ಮುರ್ಡೇಶ್ವರ ಮೈದಾನದಲ್ಲಿ ನಡೆಯಲಿದೆ ಎಂದು ಜನತಾ ವಿದ್ಯಾಲಯ ಮುರ್ಡೇಶ್ವರ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್.ಎಸ್.ಕಾಮತ ಹೇಳಿದರು.
ಅವರು ಇಲ್ಲಿನ ಮುರ್ಡೇಶ್ವರ ಜನತಾ ವಿದ್ಯಾಲಯ ಶಾಲೆಯ ಕಛೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
‘ಕಳೆದ 4 ವರ್ಷ ಹಿಂದಿನಿಂದಲೂ ಶಾಲೆ ಅಭಿವೃದ್ದಿಪಡಿಸುತವತ್ತ ಶಾಲಾಭಿವೃದ್ಧಿ ಸಮಿತಿ ಶ್ರಮಿಸುತ್ತಾ ಬಂದಿದ್ದು ಈ ವರ್ಷ ಶಾಲೆಯ ಆರಂಭಗೊಂಡು 59ವರ್ಷ ಆಗಲಿದ್ದು ಇನ್ನು ತನಕ ಸುವರ್ಣ ಮಹೋತ್ಸವ ಆಚರಿಸಲು ಸಾಧ್ಯವಿಲ್ಲವಾಗಿತ್ತು. ಆದರೆ ಈ ವರ್ಷ ಶಾಲಾಭಿವೃದ್ಧಿ ಸಮಿತಿ ಹಾಗೂ ಶಾಲಾ ಮುಖ್ಯಾಧ್ಯಾಪಕರು, ಶಿಕ್ಷಕ ವೃಂದ, ಹಳೆ ವಿದ್ಯಾರ್ಥಿಗಳ ಸಹಕಾರ, ದಾನಿಗಳ ಸಹಕಾರದಿಂದ ಡಿಸೆಂಬರ್ 15 ಮತ್ತು 16 ರಂದು ಸುವರ್ಣ ಮಹೋತ್ಸವ ಸಂಭ್ರಮ-2019 ನಡೆಸಲು ತೀರ್ಮಾನಿಸಲಾಗಿದೆ ಎಂದ ಅವರು ಈ ಹಿಂದೆ ಶಾಲೆ ಶಿಥಿಲಾವಸ್ಥೆಗೆ ಬಂದು ತಲುಪಿದ್ದು ಒಂದು ಸಮಿತಿ ರಚನೆ ಮಾಡಿ ಶಾಲೆಯ ಅಭಿವೃದ್ಧಿಗೆ ದೇಣಿಗೆ ಸಂಗ್ರಹಕ್ಕೆ ನಿಂತಾಗ 80 ಲಕ್ಷ ರೂ. ಹಣವೂ ಸಂಗ್ರಹಗೊಂಡು ಈಗ ಸುಂದರ ಹಾಗೂ ಖಾಸಗಿ ಶಾಲೆಯನ್ನು ಮೀರಿಸುವಷ್ಟರ ಮಟ್ಟಿಗೆ ತಯಾರಾಗಿರುವದು ಸಂತಸವಾಗಿದೆ ಎಂದರು.
ಡಿಸೆಂಬರ್ 15ರಂದು ಬೆಳಿಗ್ಗೆ 10 ಗಂಟೆಗೆ ಉಜಿರೆ ಧರ್ಮಸ್ಥಳ ಶ್ರೀ ರಾಮಕ್ಷೇತ್ರದ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಮಹೋತ್ಸನ ಸಮಾರಂಭ ಉದ್ಘಾಟನೆಗೊಳ್ಳಲಿದೆ.
ಶ್ರೀಗಳಿಂದ ವಿವಿಧ ವಿಭಾಗ, ಸಭಾಭವನ, ಹಾಗೂ ಸಂಸ್ಥಾಪಕರಾದ ಡಾ.ದಿನಕರ ದೇಸಾಯಿ ಅವರ ಪುತಳಿಕೆ ಅನಾವರಣವನ್ನು ನೆರವೇರಿಸಲಿದ್ದಾರೆ. ಇದಕ್ಕೂ ಪೂರ್ವದಲ್ಲಿ ಮುರ್ಡೇಶ್ವರದ ದೇವಸ್ಥಾನದಿಂದ ಮಹಾದ್ವಾರದ ತನಕ ಚಂಡೆ, ವಾದ್ಯಗಳೊಂದಿಗೆ ಸಾಂಪ್ರದಾಯಿಕ ರೀತಿಯಲ್ಲಿ ಮೆರವಣಿಗೆ ಸಾಗಿ ಬಂದು ಬ್ರಹ್ಮಾನಂದ ಸರಸ್ವತಿ ಸ್ವಾಮಿಜಿಗಳನ್ನು ಮಹಾದ್ವಾರದಲ್ಲಿ ಸ್ವಾಗತಿಸಿ ಶಾಲೆಗೆ ಮೆರವಣಿಗೆಯ ಮೂಲಕ ಕರೆತರಲಾಗುವುದು.
ಬ್ರಹ್ಮಾನಂದ ಸರಸ್ವತಿ ಸ್ವಾಮಿಜಿಗಳ ದಿವ್ಯ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಗೌರವ ಉಪಸ್ಥಿತಿಯಾಗಿ ಶಾಸಕ ಸುನೀಲ ನಾಯ್ಕ, ಕೆನರಾ ವೆಲ್ ಫೇರ ಟ್ರಸ್ಟ ಅಂಕೋಲಾ ಅಧ್ಯಕ್ಷ ಎಸ್.ಪಿ.ಕಾಮತ, ಜನತ ವಿದ್ಯಾಲಯ ಮುರ್ಡೇಶ್ವರ ಸುವರ್ಣ ಮಹೋತ್ಸವ ಸಮಿತಿ ಗೌರವಾಧ್ಯಕ್ಷ, ಮಾಜಿ ಶಾಸಕ ಮಂಕಾಳ ವೈದ್ಯ, ಕೆನರಾ ವೆಲ್ ಫೇರ ಟ್ರಸ್ಟ ಅಂಕೋಲಾ ಕಾರ್ಯದರ್ಶಿ ಹಾಗೂ ಧರ್ಮದರ್ಶಿ ಕೆ.ವಿ.ಶೆಟ್ಟಿ, ಕೆನರಾ ವೆಲ್ ಫೇರ ಟ್ರಸ್ಟ ಅಂಕೋಲಾ ಧರ್ಮದರ್ಶಿ ಹಾಗೂ ಸಾಹಿತಿ ವಿಷ್ಣು ನಾಯ್ಕ, ಜನತಾ ವಿದ್ಯಾಲಯ ಮುರ್ಡೇಶ್ವರ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್.ಎಸ್.ಕಾಮತ, ಉಪಾಧ್ಯಕ್ಷ ಸುಬ್ರಾಯ ನಾಯ್ಕ ಹಾಗೂ ಶಾಲಾಭಿವೃದ್ಧಿ ಸಮಿತಿ ಸರ್ವ ಸದಸ್ಯರು ಉಪಸ್ಥಿತರಿರಲಿದ್ದಾರೆ.
ಮಧ್ಯಾಹ್ನ 3ಗಂಟೆಗೆ ನಡೆಯಲಿರುವ ಸಭಾ ಕಾರ್ಯಕ್ರಮವನ್ನು ಜನತ ವಿದ್ಯಾಲಯ ಮುರ್ಡೇಶ್ವರ ಸುವರ್ಣ ಮಹೋತ್ಸವ ಸಮಿತಿ ಗೌರವಾಧ್ಯಕ್ಷ, ಮಾಜಿ ಶಾಸಕ ಮಂಕಾಳ ವೈದ್ಯ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಕೆನರಾ ವೆಲ್ ಫೇರ ಟ್ರಸ್ಟ ಅಂಕೋಲಾ ಅಧ್ಯಕ್ಷ ಎಸ್.ಪಿ.ಕಾಮತ ವಹಿಸಿಕೊಳ್ಳಲಿದ್ದು, ಮುಖ್ಯ ಅತಿಥಿಗಳಾದ ಜಿ.ಪಂ. ಅಧ್ಯಕ್ಷೆ ಜಯಶ್ರೀ ಮೋಗೇರ, ಜಿ.ಪಂ. ಸದಸ್ಯೆ ಸಿಂಧು ಭಾಸ್ಕರ ನಾಯ್ಕ, ಕೆನರಾ ವೆಲ್ ಫೇರ ಟ್ರಸ್ಟ ಅಂಕೋಲಾ ಧರ್ಮದರ್ಶಿಗಳಾದ ಕೆ.ವಿ.ಶೆಟ್ಟಿ ಹಾಗೂ ವಿಷ್ಣು ನಾಯ್ಕ, ಅತಿಥಿಗಳಾಗಿ ಮುರ್ಡೇಶ್ವರದ ಜಮಾತ-ಈ- ಮುಸ್ಲೀಮಿನ್ ಅಧ್ಯಕ್ಷ ಅಮೀನ್ ಸೈಪುಲ್ಲಾ, ಮುರ್ಡೇಶ್ವರ ಎಜ್ಯುಕೇಶನ ಸೊಸೈಟಿ ಅಧ್ಯಕ್ಷ ಡಾ. ಉಸ್ಮಾನ್, ಮುರ್ಡೇಶ್ವರ ಕ್ರಿಸ್ತರಾಜ ದೇವಾಲಯದ ಫಾ. ಜೋಸೆಫ್ ಡಿಸೋಜ ಉಪಸ್ಥಿತರಿರಲಿದ್ದಾರೆ.
ಕಾರ್ಯಕ್ರಮದಲ್ಲಿ ಕುಂದಾಪುರ ಖ್ಯಾತ ಹಿರಿಯ ನ್ಯಾಯವಾದಿ ಎ.ಎಸ್.ಎನ್. ಹೆಬ್ಬಾರ, ಹೊನ್ನಾವರದ ನಿವೃತ್ತ ಉಪನ್ಯಾಸಕ ಡಾ. ಶ್ರೀಪಾದ ಶೆಟ್ಟಿ ಉಪನ್ಯಾಸ ನೀಡಲಿದ್ದಾರೆ.
ಸಂಜೆ 6 ಗಂಟೆಯಿಂದ ಪ್ರಸ್ತುತ ಶಾಲಾ ವಿದ್ಯಾರ್ಥಿಗಳಿಂದ ಹಾಗೂ ಹಳೆ ವಿದ್ಯಾರ್ಥಿಗಳಿಂದ ಮನರಂಜನಾ ಕಾರ್ಯಕ್ರಮ ನಡೆಯಲಿದೆ.
ಡಿಸೆಂಬರ್ 16ರಂದು ಬೆಳಿಗ್ಗೆ 10 ಗಂಟೆಗೆ ಶೈಕ್ಷಣಿಕ ಸಮಾವೇಶ ನಡೆಯಲಿದ್ದು ಸಮಾವೇಶವನ್ನು ಶಾಸಕ ಸುನೀಲ ನಾಯ್ಕ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಹೊನ್ನಾವರದ ರಾಜ್ಯ- ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಎಂ.ಜೆ.ಎಫ್ ಲಾಯನ್. ಎಸ್.ಜೆ.ಕೈರನ್, ತಾ.ಪಂ. ಅಧ್ಯಕ್ಷ ಈಶ್ವರ ನಾಯ್ಕ, ತಾ.ಪಂ. ಸದಸ್ಯೆ ಸುಲೋಚನಾ ನಾಯ್ಕ, ಅತಿಥಿಗಳಾಗಿ ಸಾಹಿತಿ ಹಾಗೂ ನಿವೃತ್ತ ಪ್ರಾಚಾರ್ಯ ಜಮಿರುಲ್ಲಾ ಷರೀಪ್, ಶಿಕ್ಷಕ ಹಾಗೂ ಸಾಹಿತಿ ಸಂದೀಪ್ ಭಟ್, ಕ.ಸಾ.ಪ. ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಜುನಾಥ ಎಸ್., ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್.ಮುಂಜಿ, ಹೊನ್ನಾವರ ಹಿರಿಯ ಪತ್ರಕರ್ತ ಜಿ.ಯು.ಭಟ್ ಉಪಸ್ಥಿತರಿರಲಿದ್ದಾರೆ.
ಮಧ್ಯಾಹ್ನ 3 ಗಂಟೆಗೆ ಸಮಾರೋಪ ಸಮಾರಂಭದಲ್ಲಿ ಜನತಾ ವಿದ್ಯಾಲಯ ಮುರ್ಡೇಶ್ವರ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್.ಎಸ್.ಕಾಮತ ಅಧ್ಯಕ್ಷತೆ ವಹಿಸಲಿದ್ದು, ಅತಿಥಿಗಳಾಗಿ ಮಾವಳ್ಳಿ-1 ಗ್ರಾ.ಪಂ. ಅಧ್ಯಕ್ಷೆ ಮಂಗಲಾ ನಾಯ್ಕ, ಮಾವಳ್ಳಿ-2 ಗ್ರಾ.ಪಂ. ಅಧ್ಯಕ್ಷೆ ನಾಗರತ್ನ ಮೋಗೇರ, ಉಪಾಧ್ಯಕ್ಷೆ ನಾಗರತ್ನ ಪಡಿಯಾರ, ಸೇಂಟ್ ಮಿಲಾಗ್ರೀಸ್ ವ್ಯವಸ್ಥಾಪಕ ನಿರ್ದೇಶಕ ಜಾರ್ಜ ಫರ್ನಾಂಡೀಸ್, ಶ್ರೀ ಕುಮಾರ ರೋಡ ಲೈನ್ಸ ಹೊನ್ನಾವರ ಮಾಲಕ ವೆಂಕಟರಮಣ ಹೆಗಡೆ, ಹಾಲಿಬಿಡ್ರು ಸಮಾಜ ಸೇವಕ ವಸಂತ ಚಂದಾವರಕರ ಹಾಗೂ ಮುರ್ಡೇಶ್ವರ ಖ್ಯಾತ ವೈದ್ಯ ಡಾ ಆಯ್.ಆರ್.ಭಟ್ ಉಪಸ್ಥಿತರಿರಲಿದ್ದಾರೆ.
ಸಂಜೆ 6 ಗಂಟೆಗೆ ಮನರಂಜನಾ ಕಾರ್ಯಕ್ರಮ ನಡೆಯಲಿದ್ದು ನಂತರ ಕನ್ನಡ ಕೋಗಿಲೆ ಖ್ಯಾತಿಯ ಕಲಾವತಿ ದಯಾನಂದ ಹಾಗೂ ಸಂಗಡಿಗರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜನತಾ ವಿದ್ಯಾಲಯ ಮುರ್ಡೇಶ್ವರ ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಸುಬ್ರಾಯ ನಾಯ್ಕ, ಸದಸ್ಯ ಮಂಜುನಾಥ ದೇವಾಡಿಗ, ಶಾಲಾ ಮುಖ್ಯಾಧ್ಯಾಪಕ ಟಿ.ಡಿ.ಲಮಾಣಿ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು