ಗೋ ರಕ್ಷಣೆಯ ಹೆಸರಿನಲ್ಲಿ ಹಿಂಸೆ ನಡೆಸುವವರಿಗೆ ಶಿಕ್ಷೆಯಾಗಲಿ: ಆರೆಸ್ಸೆಸ್ ನಾಯಕ ಮನಮೋಹನ್ ವೈದ್ಯ
ಜಮ್ಮು,: ಗೋಸಾಗಾಟಗಾರರ ಮೇಲಿನ ಹಲ್ಲೆ ಪ್ರಕರಣಗಳನ್ನು ರಾಜಕೀಯಗೊಳಿಸದಂತೆ ಕರೆ ನೀಡಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ, ಗೋರಕ್ಷಣೆಯ ನೆಪದಲ್ಲಿ ನಡೆಯುವ ಯಾವುದೇ ಹಿಂಸೆಯನ್ನು ಆರೆಸ್ಸೆಸ್ ಬೆಂಬಲಿಸುವುದಿಲ್ಲ ಎಂದು ಹೇಳಿದ್ದು, ಇಂತಹ ಘಟನೆಗಳಲ್ಲಿ ತಪ್ಪಿತಸ್ಥರೆಂದು ಕಂಡು ಬಂದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದಿದೆ.
"ಗೋರಕ್ಷಣೆಯ ಹೆಸರಿನಲ್ಲಿ ನಡೆಯುವ ಹಿಂಸೆಗೆ ಆರೆಸ್ಸೆಸ್ ನಂಟು ಕಲ್ಪಿಸುವ ಬದಲು ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು'' ಎಂದು ಸಂಘದ ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಮನಮೋಹನ್ ವೈದ್ಯ ಹೇಳಿದ್ದಾರೆ. ಗೋಸಾಗಾಟಗಾರರ ಮೇಲಿನ ಹಲ್ಲೆ ಪ್ರಕರಣಗಳ ಸಂಬಂಧ ವಿಪಕ್ಷಗಳು ಸರಕಾರವನ್ನು ತೀವ್ರ ಟೀಕೆಗೆ ಗುರಿಪಡಿಸಿರುವಂತಹ ಸಂದರ್ಭದಲ್ಲಿ ಆರೆಸ್ಸೆಸ್ ನಾಯಕ ಮನಮೋಹನ್ ವೈದ್ಯ ಈ ಹೇಳಿಕೆ ನೀಡಿದ್ದಾರೆ.
ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ವೈದ್ಯ, "ಆರೆಸ್ಸೆಸ್ ಯಾವುದೇ ರೀತಿಯ ಹಿಂಸೆಯನ್ನು ಬೆಂಬಲಿಸುವುದಿಲ್ಲವೆಂದು ಈ ಹಿಂದೆಯೂ ಹೇಳಿದ್ದೇವೆ, ಈಗಲೂ ಹೇಳುತ್ತಿದ್ದೇವೆ. 'ಗೋ ರಕ್ಷೆ' ಬೇರೆ ವಿಷಯ, ಗೋ ರಕ್ಷಾ ಆಂದೋಲನ ನೂರಾರು ವರ್ಷಗಳಿಂದ ನಡೆದು ಬರುತ್ತಾ ಇದೆ. ಇದೇನು ಮೊದಲ ಬಾರಿಯಲ್ಲ'' ಎಂದರು.