ಜಮ್ಮು: ಅತ್ಯಾಚಾರದಂತಹ ಹೀನ ಅಪರಾಧಗಳಿಗೆ ಯಾವುದೇ ಧರ್ಮವಿಲ್ಲ ಎಂದು ಹೇಳುತ್ತಾರೆ ಕಥುವಾ ಅತ್ಯಾಚಾರ ಕೊಲೆ ಪ್ರಕರಣದಲ್ಲಿ ಆಸಿಫಾ ಪರ ವಾದಿಸಲಿರುವ ಕಾಶ್ಮೀರಿ ಪಂಡಿತ್ ವಕೀಲೆ ದೀಪಿಕಾ ಸಿಂಗ್ ರಾಜವತ್. 38 ವರ್ಷದ ದೀಪಿಕಾ ಸಿಂಗ್ ಅವರ ಕಾಶ್ಮೀರಿ ಪಂಡಿತ್ ಕುಟುಂಬ 1986ರಲ್ಲಿ ಉತ್ತರ ಕಾಶ್ಮೀರದಿಂದ ಜಮ್ಮುವಿಗೆ ಸ್ಥಳಾಂತರಗೊಂಡಿತ್ತು.
ಆಸಿಫಾ ಅತ್ಯಾಚಾರ ಪ್ರಕರಣದಲ್ಲಿ ದೀಪಿಕಾ ಸಿಂಗ್ ರದ್ದು ಬಹುಮುಖ್ಯ ಪಾತ್ರ. ಈ ಪ್ರಕರಣವನ್ನು ಕೈಗೆತ್ತಿಕೊಂಡ ನಂತರ ಅವರಿಗೆ ಬೆದರಿಕೆಯೊಡ್ಡಲಾಗುತ್ತಿದೆ. ಎಪ್ರಿಲ್ 4ರಂದು ಜಮ್ಮು ಹೈಕೋರ್ಟ್ ಬಾರ್ ಅಸೋಸಿಯೇಶನ್ ಅಧ್ಯಕ್ಷ ಭುಪಿಂದರ್ ಸಿಂಗ್ ಸಲಥಿಯಾ ತನಗೆ ಬೆದರಿಕೆಯೊಡ್ಡಿದ್ದಾರೆ ಹಾಗೂ ನ್ಯಾಯಾಲಯಕ್ಕೆ ಹಾಜರಾಗದಂತೆ ಧಮ್ಕಿ ಹಾಕಿದ್ದಾರೆ ಎಂದು ದೀಪಿಕಾ ಆರೋಪಿಸಿದ್ದಾರೆ.
ವಿಚಾರಣಾ ನ್ಯಾಯಾಲಯಗಳ ಮಹಿಳಾ ವಕೀಲರ ಕೊಠಡಿಯಲ್ಲಿ ತನಗೆ ನೀರು ಕೂಡ ನೀಡದಂತೆ ಅಲ್ಲಿನ ಸಹಾಯಕರಿಗೆ ಹೇಳಲಾಗಿದೆ ಎಂದು ರಾಜವತ್ ಎಪ್ರಿಲ್ 9ರಂದು ತಮ್ಮ ಫೇಸ್ ಬುಕ್ ಪುಟದಲ್ಲಿ ಆರೋಪಿಸಿದ್ದರು. "ಮಹಿಳೆಯೊಬ್ಬಳಿಗೆ ಬೆದರಿಸಿದ ಮಾತ್ರಕ್ಕೆ ಆಕೆ ಹೆದರಿ ಅಡಗಿ ಕುಳಿತು ಬಿಡುತ್ತಾಳೆ ಎಂದು ಅವರು ಅಂದುಕೊಂಡಿದ್ದಾರೆ. ಆದರೆ ಈ ಮಹಿಳೆ ಹೆದರುವವಳಲ್ಲ ಎಂದು ಅವರಿಗೆ ತಿಳಿದಿಲ್ಲ. ಈ ಮಹಿಳೆ ಒಬ್ಬ ಮನುಷ್ಯಳಾಗಿರುವುದರಿಂದ ಆಕೆ ಹಿಂದೂ, ಮುಸಲ್ಮಾನ, ಮುಸ್ಲಿಂ, ಸಿಕ್ಖ್ ಯಾರಿಗೆ ಬೇಕಾದರೂ ಸಹಾಯ ಮಾಡುತ್ತಾಳೆ. ನನಗೂ ಐದು ವರ್ಷದ ಮಗಳಿದ್ದಾಳೆ, ಸಲಥಿಯಾ ಅವರ ಮನೆಯಲ್ಲೂ ಅವರ ಪುತ್ರಿಯಿದ್ದಾರೆ'' ಎಂದು ದೀಪಿಕಾ ಹೇಳುತ್ತಾರೆ.
ಕಥುವಾ ಅತ್ಯಾಚಾರ ಕೊಲೆ ಪ್ರಕರಣದಲ್ಲಿ ಆರೋಪಿಗಳನ್ನು ಹೆಡೆಮುರಿಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ ರಮೇಶ್ ಕುಮಾರ್ ಜಲ್ಲಾ ಕೂಡ ಕಾಶ್ಮೀರಿ ಪಂಡಿತ್. ಈ ಪ್ರಕರಣದಲ್ಲಿ ಹೈಕೋರ್ಟ್ ನೀಡಿದ್ದ 90 ದಿನಗಳ ಗಡುವಿಗೂ ಮೊದಲೇ ವಿಚಾರಣೆಯನ್ನು ಪೂರ್ಣಗೊಳಿಸಿ ಎಲ್ಲಾ ಆರೋಪಿಗಳನ್ನು ಬಂಧಿಸಿ ಚಾರ್ಜ್ ಶೀಟ್ ಸಲ್ಲಿಸಿದ ಇವರು ಕ್ರೈಂ ಬ್ರಾಂಚ್ ಅಧಿಕಾರಿ. ಆರೋಪಿಗಳ ರಕ್ಷಣೆಗೆ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಬಿಜೆಪಿ ನಾಯಕರಿಂದ ಈ ಪೊಲೀಸ್ ಅಧಿಕಾರಿಗೆ ಭಾರೀ ಒತ್ತಡವಿದೆ ಎನ್ನಲಾಗಿದೆ. ಆದರೆ ಇದ್ಯಾವುದಕ್ಕೂ ಜಗ್ಗದ ಅಧಿಕಾರಿ ಆರೋಪಿಗಳ ಹೆಡೆಮುರಿಕಟ್ಟಿದ್ದಾರೆ.