ಔರಂಗಾಬಾದ್: ಮಹಾರಾಷ್ಟ್ರದ ಔರಂಗಾಬಾದ್ ನಗರದಲ್ಲಿ ಗುಂಪೊಂದು ವ್ಯಕ್ತಿಯೊಬ್ಬನಿಗೆ ಥಳಿಸಿ ‘ಜೈ ಶ್ರೀ ರಾಮ್’ ಹೇಳುವಂತೆ ಬಲವಂತಪಡಿಸಿದ ಘಟನೆ ನಡೆದಿದ್ದು, ಹಿಂದೂ ದಂಪತಿಯೊಂದು ಕೂಡಲೇ ರಕ್ಷಣೆಗೆ ಧಾವಿಸಿ ಆತನ ಪ್ರಾಣವುಳಿಸಿದೆ.
ಸಂತ್ರಸ್ತ ಇಮ್ರಾನ್ ಇಸ್ಮಾಯಿಲ್ ಪಟೇಲ್ ಹೋಟೆಲ್ ಉದ್ಯೋಗಿಯಾಗಿದ್ದು, ಬೆಳಗ್ಗೆ ಮನೆಗೆ ಹಿಂದಿರುಗುತ್ತಿದ್ದಾಗ ಬೇಗಂಪುರ ಪ್ರದೇಶದ ಹುಡ್ಕೊ ಕಾರ್ನರ್ ಸಮೀಪ ಸುಮಾರು ಹತ್ತು ಮಂದಿ ದುಷ್ಕರ್ಮಿಗಳಿದ್ದ ತಂಡ ತಡೆದು ನಿಲ್ಲಿಸಿ ಥಳಿಸಿತ್ತು. ನಂತರ ಮೂರು ಬಾರಿ ‘ಜೈ ಶ್ರೀ ರಾಮ್’ ಹೇಳುವಂತೆ ಬಲವಂತಪಡಿಸಿದೆ.
ಅಲ್ಲಿಯೇ ಹತ್ತಿರದಲ್ಲಿ ವಾಸಿಸುತ್ತಿದ್ದ ಹಿಂದೂ ದಂಪತಿ ಇಸ್ಮಾಯೀಲ್ ರ ಬೊಬ್ಬೆ ಕೇಳಿ ತಮ್ಮ ಮನೆಯಿಂದ ಹೊರಗೆ ಧಾವಿಸಿ ಆತನನ್ನು ರಕ್ಷಿಸಿದ್ದಾರಲ್ಲದೆ, ಏನೂ ಮಾಡದಂತೆ ದಾಳಿಕೋರರನ್ನು ವಿನಂತಿಸಿದ್ದಾರೆ. ನಂತರ ದಾಳಿಕೋರರ ಕೈಯಲ್ಲಿದ್ದ ಇಮ್ರಾನ್ ಬೈಕ್ ನ ಕೀಯನ್ನು ದಾಳಿಕೋರರಿಂದ ಬೇಡಿ ಪಡೆದು ಅದನ್ನು ಇಸ್ಮಾಯೀಲ್ ಗೆ ಹಿಂದಿರುಗಿಸಿ ಆತ ಸುರಕ್ಷಿತವಾಗಿ ಮನೆಗೆ ತೆರಳುವಂತೆ ದಂಪತಿ ನೋಡಿಕೊಂಡಿದ್ದಾರೆ.
ತಮ್ಮ ವಿರುದ್ಧ ದಾಳಿಕೋರರು ಪ್ರತೀಕಾರ ತೆಗೆದುಕೊಳ್ಳಬಹುದೆಂಬ ಭಯದಿಂದ ಘಟನೆಯ ನಂತರ ದಂಪತಿ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ದುಷ್ಕರ್ಮಿಗಳ ವಿರುದ್ಧ ಐಪಿಸಿ ಸೆಕ್ಷನ್ 153ಎ ಹಾಗೂ 144 ಅನ್ವಯ ಪ್ರಕರಣ ದಾಖಲಿಸಲಾಗಿದೆ.