ಉಡುಪಿಯ ನೂತನ ಜಿಲ್ಲಾಧಿಕಾರಿಯಾಗಿ ಕುರ್ಮರಾವ್; ಸಿಎಂ ಜಂಟಿ ಕಾರ್ಯದರ್ಶಿಯಾಗಿ ಜಗದೀಶ್ ವರ್ಗ
ಉಡುಪಿ: ಕಳೆದ ಹಲವು ದಿನಗಳಿಂದ ಸುದ್ದಿಯಲ್ಲಿದ್ದ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರ ವರ್ಗಾವಣೆ ಆದೇಶ ಇಂದು ಹೊರಬಿದ್ದಿದ್ದು, ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಹಾಯಿ ಅವರ ಜಂಟಿ ಕಾರ್ಯದರ್ಶಿಯಾಗಿ ನೇಮಕ ಮಾಡಿ ವರ್ಗಾಯಿಸಲಾಗಿದೆ.
ಕಳೆದ ಎರಡು ವರ್ಷಗಳಿಂದ ಉಡುಪಿಯ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದ ಜಿ.ಜಗದೀಶ್ ಅವರ ಸ್ಥಾನಕ್ಕೆ ಈಗ ಕಲಬುರಗಿ ಯಲ್ಲಿ ಎನ್ಇಕೆಆರ್ಟಿಸಿಯ ಆಡಳಿತ ನಿರ್ದೇಶಕರಾಗಿರುವ ಐಎಎಸ್ ಅಧಿಕಾರಿ ಕುರ್ಮ ರಾವ್ ಎಂ. ಅವರನ್ನು ಹೊಸ ಜಿಲ್ಲಾಧಿಕಾರಿಯಾಗಿ ವರ್ಗಾಯಿಸಲಾಗಿದೆ.
ಆಂಧ್ರ ಪ್ರದೇಶದವರಾದ ಕುರ್ಮ ರಾವ್ ಅವರು ಬಿ.ಟೆಕ್ ಇಂಜಿನಿಯರಿಂಗ್ ಪದವೀಧರರಾಗಿದ್ದು, 2011ನೇ ಬ್ಯಾಚ್ನ
ಐಎಎಸ್ ಅಧಿಕಾರಿಯಾಗಿದ್ದಾರೆ. 2010ರಲ್ಲಿ ಅವರು 23ನೇ ಬ್ಯಾಂಕ್ ನೊಂದಿಗೆ ತೇರ್ಗಡೆಗೊಂಡಿದ್ದರು. ಹಿಂದೆ ಎರಡು ಬಾರಿ ಅವರು ಯುಪಿಎಸ್ಸಿಯಲ್ಲಿ ತೇರ್ಗಡೆಗೊಂಡಿದ್ದರೂ ಐಆರ್ ಎಸ್ ಹಾಗೂ ಐಪಿಎಸ್ ಹುದ್ದೆ ಪಡೆದಿದ್ದರು. ಕೊನೆಗೂ ಮೂರನೇ ಬಾರಿ ಅವರು 23ನೇ ಬ್ಯಾಂಕ್ ನೊಂದಿಗೆ ಐಎಎಸ್ ಆಗಿ ಆಯ್ಕೆಯಾಗಿದ್ದರು.
ಕುರ್ಮರಾವ್ ಅವರು 2016ರ ಜ.4ರಿಂದ 17ರ ಆ.5ರವರೆಗೆ ರಾಯಚೂರು ಜಿಪಂನ ಸಿಇಒ ಹಾಗೂ 2017ರ ಆ.4ರಿಂದ 2020ರ ಆ.27ರವರೆಗೆ ಯಾದಗಿರಿಯ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದು ಆ ಬಳಿಕ ಎನ್ಇಕೆಆರ್ಟಿಸಿಯ ಆಡಳಿತ ನಿರ್ದೇಶಕರಾಗಿ ನೇಮಕಗೊಂಡಿದ್ದರು.
41 ವರ್ಷ ಪ್ರಾಯದ ಕುರ್ಮ ರಾವ್ ಇದೀಗ ಮತ್ತೆ ಉಡುಪಿ ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ಬರುತ್ತಿದ್ದಾರೆ.