ಜ.26ರ ಹಿಂಸಾಚಾರಕ್ಕೂ ದಿಶಾ ರವಿಗೂ ನಂಟು ಕಲ್ಪಿಸಲು ಯಾವಸಾಕ್ಷಾಧಾರ ನಿಮ್ಮಬಳಿಯಿದೆ? ದಿಲ್ಲಿ ಪೊಲೀಸರಿಗೆ ನ್ಯಾಯಾಲಯದೆ ಪ್ರಶ್ನೆ

Source: VB | By S O News | Published on 21st February 2021, 1:45 PM | National News |

ಹೊಸದಿಲ್ಲಿ: ಬಂಧನದಲ್ಲಿರುವ ಪರಿಸರ ಹೋರಾಟಗಾರ್ತಿ ದಿಶಾ ರವಿಗೆ ಜ.26ರ ಹಿಂಸಾಚಾರ ದೊಂದಿಗೆ ಸಂಬಂಧವಿದೆ ಎನ್ನುವ ಯಾವ ಸಾಕ್ಷಾಧಾರ ನಿಮ್ಮ ಬಳಿಯಿದೆ ಎಂದು ಇಲ್ಲಿಯ ನ್ಯಾಯಾಲಯವೊಂದು ಶನಿವಾರ ದಿಲ್ಲಿ ಪೊಲೀಸರನ್ನು ಪ್ರಶ್ನಿಸಿತು.

ಇದಕ್ಕೂ ಮುನ್ನ ಜಾಮೀನು ಕೋರಿ ಅರ್ಜಿ ಸಲ್ಲಿಸಿದ ದಿಶಾ, ಕಳೆದ ಕೆಲವು ದಿನಗಳಲ್ಲಿ ತಾನು ಸೇರಿದಂತೆ ಮೂವರ ವಿರುದ್ಧ ದೇಶದ್ರೋಹದ ಆರೋಪವನ್ನು ಹೊರಿಸಲು ದಿಲ್ಲಿ ಪೊಲೀಸರು ಉಲ್ಲೇಖಿಸಿರುವ ಟೂಲ್ ಕಿಟ್ ಕೇವಲ ಒಂದು ಸಂಪನ್ಮೂಲ ದಾಖಲೆಯಾಗಿದೆ ಎಂದು ತಿಳಿಸಿದರು. ಇದನ್ನು ವಿರೋಧಿಸಿದ ಪೊಲೀಸರು ಅದು ದೇಶವನ್ನು ಮತ್ತು ಸೇನೆಯ ಹೆಸರು ಕೆಡಿಸಲು ವಿವಿಧ ಜಾಲತಾಣಗಳಿಗೆ ಪ್ರವೇಶದ ಹೆಬ್ಬಾಗಿಲಾಗಿದೆ ಎಂದು ವಾದಿಸಿದರು.

ದಿಶಾ ಖಾಲಿಸ್ತಾನ ಬೆಂಬಲಿತ ಪೋಯೆಟಿಕ್ ಜಸ್ಟೀಸ್ ಫೌಂಡೇಷನ್ (ಪಿಜೆಎಫ್) ಜೊತೆ ನಿಕಟವಾಗಿ ಗುರುತಿಸಿಕೊಂಡಿರುವ ಟೂಲ್ ಕಿಟ್ ಪ್ರಕರಣದಲ್ಲಿ ಈವರೆಗೆ ಬಂಧಿಸಲ್ಪಟ್ಟಿರುವ ಏಕೈಕ ವ್ಯಕ್ತಿಯಾಗಿದ್ದಾರೆ.

ಆರೋಪಿಯು ಸಾಕ್ಷ್ಯಾಧಾರ ಗಳನ್ನು ನಾಶಗೊಳಿಸಲು ಪ್ರಯತ್ನಿಸಿದರೆ ಜಾಮೀನನ್ನು ನಿರಾಕರಿಸಬಹುದು ಎಂದು ವಾದಿಸಿದ ಪೊಲೀಸರು ತನಿಖೆಯಲ್ಲಿ ಸಹಕರಿಸಲು ದಿಶಾ ನಿರಂತರವಾಗಿ ನಿರಾಕರಿಸುತ್ತಿದ್ದಾರೆ. ಅವರ ಲ್ಯಾಪ್ ಟಾಪ್ ಇತ್ಯಾದಿಗಳನ್ನು ವಿಧಿವಿಜ್ಞಾನ ತಜ್ಞರಿಗೆ ಕಳುಹಿಸಲಾಗಿದೆ. ಅವುಗಳಲ್ಲಿದ್ದ ವಿಷಯಗಳನ್ನು ಅಳಿಸಲಾಗಿದೆ ಎನ್ನುವುದನ್ನು ಪ್ರಾಥಮಿಕ ತನಿಖೆಗಳು ತೋರಿಸಿವೆ. ವಿಚಾರಣೆಯಿನೂ ಪ್ರಾಥಮಿಕ ಹಂತದಲ್ಲಿದೆ ಮತ್ತು ಸಾಕ್ಷ್ಯಾಧಾರಗಳು ನಾಶವಾಗಿವೆ ಎಂದು ತಿಳಿಸಿದರು.

ಕೆಟ್ಟ ಚರಿತ್ರೆಯನ್ನು ಹೊಂದಿರುವವರನ್ನು ಭೇಟಿಯಾದ ಮಾತ್ರಕ್ಕೆ ವ್ಯಕ್ತಿಯು ತಪ್ಪು ಉದ್ದೇಶಗಳನ್ನು ಹೊಂದಿದ್ದಾನೆ ಎಂದು ಹೇಳಲು ಸಾಧ್ಯವೇ ಎಂದು ನ್ಯಾ.ಧರ್ಮೇಂದ್ರ ರಾಣಾ ಪ್ರಶ್ನಿಸಿದಾಗ,  ಪೊಲೀಸರು “ಮೋ' ಧಾಲಿವಾಲ್ ಬಗ್ಗೆ ಎಲ್ಲರಿಗೂ ಗೊತ್ತು. ಅಂತಹ ವ್ಯಕ್ತಿಯನ್ನು ಭೇಟಿಯಾಗಲು ನೀವೂ ಬಯಸುವುದಿಲ್ಲ ಎಂದು ಉತ್ತರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ. ರಾಣಾ, ಈ ಧಾಲಿವಾಲ್ ಯಾರು ಎನ್ನುವುದು ತನಗೆ ಗೊತ್ತಿಲ್ಲ ಎಂದರು.

ಧಾಲಿವಾಲ್ ಪಿಜೆಎಫ್‌ನ ಸ್ಥಾಪಕನಾಗಿದ್ದು, ದಿಶಾ ಆತನೊಂದಿಗೆ, ವಿಶೇಷವಾಗಿ ಟೂಲ್ಕಿಟ್ ರಚನೆ ಸಂದರ್ಭದಲ್ಲಿ ಸಂಪರ್ಕದಲ್ಲಿದ್ದರು ಎನ್ನುವುದು ಪೊಲೀಸರ ಆರೋಪವಾಗಿದೆ.

ಜ.26ರ ಹಿಂಸಾಚಾರಕ್ಕೂ ದಿಶಾರಿಗೂ ಸಂಬಂಧವಿದೆ ಎನ್ನುವುದಕ್ಕೆ ಯಾವ ಸಾಕ್ಷ್ಯಾಧಾರ ನಿಮ್ಮ ಬಳಿಯಿದೆ ಎಂಬ ನ್ಯಾಯಾಧೀಶರ ಪ್ರಶ್ನೆಗೆ, ಒಳಸಂಚಿನಲ್ಲಿ ಪ್ರತಿಯೊಬ್ಬರೂ ಒಂದೇ ಪಾತ್ರವನ್ನು ಹೊಂದಿರುವುದಿಲ್ಲ. ಟೂಲ್‌ಕಿಟ್‌ನಿಂದ ಪ್ರಭಾವಿತರಾದ ಯಾರೋ ಹಿಂಸಾಚಾರವನ್ನು ಪ್ರಚೋದಿಸಿರಬಹುದು ಮತ್ತು ಅದರಲ್ಲಿ ತೊಡಗಿಸಿಕೊಂಡಿರಬಹುದು ಎಂದು ಪೊಲೀಸರು ಉತ್ತರಿಸಿದರು.

ಈ ಉತ್ತರದಿಂದ ತೃಪ್ತಿಗೊಳ್ಳದ ನ್ಯಾಯಾಧೀಶರು, ನೇರ ಸಂಬಂಧವನ್ನು ಸಾಬೀತುಗೊಳಿಸುವ ಟೂಲ್‌ಕಿಟ್‌ನ ವಿಷಯವನ್ನು ತೋರಿಸುವಂತೆ ದಿಲ್ಲಿ ಪೊಲೀಸರ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ಗೆ ಸೂಚಿಸಿದರು.

ಅದರಲ್ಲಿ ಒದಗಿಸಲಾಗಿರುವ ಬಾಹ್ಯ ಕೊಂಡಿಯು ನರಮೇಧದ ಬಗ್ಗೆ ಹೇಳುತ್ತಿದೆ ಎಂದು ಪ್ರಾಸಿಕ್ಯೂಷನ್ ಉತ್ತರಿಸಿದಾಗ ನ್ಯಾ.ರಾಣಾ ಅವರು, ಯಾವುದೇ ನೇರ ಸಂಬಂಧವಿದೆಯೇ ಅಥವಾ ನಾವು ಹಾಗೆಂದು ಊಹಿಸಬೇಕೇ ಎಂದು ಪ್ರಶ್ನಿಸಿದರು. 

ದಿಶಾ ಅರ್ಜಿಯ ವಿಚಾರಣೆ ಸಂದರ್ಭ ನ್ಯಾಯಾಲಯವು ಏನಿದು ಟೂಲ್‌ಕಿಟ್, ಆರೋಪಿ ಜಾಮೀನು ಅರ್ಜಿ ಸಲ್ಲಿಸುವುದನ್ನು ತಡೆದ ಕಾನೂನಿನ ನಿರ್ಬಂಧ ಯಾವುದು,ಪ್ರಾಸಿಕ್ಯೂಷನ್ ನಿರೂಪಣೆ ಏನು,ದಿಶಾ ವಿರುದ್ಧ ಆರೋಪಗಳೇನು,ಅವರ ವಿರುದ್ಧ ಸಾಕ್ಷ್ಯಗಳೇನು ಎಂಬ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿತು.

ನ್ಯಾಯಾಲಯವು ದಿಶಾರ ಅರ್ಜಿಯ ಮೇಲೆ ತೀರ್ಪನ್ನು ಫೆ.23ಕ್ಕೆ ಕಾಯ್ದಿರಿಸಿ ಆದೇಶಿಸಿತು.

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...