ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಅಧ್ಯಕ್ಷ ಜನರಲ್ ಪರ್ವೇಝ್ ಮುಶರ್ರಫ್ 2007ರಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಿರುವುದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ, ಅವರನ್ನು ಬಂಧಿಸುವಂತೆ ಹಾಗೂ ಅವರ ಎಲ್ಲ ಆಸ್ತಿಗಳನ್ನು ಮುಟ್ಟುಗೋಲು ಹಾಕುವಂತೆ ವಿಶೇಷ ನ್ಯಾಯಮಂಡಳಿಯೊಂದು ಸರಕಾರಕ್ಕೆ ಆದೇಶಿಸಿದೆ.
ತುರ್ತು ಪರಿಸ್ಥಿತಿ ಹೇರಿದ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಅಧ್ಯಕ್ಷರ ವಿರುದ್ಧ ದಾಖಲಾದ ದೇಶದ್ರೋಹ ಪ್ರಕರಣದ ವಿಚಾರಣೆಯನ್ನು ಪೇಶಾವರ ಹೈಕೋರ್ಟ್ನ ಮುಖ್ಯ ನ್ಯಾಯಾಧೀಶ ಯಾಹ್ಯಾ ಅಫ್ರಿದಿ ನೇತೃತ್ವದ ಮೂವರು ಸದಸ್ಯರ ಪೀಠವು 8 ತಿಂಗಳ ಅವಧಿಯಲ್ಲಿ ಮೊದಲ ಬಾರಿಗೆ ನಡೆಸಿತು.
74 ವರ್ಷದ ಮುಶರ್ರಫ್ ವಿರುದ್ಧ ದೇಶದ್ರೋಹ ಪ್ರಕರಣದಲ್ಲಿ 2014ರ ಮಾರ್ಚ್ನಲ್ಲಿ ದೋಷಾರೋಪ ಹೊರಿಸಲಾಗಿತ್ತು.
ತುರ್ತು ಪರಿಸ್ಥಿತಿ ಹೇರಿದ ಬಳಿಕ, ಸುಪ್ರೀಂ ಕೋರ್ಟ್ನ ನ್ಯಾಯಾಧೀಶರನ್ನು ಗೃಹಬಂಧನದಲ್ಲಿರಿಸಲಾಗಿತ್ತು ಹಾಗೂ 100ಕ್ಕೂ ಅಧಿಕ ನ್ಯಾಯಾಧೀಶರನ್ನು ವಜಾಗೊಳಿಸಲಾಗಿತ್ತು.
2016 ಮಾರ್ಚ್ನಲ್ಲಿ ಪಾಕಿಸ್ತಾನದಿಂದ ದುಬೈಗೆ ಹೊರಟ ಮುಶರ್ರಫ್ರನ್ನು 2016 ಮೇ ತಿಂಗಳಲ್ಲಿ ಘೋಷಿತ ಅಪರಾಧಿ ಎಂಬುದಾಗಿ ಘೋಷಿಸಲಾಗಿತ್ತು.
ದೇಶದ್ರೋಹ ಅಪರಾಧಕ್ಕೆ ಸಾಮಾನ್ಯವಾಗಿ ಪಾಕಿಸ್ತಾನದಲ್ಲಿ ಮರಣದಂಡನೆ ಅಥವಾ ಆಜೀವ ಕಾರಾಗೃಹ ವಿಧಿಸಲಾಗುತ್ತದೆ.