ಇಸ್ಲಾಮಾಬಾದ್: ಮುಂಬೈ ಸ್ಫೋಟ ಪ್ರಕರಣದ ರೂವಾರಿ ಹಾಗೂ ಜಮಾತ್-ಉದ್-ದವಾ (ಜೆಯುಡಿ) ಮುಖ್ಯಸ್ಥ ಹಫೀಜ್ ಮುಹಮ್ಮದ್ ಸಯೀದ್ ವಿರುದ್ಧ ಸದ್ಯವೇ ಎಫ್ಐಆರ್ ದಾಖಲಿಸಲಾಗುವುದು ಎಂದು ಉನ್ನತ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ.
ಭಯೋತ್ಪಾದನಾ ವಿರೋಧಿ ಕಾನೂನಿನ ಅನ್ವಯ ಈಗಾಗಲೇ ಹಫೀಜ್ ಗೃಹಬಂಧನದಲ್ಲಿದ್ದಾನೆ. ಇದು ಮುಂಬೈ ದಾಳಿ ಪ್ರಕರಣವನ್ನು ಭೇದಿಸುವಲ್ಲಿ ಮಹತ್ವದ ಹೆಜ್ಜೆಯಾಗಲಿದೆ. ಇದಕ್ಕೆ ಇತರ ಮೂಲಭೂತವಾದಿ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥ ಸೈಯದ್ ಸಲಾಹುದ್ದೀನ್, ಪಾಕ್ ಸರಕಾರದ ಕ್ರಮವನ್ನು "ನೋವಿನ ಸಂಗತಿ" ಎಂದು ಬಣ್ಣಿಸಿದ್ದಾರೆ. ಹಫೀಜ್ ವಿರುದ್ಧ ಕ್ರಮಕ್ಕೆ ಮುಂದಾಗುವ ಮುನ್ನ ಎಲ್ಲ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಖುರ್ರಂ ದಸ್ತಗೀರ್ ಖಾನ್ ಹೇಳಿದ್ದಾರೆ. ಆತನ ವಿರುದ್ಧದ ಆರೋಪಗಳೇನು ಎನ್ನುವುದು ಸದ್ಯದಲ್ಲೇ ಬಹಿರಂಗವಾಗಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಜೆಯುಡಿ ಹಾಗೂ ಎಫ್ಐಎಫ್ (ಫಲಾಹ ಐ ಇನ್ಸಾನಿಯತ್) ಸಂಘಟನೆಗಳ ಇನ್ನಷ್ಟು ಮುಖಂಡರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪಂಜಾಬ್ ಕಾನೂನು ಸಚಿವ ರಾಣಾ ಸನಾವುಲ್ಲಾ ಪ್ರಕಟಿಸಿದ್ದಾರೆ.
ಜೆಯುಡಿ ಸಂಘಟನೆಯ ವಕ್ತಾರ ಮುಜಾಹಿದ್, ತಮ್ಮ ಮುಖಂಡನ ಗೃಹಬಂಧನವನ್ನು ಖಚಿತಪಡಿಸಿದ್ದು, "ಹಫೀಜ್ ಮುಕ್ತವಾಗಿದ್ದುದು ಭಾರತ ಹಾಗೂ ಅಮೆರಿಕಕ್ಕೆ ತಲೆನೋವಾಗಿತ್ತು. ಭಾರತವನ್ನು ಓಲೈಸುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.