ಭಟ್ಕಳ : ಫೆಬ್ರವರಿ 20, 2020 ಗುರುವಾರದಂದು ಸ್ಥಳೀಯ ಅಂಜುಮನ್ ಪದವಿ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದಲ್ಲಿ ಅಂತರ್ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ ನಡೆಯಲಿದೆ.
‘ಭಾರತದ ಆರ್ಥಿಕ ಕುಸಿತ : ಕಾರಣಗಳು ಮತ್ತು ಪರಿಹಾರೋಪಾಯಗಳು’ ಎಂಬ ವಿಷಯದ ಮೇಲೆ ನಡೆಯಲಿರುವ ಈ ವಿಚಾರಸಂಕಿರಣವು ಕಾಲೇಜಿನ ಸಭಾಭವನದಲ್ಲಿ ಬೆಳಿಗ್ಗೆ 09 ಗಂಟೆಗೆ ಆರಂಭವಾಗಲಿದೆ. ಅಂಜುಮನ್ ಸಂಸ್ಥೆಯ ಅಧ್ಯಕ್ಷರಾದ ಜನಾಬ್ ಅಬ್ದುಲ್ ರಹೀಮ್ ಜುಕಾಕು ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ವಿಚಾರ ಸಂಕಿರಣದಲ್ಲಿ ದೇಶ ವಿದೇಶದ ವಿಷಯತಜ್ಞರು ಭಾಗವಹಿಸಲಿದ್ದಾರೆ.
ಕರ್ನಾಟಕ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ಎಸ್. ಟಿ. ಬಾಗಲಕೋಟಿಯವರು ವಿಚಾರಸಂಕಿರಣವನ್ನು ಉದ್ಘಾಟಿಸಲಿದ್ದಾರೆ. ಯುಎಇ ದುಬಾಯಿಯ ಸೇಲ್ಸ್ ಸಪೋರ್ಟ್ ಅಂಡ್ ಆಫರೇಟಿವ್ ಮ್ಯಾನೇಜರ್ ಜನಾಬ್ ಮೋಹಿದ್ದೀನ್ ರುಕ್ನುದ್ದೀನ್ ಮುಖ್ಯ ಅತಿಥಿಯಾಗಿ ಆಗಮಿಸುತ್ತಾರೆ. ಸಂಪನ್ಮೂಲ ವ್ಯಕ್ತಿಗಳಾಗಿ ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ರವೀಂದ್ರನಾಥ ಕದಮ್, ಯುಎಇ ದುಬೈ ಸರಕಾರದ ನಾಲೇಜ್ ಅಂಡ್ ಹುಮನ್ ಡೆವಲಪ್ಮೆಂಟ್ ಅಥಾರಟಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಜನಾಬ್ ಮೌಜ್ ಶಾಬಂದ್ರಿ, ಮಹಾರಾಷ್ಟ್ರ ಕೊಲ್ಲಾಪುರ ವಿಶ್ವವಿದ್ಯಾಲಯದ ವಾಣಿಜ್ಯಶಾಸ್ತ್ರದ ಪ್ರಾಧ್ಯಾಪಕರಾದ ಡಾ. ಅಣ್ಣಾಸಾಹೇಬ್ ಗುರವ ಆಗಮಿಸಲಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಮತ್ತು ಹೊರ ಜಿಲ್ಲೆಯ ಪದವಿ ಕಾಲೇಜಿನ ಉಪನ್ಯಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಅಂತರ್ರಾಷ್ಟ್ರೀಯ ಮಟ್ಟದ ಈ ವಿಚಾರ ಸಂಕಿರಣದ ಪ್ರಯೋಜನ ಪಡೆದುಕೊಳ್ಳುವುದರ ಜೊತೆಗೆ ತಮ್ಮ ಅಮೂಲ್ಯ ವಿಚಾರಗಳನ್ನು ಪ್ರಬಂಧ ರೂಪದಲ್ಲಿ ಮಂಡಿಸಬೇಕೆಂದು ಕಾಲೇಜಿನ ಪ್ರಾಚಾರ್ಯ ಪ್ರೊ. ಮುಸ್ತಾಕ್ ಕೆ. ಶೇಖ ಮತ್ತು ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ದೇವಿದಾಸ ಪ್ರಭು ಕೋರಿದ್ದಾರೆ.