ಹಾಸನ:ಕೋವಿಡ್-19 ಸೋಂಕಿತರಿಗೆ ಪರಿಣಾಮಕಾರಿ ಚಿಕಿತ್ಸೆ ನೀಡಿ ಮರಣ ಪ್ರಮಾಣ ಕಡಿಮೆ ಮಾಡುವಂತೆ ಹಾಗೂ ಎಲ್ಲಾ ಪ್ರಾಥಮಿಕ ಸಂಪರ್ಕಿತರನ್ನು ಪತ್ತೆಹಚ್ಚಿ ಪರೀಕ್ಷೆಗೆ ಒಳಪಡಿಸುವಂತೆ ಎಂದು ರಾಜ್ಯ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ್ ಭಾಸ್ಕರ್ ಅವರು ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.
ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಕೋವಿಡ್-19 ತಡೆಗಟ್ಟುವ ಕುರಿತು ವಿಡಿಯೋ ಸಂವಾದ ನಡೆಸಿ ಮಾತನಾಡಿದ ಅವರು ಹೊರ ರಾಜ್ಯದಿಂದ ಬಂದ ಎಲ್ಲರನ್ನೂ ಪತ್ತೆಮಾಡಿ ಪರೀಕ್ಷೆ ಮಾಡಿ. ಅದರೊಂದಿಗೆ ಜಿಲ್ಲೆಯಲ್ಲಿರುವ ಐ.ಎಲ್.ಐ. ಹಾಗೂ ಸಾರಿ ಪ್ರಕರಣಗಳನ್ನು ಹೆಚ್ಚು ಹೆಚ್ಚು ಪತ್ತೆ ಹಚ್ಚಿ ಪರೀಕ್ಷೆಗೆ ಒಳಪಡಿಸಬೇಕು ಎಂದರು.
ಐ.ಎಲ್.ಐ ಹಾಗೂ ಸಾರಿ ಪ್ರಕರಣಗಳ ಗಂಟಲ ದ್ರವ ಮಾದರಿಯನ್ನು ಸಂಗ್ರಹಿಸುವ ಆಸ್ಪತ್ರೆಯ ಸಿಬ್ಬಂದಿಗಳು ಪರೀಕ್ಷೆಗೆ ಒಳಪಡಿಸಿದವರ ದೂರವಾಣಿ ಸಂಖ್ಯೆ ಮತ್ತು ಪೂರ್ಣ ವಿಳಾಸವನ್ನು ಕಡ್ಡಾಯವಾಗಿ ನೊಂದಾಯಿಸಿಕೊಂಡು ನಂತರ ಪರೀಕ್ಷಿಸಿ ಹಾಗೂ ಮಾಹಿತಿ ನೀಡುವಂತೆ ಸೂಚನೆ ನೀಡಿ ಎಂದು ಅವರು ಸೂಚಿಸಿದರು.
ಜಿಲ್ಲೆಯಲ್ಲಿನ ದೊಡ್ಡ ದೊಡ್ಡ ಮಾಲ್ಗಳ ಕ್ಯಾಷಿಯರ್ಗಳು ಮತ್ತು ಸಿಬ್ಬಂಧಿಗಳು, ಎ.ಪಿ.ಎಂ.ಸಿ ಹಾಗೂ ಇತರ ಮಾರುಕಟ್ಟೆ ತರಕಾರಿ ವ್ಯಾಪಾರಸ್ಥರು ಹಾಗೂ ಹಣ್ಣಿನ ಅಂಗಡಿಗಳ ಮಾಲೀಕರು ಮತ್ತು ಕೆಲಸಗಾರರನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಿ ಹಾಗೂ ಅವರೆಲ್ಲರಿಗೂ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚನೆ ನೀಡಿ ಎಂದು ಟಿ.ಎಂ. ವಿಜಯ್ ಭಾಸ್ಕರ್ ಅವರು ಎಲ್ಲಾ ಜಿಲ್ಲಾಧಿಕಾರಿಗಳಿಗೆ ನಿರ್ದೇಶಿಸಿದರು.
ಕೊರೋನಾ ಸೋಂಕಿತರು ಹಾಗೂ ಆಸ್ಪತ್ರೆಯಿಂದ ಗುಣ ಮುಖರಾಗಿ ಬಿಡುಗಡೆ ಹೊಂದಿದವರ ಅಕ್ಕ ಪಕ್ಕದ ಮನೆಗಳ ಜನರನ್ನೂ ಕೋವಿಡ್-19 ಪರೀಕ್ಷೆಗೆ ಒಳಪಡಿಸುವಂತೆ ಎಂದು ಅವರು ಹೇಳಿದರು.
ಕೋವಿಡ್-19 ಸಮಯದಲ್ಲಿ ತೊಂದರೆಗೊಳಗಾದ ಕ್ಷೌರಿಕರು ಹಾಗೂ ಮಡಿವಾಳ ಸಮಾಜದವರಿಗೆ ಮುಖ್ಯಮಂತ್ರಿಯವರು 5,000 ರೂ. ಪರಿಹಾರ ಪ್ಯಾಕೇಜ್ ಘೋಷಿಸಿದ್ದು, ಸೇವಾ ಸಿಂಧು ಆಪ್ ಮೂಲಕ ಹಾಗೂ ಕಾರ್ಮಿಕ ಇಲಾಖೆಯಲ್ಲಿ ಅರ್ಜಿ ಪಡೆದ ಎಲ್ಲಾ ಅರ್ಹರ ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ ನಂತರ ಹಣ ದೊರೆಯುವಂತೆ ಮಾಡಿ ಎಂದು ಅವರು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ವೀಡಿಯೋ ಸಂವಾದದ ನಂತರ ಜಿಲ್ಲಾಧಿಕಾರಿ ಆರ್. ಗಿರಿಶ್ ಅವರು ಮಾತನಾಡಿ ಕೋವಿಡ್-19 ಸೋಂಕಿತರು ಮನೆಗಳಿಗೆ ಹೋಗಿದ್ದರೆ ಅಂತಹವರ ಸುತ್ತ ಮುತ್ತಲ ಮನೆಯವರು ಹಾಗೂ ಐ.ಎಲ್.ಐ ಲಕ್ಷಣಗಳಿರುವವರಿಗೆ ಕೋವಿಡ್-19 ಪರೀಕ್ಷೆಗೆ ಒಳಪಡಿಸಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯವರಿಗೆ ಸೂಚಿಸಿದರು.
ಕೋವಿಡ್-19 ಸೋಂಕಿತರ ಪ್ರಾಥಮಿಕ ಸಂಪರ್ಕಿತರನ್ನು ಶೀಘ್ರವಾಗಿ ಸರ್ವೇ ಮಾಡಿ ಪರೀಕ್ಷೆಗೆ ಒಳಪಡಿಸಿ ಎಂದು ಅವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯವರಿಗೆ ಅವರಿಗೆ ನಿರ್ದೇಶಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ, ಅಪರ ಜಿಲ್ಲಾಧಿಕಾರಿ ಕವಿತ ರಾಜಾರಾಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಸತೀಶ್, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ|| ಕೃಷ್ಣ ಮೂರ್ತಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಬಿ.ಎ. ಜಗದೀಶ್ ಮತ್ತಿತರ ಅಧಿಕಾರಿಗಳು ವೀಡಿಯೋ ಸಂವಾದದಲ್ಲಿ ಹಾಜರಿದ್ದರು.