ಹಾಸನ:ಸರ್ಕಾರದ ಹಣ ಮತ್ತು ಸರ್ಕಾರಿ ಜಾಗಗಳ ದುರುಪಯೋಗವಾಗದಂತೆ ನಿಗಾವಹಿಸಬೇಕಿದೆ ಎಂದು ಶಾಸಕರಾದ ಹೆಚ್.ಡಿ. ರೇವಣ್ಣವರು ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ರಾಷ್ಟ್ರೀಯ ಹೆದ್ದಾರಿ ಮತ್ತು ಹೊಳೆನರಸೀಪುರ ರೈಲ್ವೇ ಅಂಡರ್ಪಾಸ್ ನಿರ್ಮಾಣ ಕುರಿತು ನಡೆದ ಸಭೆಯಲ್ಲಿ ಮಾತನಾಡಿದ ಅವರು ಯಾವುದೇ ಅಭಿವೃದ್ಧಿ ಕೆಲಸಕ್ಕಾಗಿ ಬಂದ ಹಣವನ್ನು ಸಮರ್ಪಕವಾಗಿ ಮತ್ತು ಪಾರದರ್ಶಕವಾಗಿ ಬಳಕೆ ಮಾಡಬೇಕೆಂದು ತಿಳಿಸಿದರು.
ಮೊಸಳೆಹೊಸಳ್ಳಿ ಬಳಿ ರಸ್ತೆ ಸುಂಕ ವಸೂಲು ಕೇಂದ್ರ ನಿರ್ಮಾಣವಾಗುತ್ತಿದ್ದು, ಭೂ ಸ್ವಾಧೀನವಾಗುತ್ತಿರುವ ರೈತರ ಜಾಗಕ್ಕೆ ಗರಿಷ್ಠ ಮಟ್ಟದ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಯವರು ಗಮನಹರಿಸುವಂತೆ ಅವರು ಹೇಳಿದರು. ಅಲ್ಲದೆ, ಭೂ ಸ್ವಾಧೀನಕ್ಕೆ ಅಡ್ಡಿಪಡಿಸುತ್ತಿದ್ದರೆ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಜಾಗವನ್ನು ಸ್ವಾಧೀನಕ್ಕೆ ಪಡೆಯುವಂತೆ ಅವರು ತಿಳಿಸಿದರು.
ಹೊಳೆನರಸೀಪುರ ರೈಲ್ವೇ ನಿಲ್ದಾಣ ಮತ್ತು ಬಸ್ನಿಲ್ದಾಣದ ಬಳಿಯಲ್ಲಿ ಅಂಡರ್ಪಾಸ್ ನಿರ್ಮಿಸುವ ಸಂಬಂಧ ತ್ವರಿತವಾಗಿ ಕಾರ್ಯಾರಂಭಿಸುವಂತೆ ಅವರು ಹೇಳಿದರು.
ಜಿಲ್ಲಾಧಿಕಾರಿ ಆರ್ ಗಿರೀಶ್ ಅವರು ಮಾತನಾಡಿ ಮೊಸಳೆ ಹೊಸಳ್ಳಿ ಟೋಲ್ ಸಂಗ್ರಹ ಕೇಂದ್ರ ನಿರ್ಮಾಣಕ್ಕಾಗಿ ಭೂ ಸ್ವಾಧೀನವಾಗಿರುವ ಭೂಮಿಗೆ ತ್ವರೀತವಾಗಿ ದರ ನಿಗದಿಪಡಿಸಿ ರೈತರಿಗೆ ಅನುಕೂಲ ಮಾಡಲಾಗುವುದು ಎಂದರಲ್ಲದೆ, ಯೋಜನೆಗಳಿಗೆ ಅನುಸಾರವಾಗಿ ಕಾಮಗಾರಿಗಳು ಶೀಘ್ರವಾಗಿ ನಡೆಯಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಬೇಲೂರು ಕ್ಷೇತ್ರದ ಶಾಸಕರಾದ ಲಿಂಗೇಶ್, ಉಪವಿಭಾಗಾಧಿಕಾರಿ ಡಾ|| ನವೀನ್ಭಟ್, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ಮಂಜು, ಪಿ.ಆರ್.ಇ.ಡಿ. ಕಾರ್ಯಪಾಲಕ ಇಂಜಿನಿಯರ್ ಆನಂದ್ಕುಮಾರ್ ಇತರರಿದ್ದರು.