ಹಾಸನ: ಸಕಾಲ ಸೇವಾ ಅರ್ಜಿಗಳನ್ನು ಆನ್ಲೈನ್ ಮೂಲಕವೇ ಭರ್ತಿಗೊಳಿಸಬೇಕು. ಅರ್ಜಿ ವಿಲೇವಾರಿಯಲ್ಲಿ ಮಧ್ಯವರ್ತಿಗಳಿಗೆ ಅವಕಾಶ ನೀಡಬಾರದೆಂದು ಸಕಾಲ ಮಿಷನ್ನ ಆಡಳಿತಾಧಿಕಾರಿ ಕೆ.ಮಥಾಯಿ ಅವರು ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ತಹಸೀಲ್ದಾರ್ಗಳೊಡನೆ ವಿಡೀಯೋ ಸಂವಾದ ನಡೆಸಿ ಅಧಿಕಾರಿಗಳೊಂದಿಗೆ ಮಾತನಾಡಿದ ಅವರು ಬಾಕಿ ಉಳಿದ ಎಲ್ಲಾ ಸಕಾಲ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಬೇಕು. ಆಯಾ ದಿನಗಳಲ್ಲಿಯೇ ಅರ್ಜಿಗಳನ್ನು ಪರಿಷ್ಕರಿಸಿ ಗಣಕೀಕರಣ ಮಾಡಬೇಕು. ಈ ಸಂಬಂದ ಎಲ್ಲಾ ಇಲಾಖೆಗಳು ಸಕಾಲದ ಸಂಪೂರ್ಣ ಮಾಹಿತಿ ಒಳಗೊಂಡಂತಹ ನಾಮಫಲಕಗಳನ್ನು ಕಡ್ಡಾಯವಾಗಿ ಅಳವಡಿಸಿಬೇಕು ಎಂದು ತಿಳಿಸಿದರು.
ನಿಖರ ಅಥವಾ ಸ್ಪಷ್ಟವಾದ ಕಾರಣಗಳಿಲ್ಲದೆ ಸಕಾಲ ಅರ್ಜಿಗಳನ್ನು ತಿರಸ್ಕರಿಸುವಂತಿಲ್ಲ, ತಿರಸ್ಕರಿಸುವ ಅರ್ಜಿಗಳನ್ನು ಕಡಿಮೆ ಮಾಡಿ ಸೂಕ್ತ ರೀತಿಯಲ್ಲಿ ಸತ್ಯಾಸತ್ಯತೆ ಮಾಹಿತಿಯನ್ನು ಪಡೆದ ನಂತರವೇ ಅರ್ಜಿಯನ್ನು ತಿರಸ್ಕರಿಸಬೇಕು ಎಂದು ಕೆ.ಮಥಾಯಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
ನಾಗರೀಕರಿಂದ ಸ್ವೀಕರಿಸಿದ ಎಲ್ಲಾ ಅರ್ಜಿಗಳಿಗೂ ಸ್ವೀಕೃತಿ ರಶೀದಿ ಕೊಡಬೇಕು ಮತ್ತು ಅರ್ಜಿದಾರರಿಗೆ ಯಾವುದೇ ರೀತಿಯ ಸೇವೆ ವಿಳಂಬ ಸಲ್ಲದು. ಪ್ರತಿ ತಾಲ್ಲೂಕುಗಳಲ್ಲಿಯೂ ತಹಸೀಲ್ದಾರ್ ಹಾಗೂ ಸಂಬಂಧಿಸಿದ ಇಲಾಖಾಧಿಕಾರಿಗಳು ಈ ಬಗ್ಗೆ ಹೆಚ್ಚಿನ ನಿಗಾವಹಿಸಬೇಕು ಈ ಸಂಬಂಧ ಯಾವುದೇ ರೀತಿಯ ತಾಂತ್ರಿಕ ಸಮಸ್ಯೆಗಳಿದ್ದಲ್ಲಿ ತಕ್ಷಣ ಜಿಲ್ಲೆಯ ಡಿ.ಎ.ಡಿ.ಸಿ ಗಳ ಗಮನಕ್ಕೆ ತರಬೇಕು ಎಂದು ಅವರು ನಿರ್ದೇಶನ ನೀಡಿದರು.
ಪ್ರಭಾರ ಅಪರ ಜಿಲ್ಲಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಡಾ ಎಚ್.ಎಲ್.ನಾಗರಾಜ್ ಅವರು ಮಾತನನಾಡಿ ಹಾಸನ ಜಿಲ್ಲೆಯು ಪ್ರಸ್ತುತ ರಾಜ್ಯದಲ್ಲಿ ಎಲ್ಲ ಇಲಾಖೆಗಳಲ್ಲಿ 6 ನೇ ರ್ಯಾಂಕ್ ನಲ್ಲಿದೆ. ಕಂದಾಯ ಇಲಾಖೆಯಲ್ಲಿ 3 ನೇ ರ್ಯಾಂಕ್ ನಲ್ಲಿದೆ ಇದನ್ನು 1 ನೇ ರ್ಯಾಂಕ್ಗೆ ತರಲು ಎಲ್ಲರೂ ಪ್ರಯತ್ನಿಸಬೇಕು ಹಾಗೂ ಈ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾರ್ಗದರ್ಶನ ನೀಡಿದರು.
ಎಲ್ಲಾ ಸರ್ಕಾರಿ ಇಲಾಖೆಗಳಲ್ಲಿ ಕಡ್ಡಾಯವಾಗಿ ಸಕಾಲದ ನಾಮಫಲಕಗಳನ್ನು ಹಾಕಬೇಕು ಮತ್ತು ಅವುಗಳನ್ನು ಪೋಟೋ ಸಮೇತ ದಾಖಲು ಮಾಡಿ ಜಿಲ್ಲಾಧಿಕಾರಿಗಳಿಗೆ ತಲುಪಿಸಬೇಕು ಎಂದು ಹೇಳಿದರು.
ಸಕಾಲ ಯೋಜನೆಯಲ್ಲಿ ಉತ್ತಮವಾಗಿ ಕೆಲಸ ಮಾಡಿದವರಿಗೆ ಪ್ರಶಂಸಾ ಪತ್ರವನ್ನೂ ನೀಡುವುದಾಗಿ ಕೆಲಸ ಮಾಡದವರಿಗೆ ಶಿಸ್ತು ಕ್ರಮದ ಜೊತೆಗೆ ಪ್ರತೀ ಪ್ರಕರಣಕ್ಕೆ ಪ್ರತಿ ದಿನಕ್ಕೆ ರೂ. 20.- ದಂಡ ವಿಧಿಸಿ ವಸೂಲು ಮಾಡಲಾಗುವುದೆಂದು ತಿಳಿಸಿದರು.
ಸಮರ್ಪಕವಾಗಿ ಸಕಾಲ ಅರ್ಜಿ ವಿಲೇವಾರಿಯಾಗಬೇಕು. ಪ್ರತಿದಿನದ ಮಾಹಿತಿಯನ್ನು ಜಿಲ್ಲಾಡಳಿತದ ಗಮನಕ್ಕೆ ತರಬೇಕು. ಈ ಸಂಬಂಧ ಅಧಿಕಾರಿಗಳ ಲೋಪದೋಷ ಕಂಡುಬಂದಲ್ಲಿ ಅವರುಗಳ ಬಗ್ಗೆ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಶಿರಸ್ತೆದಾರ ರಮೇಶ್ ಮತ್ತಿತರರು ವಿವಿಧ ಇಲಾಖಾ ಅಧಿಕಾರಿಗಳು ಹಾಜರಿದ್ದರು.