ಮಂಗಳೂರು : ಹಸಿರು ನ್ಯಾಯ ಪೀಠದಲ್ಲಿ ವಿಚಾರಣಾ ಹಂತದಲ್ಲಿರುವ ಮೂಲ ಅರ್ಜಿ ಸಂಖ್ಯೆ 360/2018 ಕ್ಕೆ ಸಂಬಂಧಿಸಿದಂತೆ ಜಿಲ್ಲೆಗೆ ಸಂಬಂಧಿಸಿದ ಸಮಗ್ರ ಜಿಲ್ಲಾ ಪರಿಸರ ಯೋಜನೆಯನ್ನು ತಯಾರಿಸಿ ಸಲ್ಲಿಸುವ ಸಂಬಂಧ ಸೆಪ್ಟೆಂಬರ್ 13ರ ಸೋಮವಾರದಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ.ಕೆ.ವಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು.
ಜಿಲ್ಲಾಧಿಕಾರಿ ಡಾ. ರಾಜೇಂದ್ರ.ಕೆ.ವಿ ಅವರು ಮಾತನಾಡಿ, ಜಿಲ್ಲಾ ಪರಿಸರ ಯೋಜನೆಯನ್ನು ತಯಾರಿಸಲು ಸಂಬಂಧಿಸಿದ ಇಲಾಖೆಗಳಿಂದ ಮಾಹಿತಿ ಕ್ರೋಢಿಕರಿಸಿ ಯೋಜನೆಯನ್ನು ಕಾರ್ಯಗತಗೊಳಿಸಬೇಕೆಂದರಲ್ಲದೇ ಈ ಕಾರ್ಯ ಯೋಜನೆಯನ್ನು ತಯಾರಿಸಿ ಅದರ ಅನುಷ್ಠಾನಕ್ಕೆ ಬೇಕಾದ ಸಮಯವನ್ನು ನಿರ್ಧರಿಸಿ ಸಲ್ಲಿಸುವಂತೆ ಸೂಚಿಸಿದರು.
ಘನ ತ್ಯಾಜ್ಯ ನಿರ್ವಹಣಾ ನಿಯಮಗಳ ಅಡಿಯಲ್ಲಿ ಈಗಾಗಲೇ ಕೈಗೊಂಡ ಕ್ರಮಗಳ ಬಗ್ಗೆ ಮತ್ತು ಆಗಬೇಕಾಗಿರುವ ಕಾರ್ಯಕ್ರಮಗಳನ್ನು ಜಿಲ್ಲಾ ಪರಿಸರ ಯೋಜನೆಯಲ್ಲಿ ಸೇರಿಸುವಂತೆ ಎಲ್ಲಾ ಸ್ಥಳೀಯ ಸಂಸ್ಥೆಗಳ ಮುಖ್ಯ ಅಧಿಕಾರಿಗಳಿಗೆ ಮತ್ತು ಜಿಲ್ಲಾ ಪಂಚಾಯತ್ ಅಧಿಕಾರಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ವಾಯುಮಾಲಿನ್ಯ, ಶಬ್ದ ಮಾಲಿನ್ಯಗಳ ನಿಯಂತ್ರಣ, ಘನ ತ್ಯಾಜ್ಯ ಹಾಗೂ ನಗರ ತ್ಯಾಜ್ಯ ನೀರಿನ ನಿರ್ವಹಣೆ, ಜೀವ ವೈದ್ಯಕೀಯ ತ್ಯಾಜ್ಯಗಳ ನಿರ್ವಹಣೆ, ಜಲ ಮೂಲಗಳ ರಕ್ಷಣೆ ಹಾಗೂ ಈ ಕಾರ್ಯಯೋಜನೆಗಳ ಅನುಷ್ಠಾನಗಳಲ್ಲಿ ಕಂಡು ಬಂದ ಕೊರತೆ ಮತ್ತು ಅದರಲ್ಲಿನ ನ್ಯೂನತೆಗಳ ಬಗ್ಗೆ ಸಮಗ್ರವಾಗಿ ಚರ್ಚಿಸಲಾಯಿತು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪಶು ವೈದ್ಯಕೀಯ ಇಲಾಖೆ, ಪೊಲೀಸ್ ಇಲಾಖೆ, ಜಿಲ್ಲಾ ಪಂಚಾಯತ್, ಲೋಕೋಪಯೋಗಿ ಇಲಾಖೆ, ಪ್ರಾದೇಶಿಕ ಸಾರಿಗೆ ಇಲಾಖೆ ಅರಣ್ಯ ಇಲಾಖೆ, ಒಳಚರಂಡಿ ಮಂಡಳಿ, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ಅವರ ಇಲಾಖೆಗಳ ಮಾಹಿತಿಗಳನ್ನು ಜಿಲ್ಲಾ ಪರಿಸರ ಯೋಜನೆಯಲ್ಲಿ ಕ್ರೋಢೀಕರಿಸಿ ಸಲ್ಲಿಸುವಂತೆ ಸೂಚಿಸಿದರು.