ಸುರತ್ಕಲ್ ಸಮುದ್ರಕ್ಕೆ ಕೊಳಚೆ ನೀರಿನ ಪೈಪ್ ಅಳವಡಿಕೆ. ಸ್ಥಳಕ್ಕೆ ಮೇಯರ್ ದಿವಾಕರ್ ಪಾಂಡೇಶ್ವರ್ ಭೇಟಿ. ಪೈಪ್ ಸಂಪರ್ಕ ಕಡಿತಗೊಳಿಸಲು ಅಧಿಕಾರಿಗಳಿಗೆ ಸೂಚನೆ.
ಸುರತ್ಕಲ್ : ಸುರತ್ಕಲ್ ನ ಇಡ್ಯಾ, ಗುಡ್ಡೆಕೊಪ್ಲದ ಬಳಿ ಸುರತ್ಕಲ್ ನ ನಗರ ಭಾಗದಲ್ಲಿರುವ ಕೆಲವು ಖಾಸಗಿ ಅಪಾರ್ಟ್ ಮೆ೦ಟ್ ಗಳ ಕೊಳಚೆ ನೀರನ್ನು ಪೈಪ್ ಮುಖಾಂತರ ಇಡ್ಯಾ, ಗುಡ್ಡೆಕೊಪ್ಲ ಪರಿಸರದ ಕಡಲ ತೀರಕ್ಕೆ ನೇರವಾಗಿ ಬಿಡಲಾಗುತ್ತಿದೆ.
ಕೊಳಚೆ ನೀರು, ತೋಡಿನ ನೀರನ್ನು ಸೇರಿ ಕಲುಷಿತಗೊಳಿಸುತ್ತಿದ್ದು ರಾತ್ರೋ ರಾತ್ರಿ ಅಪಾರ್ಟ್ ಮೆ೦ಟ್ ಮುಖಾಂತರ ಕೊಳಚೆ ನೀರಿನ ಪೈಪ್ ನ್ನು ಇಡ್ಯಾ, ಗುಡ್ಡೆಕೊಪ್ಲ ಮನೆಯ ಪರಿಸರದ ಮುಖಾಂತರ ಸಮುದ್ರ ತೀರದ ಡಾಮರು, ಕಾ೦ಕ್ರೀಟ್ ರಸ್ತೆಯ ನಡುವೆಯೇ ಕೊರೆದು ಬಳಿಕ ತಿಳಿಯದಂತೆ ರಸ್ತೆ ಉಬ್ಬುಗಳನ್ನು ನಿರ್ಮಿಸಿ ಸಮುದ್ರ ಕಿನಾರೆಯ ತೋಡುಗಳಿಗೆ ಬಿಡಲಾಗುತ್ತಿದೆ ಎಂದು ದೂರಲಾಗಿದೆ.
ಸ್ಥಳೀಯ ನಿವಾಸಿಗಳು ಧ್ವನಿಯೆತ್ತಿದ್ದು ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳಿಗೆ, ಮಂಗಳೂರು ಮಹಾನಗರ ಪಾಲಿಕೆ ದೂರು ನೀಡಿದನ್ವಯ ಬುಧವಾರದಂದು ಮೇಯರ್ ದಿವಾಕರ್ ಪಾಂಡೇಶ್ವರ್ ಅವರು ಇಡ್ಯಾ ಪರಿಸರಕ್ಕೆ ಭೇಟಿ ನೀಡಿದರು. ಇಡ್ಯಾ, ಗುಡ್ಡೆಕೊಪ್ಲದ ಭಾಗದ ಸ್ಥಳೀಯರು ಸಮುದ್ರಕ್ಕೆ ಬಿಡುವ ಕೊಳಚೆ ನೀರಿನ ಪೈಪ್ ಸಂಪರ್ಕ ಹಾಗೂ ಹರಿಯ ಬಿಡುವ ನೀರನ್ನು ಹಾಗೂ ರಸ್ತೆಯನ್ನು ಅಗೆದು ಉಬ್ಬು ನಿರ್ಮಿಸಿದನ್ನು ಇಡ್ಯಾ ಗುಡ್ಡೆಕೊಪ್ಲ ನಾಗರಿಕ ಹೋರಾಟ ಸಮಿತಿಯ ಸದಸ್ಯರು ಹಾಗೂ ಸ್ಥಳೀಯರು ಮೇಯರ್ ಗೆ ತಿಳಿಸಿ ಅದನ್ನು ತೆರವುಗೊಳಿಸುವಂತೆ ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿದ ಮೇಯರ್ ಬಳಿಕ ಸ್ಥಳೀಯ ಮನಪಾ ಅಧಿಕಾರಿಗಳಿಗೆ ತಕ್ಷಣವೇ ಈ ಎಲ್ಲಾ ಅಕ್ರಮ ಪೈಪ್ ಗಳ ಸಂಪರ್ಕವನ್ನು ತೆಗಿಸಿಬಿಡಬೇಕು. ಅಲ್ಲದೇ ರಸ್ತೆಯ ಉಬ್ಬನ್ನು ಕೂಡಾ ತೆಗೆದು ಹಾಕುವಂತೆ ಸೂಚಿಸಿದರು. ಮೇಯರ್ ನ ಸೂಚನನ್ವಯ ಕಾರ್ಯತತ್ಪರಾದ ಅಧಿಕಾರಿಗಳು ಮಧ್ಯಾಹ್ನದ ಒಳಗೆ ರಸ್ತೆಯ ಉಬ್ಬನು ತೆಗೆದುಹಾಕಿದ್ದು ಸಮುದ್ರಕ್ಕೆ ಬಿಡುವ ಕೊಳಚೆ ನೀರಿನ ಪೈಪ್ ಸಂಪರ್ಕವನ್ನು ಕಡಿತಗೊಳಿಸುವುದಾಗಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮನಪಾ ಉಪಮೇಯರ್ ವೇದಾವತಿ ಕುಳಾಯಿ, ಸ್ಥಳೀಯ ಮನಪಾ ಸದಸ್ಯೆ ನಯನಾ ಆರ್ ಕೋಟ್ಯಾನ್, ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್ ಕುಮಾರ್ ಕೋಡಿಕಲ್ ಹಾಗೂ ಗುಡ್ಡೆಕೊಪ್ಲ, ಇಡ್ಯಾ ಸುರತ್ಕಲ್ ನಾಗರಿಕ ಹೋರಾಟ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.