ಮಂಡ್ಯ : ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಯುವಕರಿಗೆ ತಿಳಿಸಿ ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಮಾಡಬೇಕು ಮತ್ತು ಗ್ರಾಮೀಣ ಭಾಗದ ಯುವಕರನ್ನು ವಿವಿಧ ಅಭಿಯಾನ ಮತ್ತು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಿ ಎಂದು ಅಪರ ಜಿಲ್ಲಾಧಿಕಾರಿ ವಿ.ಆರ್ ಶೈಲಜಾ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನೆಹರು ಯುವ ಕೇಂದ್ರದ ವತಿಯಿಂದ ನಡೆದ ಜಿಲ್ಲಾ ಯುವ ಕಾರ್ಯಕ್ರಮಗಳ ಸಲಹಾ ಸಮಿತಿಯ ಸಭೆಯಲ್ಲಿ ಮಾತನಾಡಿದ ಅವರು, ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಸರ್ಕಾರದ ಯೋಜನೆಗಳು ಮತ್ತು ವಿವಿಧ ಸೌಲಭ್ಯಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ ಎಂದರು.
ಕರೋನಾ ವೈರಸ್ ಕುರಿತು ಜನರು ನಿರ್ಲಕ್ಷ್ಯ ಭಾವನೆ ತೋರುತ್ತಿದ್ದು, ಮಾಸ್ಕ್ ಧರಿಸುವಿಕೆ, ಸ್ಯಾನಿಟೈಸರ್ ಬಳಕೆ, ಸಾಮಾಜಿಕ ಅಂತರ ಪಾಲನೆ ಕುರಿತು ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.
ಗ್ರಾಮೀಣ ಭಾಗದ ಯುವಕರಿಗೆ ತಂತ್ರಜ್ಞಾನ ಬಳಕೆ ಬಗ್ಗೆ ಅರಿವು ಮೂಡಿಸಿ.
ಯುವಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಿ, ಪ್ರಶಸ್ತಿಗಳನ್ನು ನೀಡಿ. ಶ್ರಮಧಾನ್ , ಸ್ವಚ್ಛ ಭಾರತ್ ಮಿಷನ್ ಯಡಿಯಲ್ಲಿ ಶ್ರಮದಾನ, ಸ್ವಚ್ಚತಾ ಕಾರ್ಯಗಳನ್ನು ಕೈಗೊಳ್ಳಬೇಕು. ಸಾಮಾಜಿಕ ಕಾರ್ಯದಲ್ಲಿ ಯೂತ್ ಕ್ಲಬ್, ಎನ್.ಎಸ್.ಎಸ್ ನವರನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಿ ಎಂದರು.
ಅಜಾದಿ ಕಾ ಅಮೃತ್ ಮಹೋತ್ಸವ ಪ್ರಯುಕ್ತ ರಾಷ್ಟ್ರ ವ್ಯಾಪಿ ಫಿಟ್ ಇಂಡಿಯಾ ಫ್ರೀಡಂ ರನ್ 2.0 ನಡೆಯುತ್ತಿದ್ದು, ಪ್ರತಿವಾರ ಕಾರ್ಯಕ್ರಮಗಳು 75 ಜಿಲ್ಲೆಗಳಲ್ಲಿ ಮತ್ತು 75 ಹಳ್ಳಿಗಳಲ್ಲಿ ಅಕ್ಟೋಬರ್ 2 ವರೆಗೆ ಪ್ರತಿ ಜಿಲ್ಲೆಗಳಲ್ಲಿ ನಡೆಯಲಿದೆ ಎಂದರು.
ಇದೇ ಕಾರ್ಯಕ್ರಮವೂ ಸೆಪ್ಟೆಂಬರ್ 25 ರಂದು ಜಿಲ್ಲಾಡಳಿತ, ಜಿ.ಪಂ, ನೆಹರು ಯುವ ಕೇಂದ್ರ, ಎನ್.ಎಸ್.ಎಸ್, ಎನ್.ಸಿ.ಸಿ , ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ,ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸ್ಕೌಟ್ಸ್ ಮತ್ತು ಗೈಡ್ಸ್ ,ಎನ್ ಜಿ ಒ ಮತ್ತು ಯುವಜನ ಸಂಘಟನೆ ಹಾಗೂ ಜಿಲ್ಲೆಯ ವಿವಿಧ ಸಂಘಟನೆಗಳ ಸಹಕಾರದಿಂದ ನಡೆಯಲಿದೆ ಎಂದರು.
ನೆಹರು ಯುವಕೇಂದ್ರದ ಯುವ ಅಧಿಕಾರಿಗಳು 2021-22 ವಾರ್ಷಿಕ ಕ್ರಿಯಾಯೋಜನೆ ಕುರಿತು ಸಭೆಯಲ್ಲಿ ವಿವರಿಸಿದರು.
ಸಭೆಯಲ್ಲಿ ಜಿ.ಪಂನ ಕಾರ್ಯದರ್ಶಿ ಧನರಾಜ್, ನೆಹರು ಯುವ ಕೇಂದ್ರದ ಯುವ ಅಧಿಕಾರಿ ವಿನಯ್ ಕುಮಾರ್ , ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉದಯಕುಮಾರ್, ವಾರ್ತಾಧಿಕಾರಿ ಟಿ.ಕೆ ಹರೀಶ್, ಜಿಲ್ಲಾ ಕೈಗಾರಿಕಾ ಕೇಂದ್ರದ ಶಿವಲಿಂಗಯ್ಯ, ಜಿಲ್ಲಾ ಕ್ಷಯಾರೋಗ ಮತ್ತು ಏಡ್ಸ್ ನಿಯಂತ್ರಣಾಧಿಕಾರಿಗಳಾದ ಡಾ.ಅನಿಲ್ ಕುಮಾರ್ , ನೆಹರು ಯುವಕೇಂದ್ರದ ಲೆಕ್ಕಾಧಿಕಾರಿ ಹೆಚ್ .ಎಂ. ಬಸವರಾಜು ಹಾಗೂ ಮತ್ತಿತರರು ಉಪಸ್ಥಿತರಿದ್ದರು