ಭಟ್ಕಳ : ಮುರ್ಡೇಶ್ವರದ ಮಾವಳ್ಳಿ-2 ಗ್ರಾ.ಪಂ. ವ್ಯಾಪ್ತಿಯ ದೀವಗೇರಿ-1 ಅಂಗನವಾಡಿಯನ್ನು ಮೂಲತ: ಮುರ್ಡೇಶ್ವರ ಮೂಲದ ಹಾಲಿ ಬೆಂಗಳೂರು ಉತ್ತರದ ಡೆಲ್ಲಿ ಪಬ್ಲಿಕ್ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿನಿ ಸೋನಾಲ್ ಕಲ್ಯಾಣಪುರ ಎನ್ನುವವರು ದಾನಿಗಳ ಸಹಕಾರದಿಂದ ನವೀಕರಣಗೊಳಿಸಿ ಉದ್ಘಾಟಿಸಿದರು.
ನಂತರ ಮಾತನಾಡಿದ ಸೋನಾಲ್, ಅಂಗನವಾಡಿಗಳಲ್ಲಿಯೂ ಗುಣಮಟ್ಟದ ಶಿಕ್ಷಣ ಸಿಗಬೇಕು ಎನ್ನುವುದು ನನ್ನ ಆಶಯವಾಗಿದೆ. ಆ ನಿಟ್ಟಿನಲ್ಲಿ ಸಂಕಲ್ಪ ಪ್ರೊಜೆಕ್ಟ್ ಅಡಿಯಲ್ಲಿ ದಾನಿಗಳ ಸಹಾಯ ಮತ್ತು ತಂದೆ, ತಾಯಿ ಕುಟುಂಬದವರ ಸಹಕಾರದಿಂದ 2.5 ರೂ.ಲಕ್ಷ ವೆಚ್ಚದಲ್ಲಿ ದೀವಗೇರಿ-1 ಅಂಗನವಾಡಿಗೆ ಅಗತ್ಯವಿರುವ ಮೂಲಭೂತ ಸೌಕರ್ಯ ಒದಗಿಸಿ ನವೀಕರಿಸಲಾಗಿದೆ. ಅಂಗನವಾಡಿಗಳು ಗ್ರಾಮೀಣ ಭಾಗದಲ್ಲಿ ಚಿಕ್ಕ ಮಕ್ಕಳ ಕಲಿಕೆಗೆ ಹಾಗೂ ಸರಿಯಾದ ವಯಸ್ಸಿಗೆ ಕಲಿಕೆ ಆರಂಭಿಸಲು ಸಹಾಯಕವಾಗಿದೆ. ಕಳೆದೊಂದು ವರ್ಷದ ಹಿಂದೆ ತಾನು 1ಎಂ1ಬಿ ಸೇರಿದಾಗಿನಿಂದ ಗ್ರಾಮೀಣ ಭಾಗದ 3ರಿಂದ 6 ವರ್ಷದ ಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕು ಎನ್ನುವ ಉದ್ದೇಶದಿಂದ ಅಂಗನವಾಡಿಗಳನ್ನು ಮೇಲ್ದರ್ಜೆಗೇರಿಸುವ ಪಣ ತೊಟ್ಟಿದ್ದೇನೆ ಎಂದರು.
ಈ ವೇಳೆ ಉಪಸ್ಥಿತರಿದ್ದ ಸೋನಾಲ್ ತಂದೆ ಅಶ್ವಿನ್ ಕಲ್ಯಾಣಪುರ್ ಮಾತನಾಡಿ, 10ನೇ ತರಗತಿ ಓದುತ್ತಿರುವ ಮಗಳು ಸೋನಾಲ್, ಮುರ್ಡೇಶ್ವರ ಭಾಗದ ದೀವಗೇರಿ-1, ಮಾವಳ್ಳಿ-2ರಲ್ಲಿನ ಅಂಗನವಾಡಿಗಳನ್ನು ಆರಿಸಿಕೊಂಡಿದ್ದು ಇದನ್ನು ಮಾದರಿ ಅಂಗನವಾಡಿಗಳನ್ನಾಗಿಸುವ ಗುರಿಯನ್ನು ಹೊಂದಿದ್ದಾರೆ. ಸಂಕಲ್ಪ ಪ್ರೊಜೆಕ್ಟ್ ಮೂಲಕ ದಾನಿಗಳ ಸಹಕಾರದಿಂದ ಅಂಗನವಾಡಿಗಳನ್ನು ನವೀಕರಿಸಿ ಮೂಲ ಸೌಕರ್ಯದಂತಹ ಶುದ್ಧ ಕುಡಿಯುವ ನೀರು, ಅಡುಗೆ ಮನೆಯಲ್ಲಿ ಅಗತ್ಯ ವ್ಯವಸ್ಥೆ, ಕಲಿಕೆಗೆ ಡೆಸ್ಕುಗಳು, ಕುರ್ಚಿಗಳು, ಸುರಕ್ಷಿತ ಆರೋಗ್ಯಕರ ವಾತಾವರಣ ನಿರ್ಮಾಣ ಮಾಡುವುದು ಈಕೆಯ ಉದ್ದೇಶವಾಗಿದೆ. ಅಂಗನವಾಡಿಗಳನ್ನು ಮಾದರಿ ಮಾಡಲು ಊರಿನವರ ಸಹಾಯ ಸಹಕಾರದ ಅಗತ್ಯವಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾವಳ್ಳಿ ಗ್ರಾ.ಪಂ-2 ಇದರ ಅಧ್ಯಕ್ಷ ಮಹೇಶ ನಾಯ್ಕ ಮಾತನಾಡಿ, ವಿದ್ಯಾರ್ಥಿನಿ ಸೋನಾಲ್ ಅವರು ಉತ್ತಮ ಉದ್ದೇಶವನ್ನಿಟ್ಟುಕೊಂಡು ಅಂಗನವಾಡಿಯನ್ನು ನವೀಕರಿಸಿದ್ದಾರೆ. ದಾನಿಗಳ ಮತ್ತು ಊರವರ ಸಹಕಾರದಿಂದ ಮುಂದಿನ ದಿನಗಳಲ್ಲಿ ಗ್ರಾ.ಪಂ. ವ್ಯಾಪ್ತಿಯ ಮತ್ತಷ್ಟು ಅಂಗನವಾಡಿಗಳನ್ನು ನವೀಕರಿಸಲು ಚಿಂತನೆ ನಡೆಸಿರುವುದರ ಜೊತೆಗೆ ಮುಂದಿನ ದಿನಗಳಲ್ಲಿ ಅವರು ನಿರ್ದಿಷ್ಟ ವಯೋಮಾನದವರನ್ನು ಗುರಿಯನ್ನಾಗಿಸಿಕೊಂಡು ಅವರಿಗೆ ತಕ್ಕ ಪಠ್ಯ ಕ್ರಮವನ್ನು ರೂಪಿಸುವಲ್ಲಿ ಪರಿಣಿತಿ ಹೊಂದಿದ ಶಿಕ್ಷಣ ಸಂಸ್ಥೆಗಳೊಂದಿಗೆ, ತಜ್ಞರೊಂದಿಗೆ ಮಾತುಕತೆ ನಡೆಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದ್ದು, ಅವರ ಉತ್ತಮ ಕಾರ್ಯಕ್ರಮಕ್ಕೆ ನಾವೆಲ್ಲರೂ ಸಹಕಾರ ನೀಡೋಣ ಎಂದರು.
ಈ ಸಂದರ್ಭದಲ್ಲಿ ಅಂಗನವಾಡಿ ಮೇಲ್ವಿಚಾರಕಿ ಸುರೇಖಾ ನಾಯ್ಕ, ಮಾವಳ್ಳಿ-2 ಗ್ರಾ.ಪಂ. ಮಾಜಿ ಅಧ್ಯಕ್ಷೆ ಹಾಗೂ ದೀವಗೇರಿ ಅಂಗನವಾಡಿ ಸಮಿತಿ ಅಧ್ಯಕ್ಷೆ ನಾಗರತ್ನ ಪಡಿಯಾರ, ಗ್ರಾ.ಪಂ.ಸದಸ್ಯ ಹಾಗೂ ಮುಖಂಡ ಕೃಷ್ಣಾ ನಾಯ್ಕ, ಗ್ರಾ.ಪಂ. ಸದಸ್ಯರಾದ ಅನುರಾಧ ಡಿಸೋಜ, ಗ್ರಾ.ಪಂ, ಮಾಜಿ ಅಧ್ಯಕ್ಷ ಮೋಹನ ನಾಯ್ಕ, ಪವನಕುಮಾರ ಮುಂತಾದವರಿದ್ದರು