ಕೊರೆಯುವ ಚಳಿಯಲ್ಲಿ ಉಕ್ರೇನ್ ಗಡಿಯಲ್ಲಿ ಸಿಲುಕಿಕೊಂಡ ಭಾರತೀಯ ವಿದ್ಯಾರ್ಥಿಗಳು
ಹೊಸದಿಲ್ಲಿ: ವಿಧ್ವಂಸಕ ಯುದ್ಧದ ಹಿನ್ನೆಲೆಯಲ್ಲಿ ಉಕ್ರೇನ್ನಲ್ಲಿರುವ ಹಲವು ಭಾರತೀಯ ವಿದ್ಯಾರ್ಥಿಗಳು ಕೊರೆಯುವ ಚಳಿಯಲ್ಲಿ 35 ಕಿ.ಮೀ. ಕ್ರಮಿಸಿ ಉಕ್ರೇನ್ -ಪೋಲ್ಯಾಂಡ್ನ ಗಡಿ ತಲುಪುತ್ತಿದ್ದಾರೆ. ಆದರೆ, ಆಹಾರ ಹಾಗೂ ವಸತಿ ಕೊರತೆಯಿಂದ ಸಂಕಷ್ಟ ಎದುರಿಸುತ್ತಿದ್ದಾರೆ.
4 ಡಿಗ್ರಿ ಸೆಲ್ಸಿಯಸ್ಗಿಂತ ಕಡಿಮೆ ತಾಪಮಾನದಲ್ಲಿ ಅವರು ಪಾರ್ಕ್ನಲ್ಲಿ ಮಲಗುತ್ತಿದ್ದಾರೆ. ಅವರಲ್ಲಿರುವ ಆಹಾರ ದಾಸ್ತಾನು ಮುಗಿಯುತ್ತಾ ಬಂದಿದೆ ಮೊಬೈಲ್ ಬ್ಯಾಟರಿ ಚಾರ್ಚ್ ಕಡಿಮೆಯಾಗುತ್ತಿದೆ. ಶನಿವಾರ ಗಡಿ ತಲುಪಿದ ವಿದ್ಯಾರ್ಥಿಗಳು ತಮ್ಮ ಸಂಕಷ್ಟಗಳಿಗೆ ನೆರವು ನೀಡುವಂತೆ ಹಾಗೂ ತೆರವು ಅನಿಶ್ಚಿತತೆಯನ್ನು ಬಗೆ ಹರಿಸುವಂತೆ ಮನವಿ ಮಾಡಿದ್ದಾರೆ. ಇದು ಅತಿ ದೀರ್ಘ ನಡಿಗೆಯಾಗಿದೆ. ನಮ್ಮ ದೇಹಕ್ಷೀಣಿಸುತ್ತಿದೆ. ಕೊನೆಗೂ ಗಡಿ ತಲುಪುತ್ತೇವೆ ಎಂಬ ನಿರೀಕ್ಷೆಯೊಂದಿಗೆ ಪರಸ್ಪರ ಕಾಳಜಿ ವಹಿಸುತ್ತಾ ನಾವು ಚಲಿಸುತ್ತಿದ್ದೇವೆ.
ಗಡಿ ತಲುಪಿದ ಬಳಿಕ ಕೆಟ್ಟ ಕಣಗಳು ಇಲ್ಲದಾಗಬಹುದು. ಆದರೆ, ಅದು ಅಂತ್ಯವಲ್ಲ. ನಾವು ಸಹಾಯವಾಣಿಗೆ ಕರೆ ಮಾಡಲು ಪ್ರಯತ್ನಿಸುತ್ತಿದ್ದೇವೆ. ಆದರೆ, ಯಾವುದೇ ಪ್ರತಿಕ್ರಿಯೆ ಸಿಗುತ್ತಿಲ್ಲ' ಎಂದು ಹೊರ್ಬಾಚೆವೆ ಟೆರ್ನೋಪಿಲ್ ರಾಷ್ಟ್ರೀಯ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ನೃಪಾಕ್ಷಿ ತಿಳಿಸಿದ್ದಾರೆ.
“ನಮ್ಮ ಮೊಬೈಲ್ ಬ್ಯಾಟರಿ ಚಾರ್ಜ್ ಖಾಲಿಯಾಗುತ್ತಿದ್ದುದರಿಂದ ನಾವು ಎಷ್ಟು ಸಾಧ್ಯವೋ ಅಷ್ಟು ಎಸ್ಒಎಸ್ ಸಂದೇಶಗಳನ್ನು ಕಳುಹಿಸುತ್ತಿದ್ದೇವೆ' ಎಂದು ಗುಜರಾತ್ ಮೂಲದ ನೃಪಾಕ್ಷಿ ಹೇಳಿದ್ದಾರೆ.
“ರಾಯಭಾರಿ ಕಚೇರಿ ನೀಡಿದ ಯಾವುದೇ ದೂರವಾಣಿ ಸಂಖ್ಯೆ ಕಾರ್ಯ ನಿರ್ವಹಿಸುತ್ತಿಲ್ಲ. ಪ್ರತಿಯೊಂದು ಸಂಖ್ಯೆಗೆ ನಾವು ಹಲವು ಬಾರಿ ಕರೆ ಮಾಡಿದ್ದೇವೆ. ನಾವು ಉದ್ಯಾನದಲ್ಲಿ, ತೆರೆದ ಸ್ಥಳದಲ್ಲಿ ಮಲಗಿದ್ದೇವೆ. ಕೆಲವರು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ನಮ್ಮಲ್ಲಿ ಆಹಾರ ಪದಾರ್ಥಗಳು ಖಾಲಿ ಆಗಿವೆ. ಮತ್ತೆಖರೀದಿಸಲು ಅಂಗಡಿಗಳು ಇಲ್ಲ. ಇದು ಯಾವಾಗ ಅಂತ್ಯವಾಗುತ್ತದೆ' ಎಂದು ಇದೇ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ನಿಖಿಲ್ ಕುಮಾರ್ ಪ್ರಶ್ನಿಸಿದ್ದಾರೆ.
“ನಾವು ಸುಮಾರು 300 ವಿದ್ಯಾರ್ಥಿಗಳು ಮೈನಸ್ ಡಿಗ್ರಿ ತಾಪಮಾನವಿರುವ ಶೆಹನಿ-ಮೆಡ್ಯಕಾ ಗಡಿಯಲ್ಲಿ ವಸತಿ ಇಲ್ಲದೆ ಸಿಲುಕಿಕೊಂಡಿದ್ದೇವೆ. ಯಾರೊಬ್ಬರೂ ಉತ್ತರಿಸುತ್ತಿಲ್ಲ. ನಾವು ಈಗಾಗಲೇ 35 ಕಿ.ಮೀ. ಕ್ರಮಿಸಿ ಇಲ್ಲಿಗೆ ಬಂದಿದ್ದೇವೆ. ಹಿಂದಿರುಗಲು ಸಾಧ್ಯವಿಲ್ಲ' ಎಂದು ಇನ್ನೋರ್ವ ವಿದ್ಯಾರ್ಥಿ ಹೇಳಿದ್ದಾರೆ.