ಹೊಸದಿಲ್ಲಿ: ರಷ್ಯಾ ಸೇನೆಯಿಂದ ಆಕ್ರಮಣಕ್ಕೆ ಒಳಗಾಗಿರುವ ಉಕ್ರೇನ್ನಲ್ಲಿ ಸುಮಾರು 16 ಸಾವಿರ ಭಾರತೀಯರು ಸಿಲುಕಿಕೊಂಡಿದ್ದಾರೆ.
ಉಕ್ರೇನ್ನಲ್ಲಿ ಸಿಲುಕಿರುವ ಎಲ್ಲ ನಾಗರಿಕರನ್ನು ಸುರಕ್ಷಿತವಾಗಿ ಮರಳಿ ಕರೆ ತರಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಕೈಗೊಳ್ಳುವುದಾಗಿ ಭಾರತ ಭರವಸೆ ನೀಡಿದೆ.
ಉಕ್ರೇನ್ನಲ್ಲಿ ಈಗಲೂ ಸಿಲುಕಿರುವ ನಾಗರಿಕರನ್ನು ತೆರವುಗೊಳಿಸಲು ಹಂಗೇರಿ ಹಾಗೂ ಪೋಲ್ಯಾಂಡ್ನಿಂದ ಉಕ್ರೇನ್ ಗಡಿಗೆ ಸರಕಾರದ ತಂಡವನ್ನು ಕಳುಹಿಸಲಾ ಗಿದೆ. ರಶ್ಯ ಸೇನೆ ದಾಳಿಯ ನಡುವೆ ಉಕ್ರೇನ್ನವಾಯುಮಾರ್ಗ ಮುಚ್ಚಿರುವು ದರಿಂದ ಅಧಿಕಾರಿಗಳು ರಸ್ತೆಯ ಮೂಲಕ ಪ್ರಯಾಣಿಸುತ್ತಿದ್ದಾರೆ.
“ಸುರಕ್ಷಿತ ದಾರಿಯನ್ನು ಗುರುತಿಸಲಾಗಿದೆ. ರಸ್ತೆಯ ಮೂಲಕ ನೀವು ಕೀವ್ನಿಂದ ತೆರಳಿದರೆ 9 ಗಂಟೆಗಳಲ್ಲಿ ಪೋಲ್ಯಾಂಡ್ ಹಾಗೂ 12 ಗಂಟೆಗಳಲ್ಲಿ ರೊಮಾನಿಯಾ ತಲುಪುತ್ತೀರಿ. ಮಾರ್ಗ ನಕ್ಷೆ ರೂಪಿಸಲಾಗಿದೆ'' ಎಂದು ಭಾರತದ ವಿದೇಶಾಂಗ ಕಾರ್ಯದರ್ಶಿ ಹರ್ಷ ವರ್ಧನ್ ಶೃಂಗ್ಲಾ ಅವರು ಹೇಳಿದ್ದಾರೆ.
ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯರಿಗೆ ನೆರವು ಹಾಗೂ ಮಾಹಿತಿ ನೀಡಲು 24x7 ಗಂಟೆಗಳ ನಿಯಂತ್ರಣ ಕೊಠಡಿಯನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಆರಂಭಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ರಷ್ಯಾದ ಅಧ್ಯಕ್ಷ ಪ್ಲಾದಿಮಿರ್ ಪುಟಿನ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಉಕ್ರೇನ್ನಲ್ಲಿರುವ ಭಾರತೀಯ ನಾಗರಿಕರು, ಮುಖ್ಯವಾಗಿ ವಿದ್ಯಾರ್ಥಿಗಳ ಬಗ್ಗೆ ತಮ್ಮ ಕಳವಳದ ಬಗ್ಗೆ ಗಮನ ಸೆಳೆದಿದ್ದಾರೆ. ಟೆಲಿಫೋನ್ ಸಂಭಾಷಣೆಯಲ್ಲಿ ಪ್ರಧಾನಿ ಅವರು ಉಕ್ರೇನ್ ನಲ್ಲಿರುವ ಭಾರತೀಯರ ಸುರಕ್ಷಿತ ನಿರ್ಗಮನಕ್ಕೆ ಅತ್ಯಧಿಕ ಆದ್ಯತೆ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಉಕ್ರೇನ್, ಹಂಗೇರಿ, ಪೋಲ್ಯಾಂಡ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಭಾರತೀಯ ನಾಗರಿಕರಿಗೆ ಹಲವು ಸಲಹೆಗಳನ್ನು ನೀಡಿದೆ. ಅಗತ್ಯದ ಸಂದರ್ಭ ಬಾಂಬ್ ದಾಳಿಯಿಂದ ತಪ್ಪಿಸಿಕೊಳ್ಳಲು ಆಶ್ರಯ ಪತ್ತೆ ಮಾಡುವುದು ಹೇಗೆ ಎಂಬ ಬಗೆಗಿನ ವಿವರಗಳನ್ನು ಕೂಡ ಈ ಸಲಹೆ ಒಳಗೊಂಡಿದೆ.