ಕಾಬೂಲ್: ಅಫ್ಘಾನಿಸ್ತಾನದ ದಕ್ಷಿಣ ಪ್ರಾಂತದ ಕಂದಹಾರ್ ನಲ್ಲಿ ಇನ್ನಷ್ಟು ಪ್ರದೇಶ ತಾಲಿಬಾನ್ ಪಡೆಗಳ ನಿಯಂತ್ರಣಕ್ಕೆ ಬಂದಿದ್ದು ನಗರದಲ್ಲಿ ಭದ್ರತಾ ಪರಿಸ್ಥಿತಿ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿರುವ ದೂತಾವಾಸದಿಂದ ಸುಮಾರು 50 ಸಿಬ್ಬಂದಿಯನ್ನು ಭಾರತ ವಾಪಸ್ ಕರೆಸಿಕೊಂಡಿದೆ ಎಂದು ವರದಿಯಾಗಿದೆ.
ಶನಿವಾರ ಏರ್ ಇಂಡಿಯಾ ವಿಮಾನದ ಮೂಲಕ 50 ಸಿಬ್ಬಂದಿ ಹೊಸದಿಲ್ಲಿಗೆ ವಾಪಸಾಗಿದ್ದಾರೆ. ಸ್ಥಳೀಯ ಸಿಬ್ಬಂದಿ ಇನ್ನೂ ಕರ್ತವ್ಯದಲ್ಲಿದ್ದಾರೆ. ಆದರೆ ಎಲ್ಲಾ ವ್ಯಾವಹಾರಿಕ ಉದ್ದೇಶಗಳಿಗಾಗಿ ದೂತವಾಸ ಕಚೇರಿಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ ಎಂದು ಮೂಲಗಳು ಹೇಳಿವೆ. ಕಂದಹಾರ್ನಲ್ಲಿರುವ ದೂತಾವಾಸದಲ್ಲಿ ಭಾರತದ ರಾಜತಾಂತ್ರಿಕರು, ಸಹಾಯಕ ಸಿಬ್ಬಂದಿ ಮತ್ತು ಇಂಡೋ-ಟಿಬೆಟನ್ ಬಾರ್ಡರ್ ಫೋರ್ಸ್ನ ಪಹರೆಯೋಧರು ಸೇರಿದ್ದಾರೆ.
ದೂತಾವಾಸ ಮುಚ್ಚಲಾಗಿಲ್ಲ. ಆದರೆ ಕಂದಹಾರ್ ನಗರದಲ್ಲಿ ನಡೆಯುತ್ತಿರುವ ತೀವ್ರ ಸಂಘರ್ಷದಿಂದಾಗಿ ತಾತ್ಕಾಲಿಕವಾಗಿ ಭಾರತ ಮೂಲದ ಸಿಬ್ಬಂದಿಯನ್ನು ವಾಪಸ್ ಕರೆಸಿಕೊಳ್ಳಲಾಗಿದೆ ಎಂದು ಭಾರತದ ವಿದೇಶ ವ್ಯವಹಾರ ಇಲಾಖೆಯ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ. ಭಾರತದಲ್ಲಿರುವ ಆಫ್ಘಾನ್ ರಾಯಭಾರಿ ಫರೀದ್ ಮಮೊಂಡ್ಝ ಮಂಗಳವಾರ ಭಾರತದ ವಿದೇಶ ವ್ಯವಹಾರ ಇಲಾಖೆಯ ಕಾರ್ಯದರ್ಶಿ ಹರ್ಷವರ್ಧನ ಶ್ರೀಂಗ್ಲಾರನ್ನು ಭೇಟಿಯಾಗಿ ಅಫ್ಘಾನಿಸ್ತಾನದ ಪರಿಸ್ಥಿತಿಯ ಮಾಹಿತಿ ನೀಡಿದ್ದರು.
ಈ ಮಧ್ಯೆ, ಪಾಕಿಸ್ತಾನ ಮೂಲದ ಉಗ್ರರ ಗುಂಪು ಲಷ್ಕರೆ ತಯ್ಯಬ ತಾಲಿಬಾನ್ ಪಡೆ ಜತೆ ಸೇರಿಕೊಂಡಿದ್ದು ಕಂದಹಾರ್ನಲ್ಲಿ ತಾಲಿಬಾನ್ಗಳಿಗೆ ಹೆಚ್ಚುವರಿ ಬಲ ಬಂದಂತಾಗಿದೆ ಎಂದು ಭಾರತದ ಅಧಿಕಾರಿಯೊಬ್ಬರು ಹೇಳಿದ್ದಾರೆ. ಉತ್ತರ ಪ್ರಾಂತದಲ್ಲಿಯೂ ಸಂಘರ್ಷ ತೀವ್ರಗೊಂಡಿರುವುದರಿಂದ ಕನಿಷ್ಠ 2 ದೇಶಗಳು ಅಲ್ಲಿನ ರಾಜಧಾನಿ ಮಝರೆ ಶರೀಫ್ನಲ್ಲಿರುವ ದೂತಾವಾಸವನ್ನು ಮುಚ್ಚಿವೆ ಎಂದು ವರದಿಯಾಗಿದೆ.
ಅಫ್ಘಾನಿಸ್ತಾನದಲ್ಲಿ ಭದ್ರತಾ ಪರಿಸ್ಥಿತಿ ಹದಗೆಡುತ್ತಿರುವುದರಿಂದ ಆ ದೇಶಕ್ಕೆ ಪ್ರವಾಸ ಹೋಗುವ ಭಾರತೀಯರು ಅಥವಾ ಅಲ್ಲಿ ಕೆಲಸ ಮಾಡುತ್ತಿರುವ ಭಾರತೀಯರು ಎಚ್ಚರಿಕೆಯಿಂದ ಇರಬೇಕು ಮತ್ತು ಅನವಶ್ಯಕ ಪ್ರಯಾಣ ಮಾಡಬಾರದು ಎಂದು ಭಾರತದ ರಾಯಭಾರ ಕಚೇರಿ ಕಳೆದ ವಾರ ಸಲಹೆ ನೀಡಿದೆ.