ಭಾರತ-ತಾಲಿಬಾನ್ ರಾಜತಾಂತ್ರಿಕ ಸಭೆ, ಖತರ್ನಲ್ಲಿ ತಾಲಿಬಾನ್ ಪ್ರತಿನಿಧಿ-ಭಾರತದ ರಾಯಭಾರಿ ಭೇಟಿ
ದೋಹಾ: ಭಾರತ ಮತ್ತು ತಾಲಿಬಾನ್ ಮಧ್ಯೆ ರಾಜತಾಂತ್ರಿಕ ಮಟ್ಟದ ಸಭೆ ಏಡರ್ನ ರಾಜಧಾನಿ ದೋಹಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಲ್ಲಿ ತಾಲಿಬಾನಿಗಳ ಕೋರಿಕೆ ಮೇರೆಗೆ ನಡೆದಿದೆ.
ಅಫ್ಘಾನ್ನಲ್ಲಿರುವ ಭಾರತೀಯರ ಸುರಕ್ಷಿತ ವಾಪಸಾತಿ ಬಗ್ಗೆ ಪ್ರಮುಖವಾಗಿ ಚರ್ಚಿಸಲಾಗಿದೆ ಎಂದು ಭಾರತದ ವಿದೇಶ ವ್ಯವಹಾರ ಇಲಾಖೆ ಮಂಗಳವಾರ ಸಂಕ್ಷಿಪ್ತ ಹೇಳಿಕೆಯಲ್ಲಿ ತಿಳಿಸಿದೆ.
ಖತರ್ಗೆ ಭಾರತದ ರಾಯಭಾರಿ ದೀಪಕ್ ಮಿತ್ತಲ್ ಹಾಗೂ ಖತರ್ನಲ್ಲಿನ ತಾಲಿಬಾನ್ನ ರಾಜಕೀಯ ಕಾರ್ಯಾಲಯದ ಮುಖ್ಯಸ್ಥ ಶೇರ್ ಮುಹಮದ್ ಅಬ್ಬಾಸ್ ಸ್ತಾನಿಕ್ ಝಯಿ ಸಭೆಯಲ್ಲಿ ಪಾಲ್ಗೊಂಡಿದ್ದರು.
ಸಭೆಯಲ್ಲಿ ಸುರಕ್ಷೆ, ಭದ್ರತೆ ಹಾಗೂ ಅಫ್ಘಾನಿಸ್ಥಾನದಲ್ಲಿ ಸಿಲುಕಿರುವ ಭಾರತೀಯರು ಶೀಘ್ರ ಮರಳುವ ಬಗ್ಗೆ ಚರ್ಚೆ ನಡೆಸಲಾಗಿದೆ. ಭಾರತಕ್ಕೆ ಭೇಟಿ ನೀಡಲು ಬಯಸುವ ಅಫ್ಘಾನ್ ಪ್ರಜೆಗಳು ಮುಖ್ಯವಾಗಿ ಅಲ್ಪಸಂಖ್ಯಾತರ ಪ್ರಯಾಣದ ಕುರಿತು ಭಾರತದ ರಾಯಭಾರಿ ದೀಪಕ್ ಮಿತ್ತಲ್ ಚರ್ಚೆ ನಡೆಸಿದ್ದಾರೆ.
ಅಲ್ಲದೆ, ಅಫ್ಘಾನ್ ನೆಲವನ್ನು ಭಾರತ ವಿರೋಧಿ ಚಟುವಟಿಕೆಗಳಿಗೆ ಹಾಗೂ ಭಯೋತ್ಪಾದನೆಗೆ ಬಳಸುವ ಸಾಧ್ಯತೆಯ ಬಗ್ಗೆ ದೀಪಕ್ ಮಿತ್ತಲ್ ಆತಂಕ ವ್ಯಕ್ತಪಡಿಸಿದ್ದಾರೆ.
ಈ ವಿಷಯಗಳನ್ನು ಸಕಾರಾತ್ಮಕವಾಗಿ ಪರಿ ಹರಿಸಲಾಗುವುದು ಎಂದು ಸ್ತಾನಿಕ್ ಝಿಯಿ ಭರವಸೆ ನೀಡಿದ್ದಾರೆ.
ಭಾರತದ ರಾಜತಾಂತ್ರಿಕ ಉಪಸ್ಥಿತಿಯನ್ನು ಅಫ್ಘಾನಿಸ್ಥಾನದಲ್ಲಿ ಉಳಿಸಿಕೊಳ್ಳುವಂತೆ ಮನವೊಲಿಸುವ ಇಂಗಿತ ವ್ಯಕ್ತಪಡಿಸಿರುವ ತಾಲಿಬಾನ್ ನಾಯಕರು ಭಾರತದೊಂದಿಗೆ ರಾಜಕೀಯ, ಆರ್ಥಿಕ, ಸಾಂಸ್ಕೃತಿಕ ಒಪ್ಪಂದವನ್ನು ಮುಂದುವರಿಸುವ ಆಸಕ್ತಿ ವ್ಯಕ್ತಪಡಿಸಿದ್ದಾರೆ.
ಸುದ್ದಿವಾಹಿನಿಯೊಂದಿಗೆ ಮಾತನಾಡಿದ ತಾಲಿಬಾನ್ ವಕ್ತಾರ ಸುಹೈಲ್ ಶಹೀನ್, ಅಫ್ಘಾನಿಸ್ತಾನದಲ್ಲಿ ಭಾರತದ ಹೂಡಿಕೆ ಬಗ್ಗೆ ಕೂಡ ಮಾತನಾಡಿದ್ದಾರೆ. ನಿರ್ಮಾಣ ಹಂತದಲ್ಲಿರುವ ಅಭಿವೃದ್ಧಿ ಯೋಜನೆಗಳನ್ನು ಪೂರ್ಣಗೊಳಿಸಲು ಭಾರತ ಸಹಕರಿಸಬೇಕು ಎಂದು ಅವರು ಹೇಳಿದ್ದಾರೆ.