ಬೆಂಗಳೂರು: ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಹಮ್ಮಿಕೊಂಡಿರುವ ಪಾದಯಾತ್ರೆ ವಿಫಲಗೊಳಿಸಲು ಬಿಜೆಪಿ, ಜೆಡಿಎಸ್ ಹಾಗೂ ಇತರ ಪಕ್ಷಗಳು ಪ್ರಯತ್ನಿಸುತ್ತಿವೆ. ಆದರೆ, ಇದಕ್ಕೆ ನಾವು ವಿಚಲಿತರಾಗುವ ಅಗತ್ಯ ಇಲ್ಲ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ರವಿವಾರ ಕನಕಪುರದ ಸಂಗಮದಲ್ಲಿ ಏರ್ಪಡಿಸಿದ್ದ ಐತಿಹಾಸಿಕ ಪಾದಯಾತ್ರೆ ಉದ್ಘಾಟಿಸಿ ಮಾತನಾಡಿದ ಅವರು, 9 ಸಾವಿರ ಕೋಟಿ ರೂ. ವೆಚ್ಚದ ಈ ಯೋಜನೆಯನ್ನು ಆರಂಭಿಸಲು ಕಾಂಗ್ರೆಸ್ ಸರಕಾರ ಎಲ್ಲ ಪ್ರಯತ್ನ ನಡೆಸಿತ್ತು. 67 ಟಿಎಂಸಿ ನೀರು ಶೇಖರಣಾ ಸಾಮರ್ಥ್ಯದ ಮೇಕೆದಾಟು ಅಣೆಕಟ್ಟು ಯೋಜನೆ ಜಾರಿಗೆ ಪ್ರಬಲ ಹೋರಾಟ ನಡೆಸುವ ಛಲ ಕಾಂಗ್ರೆಸ್ ಪಕ್ಷದ ನಾಯಕರಲ್ಲಿದೆ.
ಇದನ್ನು ವಿಫಲಗೊಳಿಸಲು ಸರಕಾರವು ವಿಫಲಯತ್ನ ನಡೆಸಿದೆ ಎಂದು ಟೀಕಿಸಿದರು.
ಮೇಕೆದಾಟು ಯೋಜನೆಯಿಂದ ತಮಿಳುನಾಡು ಸೇರಿದಂತೆ ಯಾರಿಗೂ ತೊಂದರೆ ಆಗುವುದಿಲ್ಲ. ಯೋಜನೆಯಿಂದ ಬಾಧಿತವಾಗುವ ಅರಣ್ಯ ಪ್ರದೇಶದ ಎರಡು ಪಟ್ಟು ಭೂಮಿಯನ್ನು ಅರಣ್ಯ ಇಲಾಖೆಗೆ ನೀಡಲು ಸರಕಾರ ಗುರುತಿಸಿದೆ. ಯಾವ ಕಾರಣಕ್ಕೂ ಈ ಯೋಜನೆ ನಿಲ್ಲಬಾರದು ಎಂದು ಹೇಳಿದರು.
ನಮ್ಮ ಕಡೆ ಒಂದು ಮಾತಿದೆ. 'ಮೈನತ್ ಕರೇಗಾ ಮುರುಗಾ ಸಾಬ್, ಅಂಡೆ ಕಾಯೆಗಾ ಫಕೀರ್ ಸಾಬ್' ಎಂಬಂತೆ ಎಲ್ಲ ಡಿ.ಕೆ., ಡಿ.ಕೆ ಎಂದು ನಾವು ಈ ಭಾಗದ ಜನಪ್ರಿಯ ಸಂಸದರಾದ ಡಿ.ಕೆ. ಸುರೇಶ್ ಅವರನ್ನು ನಾವು ಮರೆತಿದ್ದೇವೆ ಎಂದು ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜನ ಖರ್ಗೆ ಈ ಭಾಗದ ಸಂಸದ ಡಿ.ಕೆ.ಶಿವಕುಮಾರ್ ಎಂದು ಹೇಳಿ, ಅದನ್ನು ಸರಿಪಡಿಸಲು ಶಾಹಿರಿ ಮೂಲಕ ಚಟಾಕಿ ಹಾರಿಸಿದರು.