ಧಾರವಾಡ : ಧಾರವಾಡದ ಜೆಎಸ್ಎಸ್ ಹಾಲಭಾವಿ ಸ್ಕೂಲ್ ಆಫ್ ಆರ್ಟ್ ಕಾಲೇಜಿನಲ್ಲಿ ಡಿ.ವಿ. ಹಾಲಭಾವಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಆಯೋಜಿಸಿರುವ ಮೂರು ದಿನಗಳ ರಾಜ್ಯ ಮಟ್ಟದ ಯುವ ಕಲಾವಿದರ ಚಿತ್ರಕಲಾ ಶಿಬಿರಕ್ಕೆ ಸೋಮವಾರ ಚಾಲನೆ ನೀಡಲಾಯಿತು.
ಕೆಲಗೇರಿ ಜೆಎಸ್ಎಸ್ ಶಿಕ್ಷಣ ಸಂಸ್ಧೆಯ ಆಡಳಿತಾಧಿಕಾರಿ ಎಂ.ಪಿ. ಬಗಲಿ ಶಿಬಿರವನ್ನು ಉದ್ಟಾಟಸಿ, ಮಾತನಾಡಿದರು. ರಾಜ್ಯ ಮಟ್ಟದ ಯುವ ಕಲಾವಿದರ ಶಿಬಿರವು ಕಲಾವಿದರ ಸೃಜನಶೀಲತೆ, ಪ್ರತಿಭೆ ಅನಾವರಣಗೊಳ್ಳಲು ಉತ್ತಮ ವೇದಿಕೆಯಾಗಿದೆ ಎಂದರು.
ಮುಖ್ಯ ಅತಿಥಿ ಡಾ.ಗೋವಿಂದ ಮಣ್ಣೂರ ಮಾತನಾಡಿ, ಹುಬ್ಬಳ್ಳಿ-ಧಾರವಾಡದಲ್ಲಿ ಸುಂದರವಾದ ಸುಸಜ್ಜಿತವಾದ ಬೃಹತ್ ಆರ್ಟ್ ಗ್ಯಾಲರಿ ಡಿ.ವಿ. ಹಾಲಭಾವಿ ಅವರ ಹೆಸರಿನಲ್ಲಿ ನಿರ್ಮಿಸಿ ಗೌರವ ಸಲ್ಲಿಸಬೇಕು. ಚಿತ್ರಕಲಾವಿದರಿಗೆ ಅಗತ್ಯ ನೆರವು ನೀಡಲು ಸರ್ಕಾರ ಚಿಂತನೆ ಮಾಡಬೇಕು ಎಂದರು.
ಡಾ.ಶಶಿಧರ ನರೇಂದ್ರ ಮಾತನಾಡಿ, ಸಂಗೀತಕ್ಕಿಂತ ಮೊದಲು ಪ್ರಾರಂಭವಾಗಿರುವುದು ಚಿತ್ರಕಲೆ, ಸಾವಿರಾರು ವರ್ಷಗಳ ಇತಿಹಾಸ ಇರುವ ಚಿತ್ರಕಲೆಯನ್ನು ಧಾರವಾಡಕ್ಕೆ ಪರಿಚಯಿಸಿದವರು ಡಿ.ವಿ. ಹಾಲಭಾವಿಯವರು. ಅವರು ನೆಟ್ಟಗಿಡ ಇಂದು ಹೆಮ್ಮರವಾಗಿ ಬೆಳೆದಿರುವುದು ಸಂತೋಷದ ವಿಚಾರ. ಕಲೆಯಿಂದ ಯಶಸ್ಸು ಸಿಗುತ್ತದೆ ಎಂದರು.
ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ಅಧ್ಯಕ್ಷ, ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಮಾತನಾಡಿ, ಡಿ.ವಿ.ಹಾಲಭಾವಿಯವರು ಸ್ವಾತಂತ್ರ್ಯ ಪೂರ್ವದಲ್ಲಿ ಮೊದಲ ಕಲಾಶಾಲೆಯನ್ನು ಧಾರವಾಡದಲ್ಲಿ ಪ್ರಾರಂಭಿಸಿ ಸಾವಿರಾರು ಕಲಾವಿದರಿಗೆ ಚಿತ್ರಕಲೆ ಶಿಕ್ಷಣವನ್ನು ನೀಡಿದ್ದಾರೆ ಎಂದರು.
ಟ್ರಸ್ಟ್ ಸದಸ್ಯ ಪಾರ್ವತಿ ಹಾಲಭಾವಿ, ಡಾ.ಎಸ್. ಸಿ. ಪಾಟೀಲ, ಎಸ್.ಎಂ. ಲೋಹಾರ, ದಯಾನಂದ ಕಾಮಕರ, ಎನ್.ಎನ್. ಚಿನ್ನಣ್ಣನವರ್, ಜಿ.ಸಿ. ಕೊಟೂರು, ಪ್ರತಾಪ್ ಬಹುರೂಪಿ ಹಾಗೂ ಕರ್ನಾಟಕದ ವಿವಿಧ ಭಾಗಗಳಿಂದ 33 ಕ್ಕೂ ಹೆಚ್ಚು ಕಲಾವಿದರು ಪಾಲ್ಗೊಂಡಿದ್ದರು.
3 ದಿನಗಳ ಕಾಲ ಯುವಕಲಾವಿದರ ಶಿಬಿರ ಜೆಎಸ್ಎಸ್ ಹಾಲಭಾವಿ ಸ್ಕೂಲ್ ಆಫ್ ಆರ್ಟ್ ಶಿವರಾತ್ರೀಶ್ವರ ನಗರ ಧಾರವಾಡದಲ್ಲಿ ಬೆಳಿಗ್ಗೆ 10-30 ರಿಂದ ಸಂಜೆ 5-30 ವರೆಗೆ ನಡೆಯುತ್ತದೆ. ನಾಳೆ ಅ.27 ರಂದು ಸಮಾರೋಪ ಸಮಾರಂಭ ಜರುಗಲಿದೆ.
ಟ್ರಸ್ಟ್ ಸದಸ್ಯ ಸುರೇಶ ಹಾಲಭಾವಿ ಸ್ವಾಗತಿಸಿದರು. ಬಿ. ಮಾರುತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಬಸವರಾಜ ಕುರಿ ಅತಿಥಿಗಳನ್ನು ಪರಿಚಯಿಸಿದರು. ಪ್ರಾಚಾರ್ಯ ಡಾ.ಬಿ.ಎಂ. ಪಾಟೀಲ್ ಕಾರ್ಯಕ್ರಮ ನಿರೂಪಿಸಿದರು.