ಸಾರ್ವಜನಿಕರ ಮಾಹಿತಿ ಹಾಗೂ ಸುರಕ್ಷತೆಗಾಗಿ ಪೊಲೀಸ್ ಇಲಾಖೆಯ ಅಧಿಕೃತ್ ವೆಬ್ಸೈಟ್ ಆರಂಭ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ
ಧಾರವಾಡ : ಜಿಲ್ಲೆಯಲ್ಲಿ ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ಜಾರಿಗೊಳಿಸಿ, ಸಾರ್ವಜನಿಕರಿಗೆ ಸುರಕ್ಷತೆ, ಅಪರಾಧಗಳ ಕುರಿತು ಮಾಹಿತಿ, ಜಾಗೃತಿ ನೀಡುವದರೊಂದಿಗೆ ಅಗತ್ಯ ಸುರಕ್ಷತಾಕ್ರಮಗಳನ್ನು ಕೈಗೊಳ್ಳಲು ಪೂರಕವಾಗಿ ಜಿಲ್ಲಾ ಪೊಲೀಸ್ ಇಲಾಖೆಯ ವೆಬ್ಸೈಟ್ ಸೃಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ಹೇಳಿದರು.
ಅವರು ಧಾರವಾಡ ಜಿಲ್ಲಾ ಪೊಲೀಸ್ (ಎಸ್.ಪಿ) ಕಚೇರಿಯಲ್ಲಿ ಗಣರಾಜೋತ್ಸವ ಧ್ವಜಾರೋಹಣ ನೆರವೇರಿಸಿ, ಸಾರ್ವಜನಿಕರ ಸೇವೆಗಾಗಿ ಪೊಲೀಸ್ ಕಛೇರಿಯ ಅಧಿಕೃತವಾದ ವೆಬ್ಸೈಟ್ಗೆ ಚಾಲನೆ ನೀಡಿ, ಮಾತನಾಡಿದರು.
ಜಿಲ್ಲಾ ಪೊಲೀಸ್ ಇಲಾಖೆಯಿಂದ ಆರಂಭಿಸಿರುವ https://dharwadpolice.karnataka.gov.in ವೆಬ್ಸೈಟ್ ತುಂಬಾ ಮಾಹಿಯುಕ್ತವಾಗಿ ಸೃಜನೆಗೊಂಡಿದ್ದು, ಅದರಲ್ಲಿ ಜಿಲ್ಲಾ ಪೊಲೀಸ್ ಘಟಕದ ಪೊಲೀಸ್ ಠಾಣೆಗಳ ಮಾಹಿತಿ, ಅಧಿಕಾರಿಗಳ ದೂರುವಾಣಿಗಳ ಪಟ್ಟಿ, ಜಿಲ್ಲೆಯಲ್ಲಿರುವ ಐತಿಹಾಸಿಕ ಸ್ಥಳಗಳ ಮಾಹಿತಿ, ಪೊಲೀಸ್ ಪದಕ ವಿಜೇತರ ಮಾಹಿತಿ, ಈ ಹಿಂದೆ ಧಾರವಾಡ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಿದ ಅಧಿಕಾರಿಗಳ ಮಾಹಿತಿ, ಮಹಿಳಾ ಮತ್ತು ಮಕ್ಕಳ ಕುರಿತು ಸಲಹೆ ಸೂಚನೆಗಳು ಈ ವೆಬ್ಸೈಟ್ದಲ್ಲಿ ಸೇರಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ತಿಳಿಸಿದರು.
ಪೊಲೀಸ್ ನೇಮಕಾತಿ, ಜಿಲ್ಲಾ ಪೊಲೀಸ್ ಕಛೇರಿಯಿಂದ ಪ್ರಕಟಿಸುವ ಪತ್ರಿಕಾ ಪ್ರಕಟಣೆಗಳು, ಜಿಲ್ಲೆಯ ಸಾಮಾಜಿಕ ಜಾಲತಾಣಗಳ ಬಗ್ಗೆ, ಸಾರ್ವಜನಿಕರಿಂದ ದೂರು ಸ್ವೀಕರಣೆ, ಸಾರ್ವಜನಿಕರಿಗೆ ಸೇವೆಗಾಗಿರುವ ವೆಬ್ಸೈಟ್ಗಳ ಮಾಹಿತಿ, ಸೈಬರ್ ಅಪರಾಧ, ಸುರಕ್ಷತಾ ಅಪರಾದ ಕುರಿತು ಸಲಹೆ ಸೂಚನೆಗಳು - ನಿಯಮಗಳು, ಪೊಲೀಸ್ ಕೈಪಿಡಿ ಒಳಗೊಂಡಂತೆ ವಿವಿಧ ಮಾಹಿತಿಯನ್ನು ಸಾರ್ವಜನಿಕರಿಗೆ ವಿಕ್ಷಣೆಗಾಗಿ ಸದರಿ ವೆಬ್ಸೈಟ್ದಲ್ಲಿ ಅಳವಡಿಸಲಾಗಿದೆ ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಈಗಾಗಲೇ ಡಿಸೆಂಬರ್ 12, 2020ರಲ್ಲಿ ತುರ್ತು ಸ್ಪಂದನೆ ಸಹಾಯವಾಣಿ (ಎಮರ್ಜನ್ಸಿ ರೇಸ್ಪಾನ್ಸ್ ಸಪೋರ್ಟ್ ಸಿಸ್ಟಮ್) 112 ಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರಕಿದೆ. ಇಲ್ಲಿವರೆಗೆ 112 ತುರ್ತು ಸಹಾಯವಾಣಿ ಕರೆಯ ಮೂಲಕ 325 ಪ್ರಕರಣಗಳು ದಾಖಲಾಗಿದ್ದು, ಪರಿಹರಿಸಲಾಗಿದೆ ಎಂದು ಅವರು ಹೇಳಿದರು.
ಜಿಲ್ಲೆಯ ನಾಗರಿಕರು, ಸಾರ್ವಜನಿಕರು ಪೊಲೀಸ್ ಇಲಾಖೆಯ ಈ ವೆಬ್ಸೈಟ್ಗೆ ಭೇಟಿ ನೀಡಿ ಅಗತ್ಯ ಮಾಹಿತಿಯನ್ನು ತಿಳಿದುಕೊಳ್ಳುವಂತೆ ಹಾಗೂ ಕಾಲಕಾಲಕ್ಕೆ ವೆಬ್ಸೈಟ್ಯನ್ನು ಭೇಟಿ ನೀಡಿ ಸದುಪಯೋಗ ಪಡಿಸಿಕೊಳ್ಳವಂತೆ ಅವರು ಹೇಳಿದರು.
ಈ ಸಂದರ್ಭದಲ್ಲಿ ಡಿವೈಎಸ್.ಪಿಗಳಾದ ರಾಮನಗೌಡ ಹಟ್ಟಿ, ಜಿ.ಸಿ.ಶಿವಾನಂದ, ಎಮ್.ಬಿ.ಸಂಕದ, ಅನೀಲಕುಮಾರ ಭೂಮರೆಡ್ಡಿ, ಎಸ್ಪಿ ಕಚೇರಿಯ ಸಹಾಯಕ ಆಡಳಿತಾಧಿಕಾರಿ ಮಹಾಂತೇಶ ಹಿರೇಮಠ, ಕಂಪ್ಯೂಟರ್ ವಿಭಾಗದ ಎಮ್.ಎಸ್.ಗೋಲಂದಾಜ, ಎ.ಎಂ.ನವಲೂರ, ಸಿ.ಬಿ.ಮಾಳಗಿ, ಪೊಲೀಸ್ ಇಲಾಖೆಯ ಸಿ.ಪಿ.ಐ, ಪಿಎಸ್ಐ, ಸೇರಿದಂತೆ ವಿವಿಧ ಹಂತದ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು.