ಧಾರವಾಡ : ಮಕ್ಕಳಿಗೆ ಓದು ಹಾಗೂ ಕೆಲಸದ ಒತ್ತಡಗಳನ್ನು ಹಾಕದೆ ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಇದು ಅವರ ಉತ್ತಮ ವ್ಯಕ್ತಿತ್ವ ಬೆಳವಣಿಗೆಗೆ ಸಹಾಯವಾಗುತ್ತದೆ ಎಂದು ಕರ್ನಾಟಕ ರಾಜ್ಯ ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷ ಈರಣ್ಣ ಜಡಿ ಹೇಳಿದರು.
ಅವರು ಗುರುವಾರ ಕನ್ನಡ ಕುಲಪುರೋಹಿತ ಆಲೂರವೆಂಕಟರಾವ ಸಭಾಭವನದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ಮಕ್ಕಳಲ್ಲಿರುವ ಕಲಾ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸಲು ಆಯೋಜಿಸಿದ್ದ ಒಂದು ದಿನದ ಮಕ್ಕಳ ಹಬ್ಬ ‘ಚಿಗುರು’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳನ್ನು ಕೇವಲ ಪಠ್ಯಪುಸ್ತಕ ಕಲಿಕೆಗೆ ಮಾತ್ರ ಸೀಮಿತಗೊಳಿಸದೆ ಅವರಲ್ಲಿ ಅಡಗಿರುವ ಅಭಿರುಚಿಯನ್ನು ಗುರುತಿಸಿ ಅವರಿಗೆ ಪ್ರೇರೆಪಿಸಬೇಕು. ಮತ್ತು ಅವರ ಮನಸ್ಸಿನ ಮೇಲೆ ಹೆಚ್ಚಿನ ಒತ್ತಡವನ್ನು ಹಾಕಬಾರದು ಎಂದು ಪಾಲಕರಿಗೆ ಮತ್ತು ಶಿಕ್ಷಕರಿಗೆ ತಿಳಿಹೇಳಿದರು.
ಮಕ್ಕಳಲ್ಲಿರುವ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಬಾಲವಿಕಾಸ ಅಕಾಡೆಮಿಯು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಕ್ರೀಡಾ ಹಾಗೂ ಯುವ ಸಬಲೀಕರಣ ಇಲಾಖೆಯ ಸಹಯೋಗದಲ್ಲಿ ರಾಜ್ಯವ್ಯಾಪಿ ಚಟುವಟಿಕೆಗಳನ್ನು ಆಯೋಜಿಸಲು ನಿರ್ಧರಿಸಿದೆ. ಧಾರವಾಡ ಜಿಲ್ಲೆಯು ವಿವಿಧ ಕಲೆ, ಸಂಸ್ಕೃತಿಗಳ ಸಂಗಮವಾಗಿದೆ. ಸಾಹಿತ್ಯ, ಚಿತ್ರಕಲೆ, ಸಂಗೀತ ಮತ್ತು ಅಭಿನಯ ಕಲೆಗಳನ್ನು ಹೆಚ್ಚು ಆಸಕ್ತಿಯಿಂದ ಮಕ್ಕಳು ಮೈಗೂಡಿಸಿಕೊಳ್ಳುವಂತೆ ಇತರ ಸಂಘ ಸಂಸ್ಥೆಗಳೊಂದಿಗೆ ಕಾರ್ಯಕ್ರಮಗಳನ್ನು ಸಂಘಟಿಸಲಾಗುವುದೆಂದು ಅವರು ಹೇಳಿದರು.
ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿ ಶಂಕರ ಹಲಗತ್ತಿ ಮಾತನಾಡಿ, ಮಕ್ಕಳಲ್ಲಿ ಹಿಂಜರಿಕೆ ಮನೋಭಾವ ಮೂಡದಂತೆ ಪಾಲಕರು ಮತ್ತು ಶಿಕ್ಷಕರು ಕಾಳಜಿ ವಹಿಸಬೇಕು. ಪ್ರತಿಯೊಂದರಲ್ಲೂ ಮುನ್ನುಗ್ಗುವ, ಕ್ರೀಯಾಶೀಲವಾಗಿ ತೊಡಗಿಸಿಕೊಳ್ಳುವ ಗುಣಧರ್ಮವನ್ನು ಮಕ್ಕಳಲ್ಲಿ ಬೆಳೆಸಬೇಕು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಚಿಗುರು ಕಾರ್ಯಕ್ರಮ ಮಕ್ಕಳು ಯಾವುದೇ ಭಯ, ಹಿಂಜರಿಕೆ ಇಲ್ಲದೆ ತಮ್ಮ ಕಲೆಯನ್ನು ಅಭಿವ್ಯಕ್ತಪಡಿಸಲು ಉತ್ತಮ ವೇದಿಕೆಯಾಗಿದೆ. ಕೊರೊನಾದಂತಹ ಕ್ಲೀಷ್ಟಕರ ಸಮಯದಲ್ಲೂ ಹೊರಾಂಗಣದಲ್ಲಿ ಆಯೋಜಿಸಿರುವ ಚಿಗುರು ಕಾರ್ಯಕ್ರಮದಲ್ಲಿ ಮಕ್ಕಳು ಆಸಕ್ತಿಯಿಂದ ಪಾಲ್ಗೊಂಡಿರುವುದು ಧಾರವಾಡ ನೆಲದ ಗುಣವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಕ್ಕಳ ರಂಗ ನಿರ್ದೇಶಕಿ ವೀಣಾ ಶರ್ಮ, ಪ್ರಸಾದನ ಕಲಾವಿದ ಸಂತೋಷ ಮಹಾಲೆ ಸೇರಿದಂತೆ ಇತರರು ಇದ್ದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಜುಳಾ ಯಲಿಗಾರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವರಾಜ ಗುಡ್ಡಪ್ಪನವರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಚಿಗುರು ಮಕ್ಕಳ ಕಾರ್ಯಕ್ರಮಗಳು : ಒಂದು ದಿನದ ಮಕ್ಕಳ ಹಬ್ಬದಲ್ಲಿ ಭರತನಾಟ್ಯ, ಜಾನಪದ ನೃತ್ಯ, ಜಾನಪದ ಗೀತೆ, ತಬಲಾ ಸೋಲೋ, ಹಿಂದೂಸ್ತಾನಿ ಗಾಯನ, ಸುಗಮ ಸಂಗೀತ, ಗೊಂಬೆಯಾಟ, ನೃತ್ಯರೂಪಕ, ಮಕ್ಕಳ ನಾಟಕ, ಭಾವಗೀತೆ, ಕೋಲಾಟ ಸೇರಿದಂತೆ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.