ಶ್ರೀನಿವಾಸಪುರ: ಸೋಂಕು ನಿವಾರಕ ಸುರಂಗದ ಮೂಲಕ ಪ್ರವೇಶಿಸುವ ಮೂಲಕ ಕೊರೊನಾ ವೈರಾಣು ಹರಡುವುದನ್ನು ತಪ್ಪಿಸಬೇಕು ಎಂದು ಎಪಿಎಂಸಿ ಅಧ್ಯಕ್ಷ ಎನ್.ರಾಜೇಂದ್ರ ಪ್ರಸಾದ್ ಹೇಳಿದರು.
ಪಟ್ಟಣದ ಹೊರ ವಲಯದಲ್ಲಿನ ಎಪಿಎಂಸಿ ಮಾರುಕಟ್ಟೆ ಪ್ರಾಂಗಣದ ಪ್ರವೇಶ ದ್ವಾರದಲ್ಲಿ ಅಳವಡಿಸಲಾಗಿರುವ ಸೋಂಕು ನಿವಾರಕ ಸುರಂಗ ಉದ್ಘಾಟಿಸಿ ಮಾತನಾಡಿ, ಮಾರುಕಟ್ಟೆಗಳಲ್ಲಿ ಹೆಚ್ಚಿನ ಸಂಖ್ಯೆಯ ಜನ ಸೇರುವುದರಿಂದ ಕೊರೊನಾ ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅದನ್ನು ತಡೆಯುವ ಉದ್ದೇಶದಿಂದ ಸೋಂಕು ನಿವಾರಕ ಸುರಂಗವನ್ನು ಸ್ಥಾಪಿಸಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಮಾವಿನ ಸುಗ್ಗಿ ಕಾಲದಲ್ಲಿ ಸ್ಥಳೀಯ ಕೃಷಿ ಕಾರ್ಮಿಕರು ಮಾವಿನ ಕಟಾವು ಕಾರ್ಯದಲ್ಲಿ ತೊಡಗುವುದರಿಂದ, ಮಂಡಿಗಳಲ್ಲಿ ಕೆಲಸ ಮಾಡಲು ನೆರೆಯ ಆಂಧ್ರಪ್ರದೇಶ ಹಾಗೂ ತಮಿಳು ನಾಡಿನ ಕಾರ್ಮಿಕರ ಅಗತ್ಯ ಬೀಳಬಹುದು. ಅವರನ್ನು ಕೆಲಸಕ್ಕೆ ಕರೆದುಕೊಳ್ಳುವ ಮುನ್ನ ಆರೋಗ್ಯ ಪರೀಕ್ಷೆ ಮಾಡಿಸಲಾಗುವುದು. ಆರೋಗ್ಯ ಸಮಸ್ಯೆ ಇರುವವರನ್ನು ಹಿಂದಕ್ಕೆ ಕಳುಹಿಸಲಾಗುವುದು. ಮಾರುಕಟ್ಟೆ ಅಭಿವೃದ್ಧಿಗೆ ನಬಾರ್ಡ್ನಿಂದ ರೂ.5 ಕೋಟಿ ಅನುದಾನ ಬಂದಿದೆ. ಆ ಹಣದಲ್ಲಿ ಮೂಲ ಸೌಕರ್ಯ ಕಲ್ಪಿಸುವ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.
ಪುರಸಭೆ ಮುಖ್ಯಾಧಿಕಾರಿ ವಿ.ಮೋಹನ್ ಕುಮಾರ್ ಮಾತನಾಡಿ, ಮಾರುಕಟ್ಟೆಯಲ್ಲಿ ಸ್ವಚ್ಛತೆ ಕಾಪಾಡಲು ಪೂರಕವಾದ ಎಲ್ಲ ನೆರವು ನೀಡಲಾಗುವುದು. ಅಗತ್ಯವೆನಿಸಿದರೆ ಆರೋಗ್ಯ ಹಾಗೂ ಪೊಲೀಸ್ ಇಲಾಖೆ ನೆರವು ಪಡೆಯಲಾಗುವುದು ಎಂದು ಹೇಳಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವಿಜಯ, ಸರ್ಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಶ್ರೀನಿವಾಸ್, ಪುರಸಭಾ ಸದಸ್ಯ ಫೈರೋಜ್ ಪಾಷ, ಮಾಜಿ ಅಧ್ಯಕ್ಷ ನಾರಾಯಣಸ್ವಾಮಿ, ಪರಿಸರ ಎಂಜಿನಿಯರ್ ಡಿ.ಶೇಖರರೆಡ್ಡಿ, ಎಪಿಎಂಸಿ ಕಾರ್ಯದರ್ಶಿ ಎಂ.ವೇಣುಗೋಪಾಲ್, ಸಹ ಕಾರ್ಯದರ್ಶಿ ಪಿ.ಎನ್.ಜಗನ್ನಾಥ್, ವರ್ತಕರ ಸಂಘದ ಅಧ್ಯಕ್ಷ ಎಚ್.ರವೀಂದ್ರರೆಡ್ಡಿ, ಮಂಡಿ ಮಾಲೀಕ ದಿವಾಕರ್ ಇದ್ದರು.
ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ