ಭಟ್ಕಳ; ಲಾಕ್ಡೌನ್ ಪರಿಣಾಮ ದೇಶದ ಎಲ್ಲ ವರ್ಗಗಳ ಮೇಲೊ ಪರಿಣಾಮ ಬೀರುದ್ದು ಹಲವು ಮಂದಿ ತಮ್ಮ ಉದ್ಯೋಗವನ್ನು ಕಳೆದುಕೊಂಡು ಹೊಟ್ಟೆಪಾಡಿಗಾಗಿ ತಮಗೆ ಒಗ್ಗದ ಕೆಲಸವನ್ನು ಅನಿವಾರ್ಯವಾಗಿ ಮಾಡುತ್ತಿದ್ದಾರೆ.
ಕೊರೋನಾ ಸೋಂಕಿನಿಂದಾಗಿ ಶಾಲೆಗಳು ಇನ್ನೂ ಎರಡು ಮೂರು ತಿಂಗಳ ನಂತರವಷ್ಟೇ ಆರಂಭಗೊಳ್ಳಲಿದ್ದು ಖಾಸಗಿ ಶಾಲೆಗಳಲ್ಲಿ ದುಡಿಯುತ್ತಿರುವ ಶಿಕ್ಷಕರಿಗೆ ಆಡಳಿತ ಮಂಡಳಿಯವರು ಕಳೆದ ಎರಡು ತಿಂಗಳಿಂದ ಅರ್ಧ ವೇತನ ನೀಡುತ್ತಿವೆ. ಮುಂದಿನ ಎರಡು ತಿಂಗಳು ಏನು ಮಾಡುತ್ತಾರೋ ದೇವರೆ ಬಲ್ಲ. ಖಾಸಗಿ ಶಾಲೆಯ ಶಿಕ್ಷಕರು ತಮ್ಮ ಕುಟುಂಬವನ್ನು ಮುನ್ನೆಡೆಸಲು ಮುಂದಿನ ಎರಡು ಮೂರು ತಿಂಗಳುಗಳಿಗಾಗಿ ಬೇರೆ ಬೇರೆ ಉದ್ಯೋಗಗಳನ್ನು ನೋಡಿಕೊಳ್ಳುತ್ತಿದ್ದಾರೆ.
ಭಟ್ಕಳದ ಕೆಲ ಶಿಕ್ಷಕರು ಬಾಡಿಗೆ ಕಾರು ಓಡಿಸುತ್ತಿದ್ದು ಮತ್ತೇ ಕೆಲವರು ಆಟೋ ಚಾಲನೆ ಮಾಡುತ್ತಿದ್ದಾರೆ. ಮತ್ತೇ ಕೆಲವರು ಮಾವಿನ ಹಣ್ಣು ಹಲಸಿನ ಹಣ್ಣಿನ ಮಾರಾಟದಲ್ಲಿ ನಿರತರಾಗಿದ್ದಾರೆ.
ಜೀವನ ನಡೆಸಲು ಧರ್ಮಬದ್ಧ ಮಾರ್ಗನ್ನು ತಾನು ಅನುಸರಿಸುತ್ತಿದ್ದು ಇದರಲ್ಲಿ ನಾಚಿಕೆ ಮತ್ತು ಅವಮಾನ ವಿಷಯ ಎಲ್ಲಿಂದ ಬಂತು ಎಂಬುದಾಗಿ ಕಾರು ಬಾಡಿಗೆ ಹೊಡೆಯುತ್ತಿರುವ ಶಿಕ್ಷಕರೊಬ್ಬರು ತಿಳಿಸುತ್ತಾರೆ. ಸರ್ಕಾರ ಶಾಲೆಗಳನ್ನು ಆರಂಭಿಸುವವರೆ ಬದುಕುವುದಕ್ಕಾಗಿ ಏನನ್ನಾದರೂ ಮಾಡಬೇಕು, ಶಾಲೆಗಳಿಂದ ಅರ್ದ ವೇತನ ಸಿಗುತ್ತಿದೆ. ಮೊದಲೆ ಕಡಿಮೆ ವೇತನದಲ್ಲಿ ಕೆಲಸ ಮಾಡುತ್ತಿರುವ ನಮಗೆ 7-8 ಸಾವಿರ ವೇತನ ಸಿಗುತ್ತಿದೆ. ಅದರಲ್ಲಿ ಹೆಂಡತಿ ಮಕ್ಕಳ ಖರ್ಚು, ಮನೆ ಬಾಡಿಗೆ, ವಿದ್ಯುತ್ ಬಿಲ್ ಹೀಗೆ ಹಣ ಯಾವುದಕ್ಕೂ ಸಾಕಾಗುವುದಿಲ್ಲ. ಆದ್ದರಿಂದ ಉಳಿದ ಖರ್ಚನ್ನು ನಿಭಾಯಿಸಲು ಬೇರೆ ಉದ್ಯೋಗ ಮಾಡುತ್ತಿದ್ದೇವೆ ಎಂದು ಹೆಸರು ಹೇಳಲಿಚ್ಚಿಸದೆ ಶಿಕ್ಷಕರೊಬ್ಬರು ಪತ್ರಿಕೆ ಮಾಹಿತಿಯನ್ನು ನೀಡಿದ್ದಾರೆ.
ಶಾಲೆಗಳು ಆರಂಭಗೊಳ್ಳುವವರೆಗೆ ಪಾಲಕರು ಮಕ್ಕಳ ಫೀಯನ್ನು ತುಂಬುವುದಿಲ್ಲ. ಮಕ್ಕಳ ಫೀ ತುಂಬಲಿಲ್ಲ ಎಂದರೆ ಆಡಳಿತ ಮಂಡಳಿಯವರು ಶಿಕ್ಷಕರಿಗೆ ಹೇಗೆ ವೇತನ ನೀಡುವುದು ಎಂದ ಅವರು ಸರ್ಕಾರ ಇದಕ್ಕಾಗಿ ಸೂಕ್ತ ವ್ಯವಸ್ಥೆಯನ್ನು ಮಾಬೇಕು, ಆಟೋ ರಿಕ್ಷಾ ಚಾಲಕರಿಗೆ ಕಟ್ಟಡ ಕಾರ್ಮಿಕರಿಗೆ ಸರ್ಕಾರ ಧನ ಸಹಾಯ ನೀಡುತ್ತಿದೆ. ಆದರೆ ದೇಶದ ಭವಿಷ್ಯವನ್ನು ರೂಪಿಸುವ ಶಿಕ್ಷಕರು ಭವಿಷ್ಯ ಮಾತ್ರ ಅಡಕತ್ತರಿಯಲ್ಲಿ ಸಿಲುಕಿಕೊಂಡಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಶನ್ ರಾಜ್ಯ ಮಾಧ್ಯಮ ಕಾರ್ಯದರ್ಶಿ ಮುಹಮ್ಮದ್ ರಝಾ ಮಾನ್ವಿ, ಸರ್ಕಾರ ಖಾಸಗಿ ಶಾಲಾ ಶಿಕ್ಷಕರಿಗೆ ಮಾರ್ಚ ನಿಂದ ಶಾಲೆಗಳು ಆರಂಭಗೊಳುವವರೆಗೆ ಅವರ ಬ್ಯಾಂಕ್ ಖಾತೆಗಳಿಗೆ ಕನಿಷ್ಠ ವೇತನವನ್ನು ವರ್ಗಾಯಿಸಬೇಕು. ರಾಜ್ಯದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಖಾಸಗಿ ಶಿಕ್ಷಣಸಂಸ್ಥೆಗಳಲ್ಲಿ ಸಾವಿರಾರು ಮಂದಿ ಶಿಕ್ಷಕರು ಅತ್ಯಂತ ಕಡಿಮೆ ವೇತನದಲ್ಲಿ 20-25 ವರ್ಷಗಳಿಂದ ದುಡಿಯುತ್ತಿದ್ದರೂ ಅವರ ವೇತನಗಳಲ್ಲಿ ಯಾವುದೇ ಹೆಚ್ಚಳವಾಗಿಲ್ಲ. ಸರ್ಕಾರ ಕನಿಷ್ಠ ವೇತನ ನೀಡುವ ಆದೇಶವಿದ್ದರೂ ಕೂಡ ಆದಯವಿಲ್ಲದ ಖಾಸಗಿ ಶಾಲೆಗಳು ಕನಿಷ್ಠವೇತನವನ್ನು ನೀಡಲು ಅಸಹಾಯಕವಾಗಿವೆ. ಆದ್ದರಿಂದ ಸರ್ಕಾರವೇ ಇಂತಹ ಆದಾಯ ರಹಿತ ಶಾಲೆಗಳನ್ನು ಗುರುತಿಸಿ ಅಂತಹ ಶಾಲೆಗಳ ಶಿಕ್ಷಕರಿಗೆ ಕನಿಷ್ಠ ವೇತನ ನೀಡುವ ವ್ಯವಸ್ಥೆ ಮಾಡಬೇಕೆಂದು ಅವರು ಶಿಕ್ಷಣ ಸಚಿವ ಹಾಗೂ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.