ಭಟ್ಕಳ ಅಧಿಕಾರಿಗಳ ರಾಜಾಶ್ರಯದಲ್ಲಿ ಮಿತಿಮೀರಿದ ಗಣಿಗಾರಿಕೆ! ಇದ್ದೊಂದು ಗುಡ್ಡವನ್ನೂ ಕೊರೆದರು; ದನಿ ಕಳೆದುಕೊಳ್ಳುತ್ತಿರುವ ಜನರು

Source: S O News Service | By V. D. Bhatkal | Published on 18th October 2019, 9:32 PM | Coastal News | Special Report |

ಭಟ್ಕಳ: ಭಟ್ಕಳಕ್ಕೆ ಸಹಾಯಕ ಆಯುಕ್ತರಾಗಿ, ತಹಸೀಲ್ದಾರರಾಗಿ ಹಲವಾರು ಅಧಿಕಾರಿಗಳು ಬಂದು ಹೋಗಿದ್ದಾರೆ. ಯಾವುದೇ ಸಹಾಯಕ ಆಯುಕ್ತರು, ತಹಸೀಲ್ದಾರರ ಅವಧಿಯನ್ನು ಪರಿಗಣನೆಗೆ ತೆಗೆದುಕೊಂಡರೂ ಅಕ್ರಮ ಗಣಿಗಾರಿಕೆ, ಅಕ್ರಮ ಮರಳು ದಂಧೆಯನ್ನು ಸಂಪೂರ್ಣವಾಗಿ ತೊಡೆದು ಹಾಕಲು ಸಾಧ್ಯವಾಗಿರಲಿಲ್ಲ ಎನ್ನುವುದು ಖರೆ! ಆದರೆ ಇಡೀ ಮುಠ್ಠಳ್ಳಿ ಸುತ್ತಮುತ್ತಲಿನ ಗುಡ್ಡವನ್ನು ಕೊರೆದು ತಿನ್ನುವಾಗಲೂ ಆರಂಭದಲ್ಲಿ  ಕಲ್ಲುಗಣಿಕಾರರು ಅಧಿಕಾರಿಗಳಿಗೆ ಒಂದಿಷ್ಟು ಹೆದರುತ್ತಿದ್ದರು. ಬರ ಬರುತ್ತ ಎಲ್ಲ ಕಾನೂನು, ನಿಯಮಗಳು ಸಂಪೂರ್ಣವಾಗಿ ನೆಲ ಸಮವಾದವು. ಮುಠ್ಠಳ್ಳಿ, ಬೆಂಗ್ರೆ ಭಾಗಗಳಲ್ಲಿ ಗುಡ್ಡವೇ ನಿರ್ನಾಮವಾಗಿ ಹೋಯಿತು. ಇದೀಗ ದಂಧೆ ಇನ್ನಷ್ಟು ವಿಸ್ತಾರ ರೂಪ ಪಡೆದಿದೆ. ಪಕ್ಕದ ಊರುಗಳಿಗೂ ಗಣಿಕಾರರ ದೃಷ್ಟಿ ಹರಿದಿದೆ. ಅಧಿಕಾರಿಗಳ ಆಶ್ರಯದಲ್ಲಿಯೇ ಸಿಕ್ಕಸಿಕ್ಕಲ್ಲಿ ಗುಡ್ಡವನ್ನು ಕೊರೆಯಲಾಗುತ್ತಿದೆ. 

ಭಟ್ಕಳದಲ್ಲಿ ಕಲ್ಲುಗಣಿಗಾರಿಕೆಗೆ ಹಲವು ದಶಕಗಳ ಇತಿಹಾಸ ಇದೆ. ಮೊದ ಮೊದಲು ಮಾಲ್ಕಿ ಜಾಗ ಎಂದು ತೋರಿಸಿ ಕಲ್ಲು ಕೊರೆದು ಕ್ವಾರಿ ನಿರ್ಮಿಸಲಾಯಿತು. ನಂತರದ ಅದರ ಅಕ್ಕಪಕ್ಕದ ಜಮೀನೂ ಆತಿಕ್ರಮಣಕ್ಕೆ ಒಳಗಾದವು. ಅರಣ್ಯ ಪ್ರದೇಶದಲ್ಲಿಯೂ ಬೇಕಾಬಿಟ್ಟಿ ಕಲ್ಲು ಗಣಿಗಾರಿಕೆ ಆರಂಭವಾಯಿತು. ದೊಡ್ಡವರ ಹಂಗಿನಲ್ಲಿ ಅರಣ್ಯಾಧಿಕಾರಿಗಳು ಬಾಯಿ ಮುಚ್ಚಿ ಕುಳಿತುಕೊಂಡರು. ಅರಣ್ಯಾಧಿಕಾರಿಗಳ ದರ್ಪವೆಲ್ಲ ಬಡ ಅತಿಕ್ರಮಣದಾರರ ಮೇಲೆ ಮಾತ್ರ ಎಂಬಂತಾಯಿತು. ಭಟ್ಕಳಕ್ಕೆ ವಸಂತ ರೆಡ್ಡಿ ಹೆಸರಿನ ದಕ್ಷ ಐಎಎಫ್‍ಎಸ್ ಅಧಿಕಾರಿಯ ಪಾದಾರ್ಪಣೆಯಾಯಿತೋ, ಉಳ್ಳವರಿಗೂ ಅರಣ್ಯ ಭೂಮಿ ಅತಿಕ್ರಮಣ ತುಸು ಕಷ್ಟವಾಯಿತು. ಅರಣ್ಯಭೂಮಿಯಲ್ಲಿನ ಅಕ್ರಮ ಗಣಿಗಾರಿಕೆಗೆ ತಡೆ ಬಿದ್ದಿದೇ ಆಗ! ನಂತರ ಗಣಿಧಣಿಗಳು ಮಾಲ್ಕಿ ಭೂಮಿಯನ್ನು ಖರೀದಿಸಿ ಗಣಿಗಾರಿಕೆಗೆ ನಿಂತು ಬಿಟ್ಟರು. ಇವರಿಗೆ ಯಾರೆಲ್ಲ ಪರವಾನಿಗೆ ಕೊಟ್ಟರೋ ದೇವರೇ ಬಲ್ಲ, ಇದ್ದ ಬಿದ್ದ ಜಾಗದಲ್ಲಿ ಹೊಂಡ ಕೊರೆಯುವ ಕೆಲಸ ನಿರಂತರವಾಯಿತು. ನಂತರ ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ಗಣಿಗಾರಿಕೆಗೆ ಸಂಬಂಧಿಸಿದಂತೆ ಸರಕಾರದ ನಿಯಮವೂ ಬದಲಾಯಿತು. ಆನ್‍ಲೈನ್‍ನಲ್ಲಿಯೇ ಅರ್ಜಿ ಭರ್ತಿ ಮಾಡಿ ಗಣಿಗಾರಿಕೆಗೆ ಪರವಾನಿಗೆ ಪಡೆದುಕೊಳ್ಳಬೇಕಾದ ಅನಿವಾರ್ಯತೆ ಎದುರಾಯಿತು. ಅಂದು ಜಿಲ್ಲಾಧಿಕಾರಿಗಳಾಗಿದ್ದ ಉಜ್ವಲ್ ಘೋಷ್, ಕಟ್ಟುನಿಟ್ಟಾಗಿ ನಿಯಮ ಪಾಲನೆಯನ್ನು ಮಾಡುವಂತೆ ಎಲ್ಲ ತಹಸೀಲ್ದಾರರಿಗೂ ತಾಕೀತು ಮಾಡಿದ್ದರು. ನಂತರ ಜಿಲ್ಲಾಧಿಕಾರಿಗಳಾಗಿ ಬಂದಿದ್ದ ನಕುಲ್ ಇನ್ನಷ್ಟು ನಿಷ್ಠುರರಾಗಿದ್ದರು. ವಿಶೇಷ ಎಂದರೆ ಅಕ್ರಮ ಗಣಿಗಾರಿಕೆಯನ್ನು ತಡೆಯಲು ಪ್ರತಿ ತಾಲೂಕಿನಲ್ಲಿ ತಹಸೀಲ್ದಾರ, ಪಿಡಿಓ ಇನ್ನಿತರ ಅಧಿಕಾರಿಗಳನ್ನು ಒಳಗೊಂಡ ವಿಚಕ್ಷಣಾ ದಳವನ್ನು ಸ್ಥಾಪಿಸಿದರು. ಇದರಿಂದ ಮನಸ್ಸಿಗೆ ಬಂದಂತೆ ಗಣಿಗಾರಿಕೆ ನಡೆಸಲು ಸಾಧ್ಯವಾಗಲೇ ಇಲ್ಲ. ನಂತರ ಅವರೂ ವರ್ಗಾವಣೆಯಾಗಿ ಡಾ.ಹರೀಶಕುಮಾರ ಜಿಲ್ಲಾಧಿಕಾರಿಗಳಾಗಿ ಬಂದಿದ್ದಾರೆ. ಭಟ್ಕಳದಲ್ಲಿಯೂ ಸಹಾಯಕ ಆಯುಕ್ತರು, ತಹಸೀಲ್ದಾರರ ಕುರ್ಚಿಯಲ್ಲಿ ಬೇರೆ ಬೇರೆ ಮುಖಗಳು ಕಾಣಿಸುತ್ತಿವೆ. 
 

ಮುಂಡಳ್ಳಿ ಗುಡ್ಡದ ಮೇಲೆ ಕಣ್ಣು:
ಇಷ್ಟು ಸುದೀರ್ಘ ಅವಧಿಯ ಇತಿಹಾಸದಲ್ಲಿ ಯಾವುದೇ ಗಣ್ಯರ ಶಿಫಾರಸ್ಸು ಬಂದರೂ ಇಲ್ಲಿನ ಮುಂಡಳ್ಳಿ ಗುಡ್ಡಕ್ಕೆ ಕಣ್ಣು ಹಾಕುವ ಧೈರ್ಯ ಯಾವುದೇ ಗಣಿಧಣಿಗಳಿಗೂ ಬಂದಿರಲಿಲ್ಲ. 4-5 ವರ್ಷಗಳ ಹಿಂದೆ ಜೆಸಿಬಿ ತರಲು ಮುಂದಾಗಿರುವ ಪ್ರಯತ್ನವನ್ನು ಆರಂಭದಲ್ಲಿಯೇ ತಡೆಹಿಡಿಯಲಾಗಿತ್ತು. ಆದರೆ ಕಳೆದ 1 ತಿಂಗಳ ಈಚೆಗೆ ಮುಂಡಳ್ಳಿ ಗುಡ್ಡವನ್ನೇ ಕೊರೆದು ತಿನ್ನುವ ಕೆಲಸ ಆರಂಭವಾಗಿದೆ.

ಕಲ್ಲುಗಣಿಗಾರಿಕೆಗೆ ಪರವಾನಿಗೆ ಕೊಟ್ಟವರು ಯಾರು ಎಂಬ ಪ್ರಶ್ನೆಗೂ ಉತ್ತರ ಇಲ್ಲ. ಸರಕಾರಿ ಪ್ರಾಥಮಿಕ ಶಾಲೆ, ಪ್ರೌಢಶಾಲೆಗಳ ಮಕ್ಕಳು ಓಡಾಡುವ ಕಿರಿದಾದ ರಸ್ತೆಯಲ್ಲಿ ಮುಂಜಾನೆ 5 ಗಂಟೆಯಿಂದಲೇ ಲಾರಿಗಳ ಓಡಾಟ ಆರಂಭವಾಗಿ ಬಿಟ್ಟಿದೆ. ಹಿರಿಯ ಅಧಿಕಾರಿಗಳಿಂದ ಹಿಡಿದು ಕಿರಿಯ ಅಧಿಕಾರಿಗಳವರೆಗೆ ಆಗಾಗ್ಗೆ ಬಂದು ಕಿಸೆ ಭರ್ತಿ ಮಾಡಿಕೊಂಡು ಮುಗುಳ್ನಕ್ಕು ವಾಪಸ್ಸಾಗುತ್ತಿದ್ದಾರೆ ಎನ್ನುವ ಆರೋಪ ಮುಂಡಳ್ಳಿ ಭಾಗದಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿದೆ. ಇದೂ ಸಾಲದೆಂಬಂತೆ ಮುಂಡಳ್ಳಿ ಗುಡ್ಡದ ಮೇಲೆ ದಿನಕ್ಕೊಬ್ಬರಂತೆ ಹೊಸ ಹೊಸ ಗಣಿಮಾಲಕರು ಸೃಷ್ಟಿಯಾಗುತ್ತಿದ್ದಾರೆ. ದನಕರುಗಳು ಮೇಯುವ ಜಾಗವೆಲ್ಲ ಕುಸಿಯುತ್ತಲೇ ಇದ್ದರೂ ಯಾವೊಬ್ಬ ಗೋಪ್ರೇಮಿಯೂ ಜಾಗೃತನಾಗದೇ ಇರುವುದು ವಿಷಾದದ ಸಂಗತಿಯಾಗಿದೆ. ಇದೇ ಮುಂಡಳ್ಳಿ ಗುಡ್ಡದ ಮೇಲೆಯೇ ವಿಮಾನ ನಿಲ್ದಾಣ ಸ್ಥಾಪಿಸುವಂತೆ ಹೈಕೋರ್ಟನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿತ್ತು. ನಂತರ ನ್ಯಾಯಾಲಯ ಈ ತೀರ್ಮಾನವನ್ನು ಸರಕಾರದ ನಿರ್ಧಾರಕ್ಕೆ ಒಪ್ಪಿಸಿತು. ಅಂಕೋಲಾ ಆಲಗೇರಿ ಗಲಾಟೆಯ ನಡುವೆಯೇ ಭಟ್ಕಳಿಗರ ವಿಮಾನ ನಿಲ್ದಾಣದ ಕನಸು ಹಾಗೆಯೇ ಉಳಿದುಕೊಂಡಿದೆ. ಇದರ ನಡುವೆಯೇ ಕಲ್ಲು ಕೊರೆಯುವ ಯಂತ್ರದ ಸದ್ದು ಆಗಲೇ ಆರಂಭವಾಗಿ ಬಿಟ್ಟಿದೆ. ಜನರು ದನಿ ಕಳೆದುಕೊಳ್ಳುತ್ತಿದ್ದಾರೆ. ಈ ಅಧಿಕಾರಿಗಳಾದರೂ  ಹೊಟ್ಟೆಗೆ ಏನು .......... ?

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...