ಯುಎಪಿಎ ಕ್ರೂರ ಕಾಯ್ದೆ ರದ್ದುಗೊಳಿಸುವಂತೆ ನಡೆಯುತ್ತಿರುವ ಹೋರಾಟಕ್ಕೆ ಎ.ಪಿ.ಸಿ.ಆರ್ ಬೆಂಬಲ
ಬೆಂಗಳೂರು: ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ) ಅತ್ಯಂತ ಕ್ರೂರ ಕಾಯ್ದೆಯಾಗಿದ್ದು ಇದನ್ನು ರದ್ದುಗೊಳಿಸಲು ಆಗ್ರಹಿಸಿ ನಡೆಸುವ ಹೋರಾಟದಲ್ಲಿ ದೇಶಾದ್ಯಂತ ಕಾರ್ಯಕರ್ತರು ಮತ್ತು ವಕೀಲರು ಧ್ವನಿಗೂಡಿಸಬೇಕು ಎಂದು ವಕೀಲರು ಹಾಗೂ ನಾಗರಿಕ ಹಕ್ಕುಗಳ ಕಾರ್ಯಕರ್ತರ ಸಂಘಟನೆಯಾಗಿರುವ ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ (ಎಪಿಸಿಆರ್) ಆಗ್ರಹಿಸಿದೆ.
ಬೆಂಗಳೂರಿನಲ್ಲಿ ತನ್ನ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಕಾನೂನು ಅರಿವು ಕಾರ್ಯಾಗಾರದಲ್ಲಿ ಯುಎಪಿಎ ಕಾಯ್ದೆ ರದ್ದತಿಗೆ ಎಪಿಸಿಆರ್ ಆಗ್ರಹಿಸಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಸುಪ್ರೀಂ ಕೋರ್ಟ್ನ ಮಾಜಿ ಮುಖ್ಯ ನ್ಯಾಯಾಧೀಶ ಎಂ.ಎನ್.ವೆಂಕಟಾಚಲಯ್ಯ, ಜೀವನವಿಡೀ ವಕೀಲರಾಗಿ, ಬಳಿಕ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಿದ ನನಗೆ ಮಾನವಹಕ್ಕು ಆಯೋಗದ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಲು ಅವಕಾಶ ದೊರೆತಾಗ ದೇಶದಲ್ಲಿ ಮಾನವ ಹಕ್ಕಿನ ಕುರಿತು ಇರುವ ಪರಿಸ್ಥಿತಿಯ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಯಿತು. ಆಯೋಗದ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ ಅವಧಿಯಲ್ಲಿ ಶೇ.73ರಷ್ಟು ಅನಗತ್ಯ ಬಂಧನ ಪ್ರಕರಣ ಹಾಗೂ ಜೈಲಿನ ಬಜೆಟ್ನಲ್ಲಿ ಶೇ.44ರಷ್ಟು ಮೊತ್ತ ಅನಗತ್ಯ ಬಂಧನ ಅಥವಾ ವಶಪಡಿಸಿಕೊಳ್ಳುವ ಪ್ರಕ್ರಿಯೆಗೆ ಖರ್ಚಾಗುತ್ತಿರುವುದನ್ನು ಗಮನಿಸಿದ್ದೆ ಎಂದು ಹೇಳಿದರು.
ಬೆಂಗಳೂರು ನ್ಯಾಷನಲ್ ಲಾ ಕಾಲೇಜಿನ ಸಹಾಯಕ ಪ್ರೊ. ಕುಣಾಲ್ ಅಂಬಿಸ್ಟ ಮಾತನಾಡಿ, ಮಹಾತ್ಮ ಗಾಂಧೀಜಿ ಮತ್ತು ರಾಜೀವ್ ಗಾಂಧಿ ಅವರನ್ನು ಹತ್ಯೆ ಮಾಡಿದವರನ್ನು ಶಿಕ್ಷಿಸಲು ಆರ್ಪಿಸಿ ಮತ್ತು ಐಪಿಸಿ ಕಾಯ್ದೆಗಳಿಂದ ಸಾಧ್ಯವಾಗಿದೆ. ಹಾಗಿದ್ದರೆ ಯುಎಪಿಎಯಂತಹ ವಿಶೇಷ ಕಾಯ್ದೆಯ ಅಗತ್ಯವೇನಿದೆ ಎಂದು ಪ್ರಶ್ನಿಸಿದರು.
ಮೊದಲು ಕಾಂಗ್ರೆಸ್ ಟಾಡಾ ಕಾಯ್ದೆ ತಂದಿತು. ಬಳಿಕ ಬಿಜೆಪಿ ಪಿಒಟಿಎ (ಪೊಟ) ಕಾಯ್ದೆ ತಂದಿತು. ಈ ಎರಡೂ ಕಾಯ್ದೆಗಳು ರದ್ದಾಗಿವೆ. ಆದರೆ ಕಾಂಗ್ರೆಸ್ ಮತ್ತೆ ಜಾರಿಗೆ ತಂದಿರುವ ಯುಎಪಿಎ ಕಾಯ್ದೆಯಿಂದ ಸಾವಿರಾರು ಮಂದಿ ಯುವಕರು ಜೈಲಿನಲ್ಲಿ ಕೊಳೆಯುತ್ತಿದ್ದಾರೆ ಎಂದರು. ಈ ಕಾಯ್ದೆಯಡಿ ಬಂಧಿಸಲ್ಪಟ್ಟ ಹಲವು ಯುವಕರು ಜೈಲಿನಲ್ಲಿ ತಮ್ಮ ಅಮೂಲ್ಯ ದಿನಗಳನ್ನು ವ್ಯರ್ಥವಾಗಿ ಕಳೆದಿದ್ದಾರೆ. ಆದ್ದರಿಂದ ನ್ಯಾಯಾಲಯದಲ್ಲಿ, ಬೀದಿಗಳಲ್ಲಿ ಕಾರ್ಯಾಗಾರಗಳ ಮೂಲಕ ಈ ಕ್ರೂರ ಕಾಯ್ದೆಯ ವಿರುದ್ಧ ಧ್ವನಿ ಎತ್ತಬೇಕು ಎಂದವರು ಹೇಳಿದರು.
ಎಪಿಸಿಆರ್ ಪ್ರಧಾನ ಕಾರ್ಯದರ್ಶಿ ನಿಯಾಝ್ ಅಹ್ಮದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಪಿಸಿಆರ್ ರಾಷ್ಟ್ರೀಯ ಅಧ್ಯಕ್ಷ ಯೂಸುಫ್ ಮಛಾಲ ಅಧ್ಯಕ್ಷತೆ ವಹಿಸಿದ್ದರು. ರಾಜ್ಯಸಭಾ ಸದಸ್ಯ ಸೈಯದ್ ನಸೀರ್ ಹುಸೇನ್, ಜಮಾಅತೆ ಇಸ್ಲಾಮಿ ಹಿಂದ್- ಕರ್ನಾಟಕ ಕಾರ್ಯದರ್ಶಿ ಯೂಸುಫ್ ಕುಂಞಿ, ಹೈಕೋರ್ಟ್ನ ಮಾಜಿ ಸಾರ್ವಜನಿಕ ಅಭಿಯೋಜಕ, ವಕೀಲ ಬಿ.ಟಿ.ವೆಂಕಟೇಶ್ ಉಪಸ್ಥಿತರಿದ್ದರು.
ಎಪಿಸಿಆರ್ ಚಿತ್ರದುರ್ಗ ಘಟಕದ ಅಧ್ಯಕ್ಷ, ಮಾಜಿ ಪೊಲೀಸ್ ಉಪ ಅಧೀಕ್ಷಕ ಸೈಯದ್ ಇಸಾಕ್ ಕಾರ್ಯಕ್ರಮ ನಿರೂಪಿಸಿದರು. ಎಪಿಸಿಆರ್ ಕರ್ನಾಟಕ ಸದಸ್ಯ, ವಕೀಲ ಮಹಮೂದ್ ಖಾಝಿ ವಂದಿಸಿದರು.