ಧಾರವಾಡ: ಇಲ್ಲಿನ ತಡಸಿನಕೊಪ್ಪದ ಬಳಿ 61 ಎಕರೆ ವಿಸ್ತಾರದ ಪ್ರದೇಶದಲ್ಲಿ 117 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ) ಯ ನೂತನ ಭವ್ಯ ಕಟ್ಟಡ ಕಾಮಗಾರಿಯು ಎರಡು ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.
ಐಐಐಟಿ ಕಟ್ಟಡ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಅವರು, ವಿವಿಧೋದ್ದೇಶ ಸಭಾಂಗಣ, ವರ್ಗ ಕೋಣೆಗಳು, ಆಡಳಿತ ಭವನ, ವಿದ್ಯಾರ್ಥಿ ನಿಲಯದ ಕಟ್ಟಡಗಳನ್ನು ಪರಿಶೀಲಿಸಿ ಮಾತನಾಡಿದರು,
ವಿದ್ಯಾಕೇಂದ್ರವೆನಿಸಿರುವ ಧಾರವಾಡಕ್ಕೆ ಐಐಐಟಿ ಬರಲು ಆಗ ಉನ್ನತ ಶಿಕ್ಷಣವನ್ನು ಸಚಿವರಾಗಿದ್ದ ಆರ್.ವಿ. ದೇಶಪಾಂಡೆ, ಈಗ ಕೇಂದ್ರ ಸಚಿವರಾಗಿರುವ ಪ್ರಲ್ಹಾದ ಜೋಷಿ ಹಾಗೂ ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಕಾರ್ಯದರ್ಶಿಗಳಾಗಿದ್ದ ಡಾ.ರಜನೀಶ್ ಗೋಯೆಲ್ ಅವರು ನೀಡಿದ ಸಹಕಾರ ಸ್ಮರಿಸಿದ ಅವರು, ಐಐಐಟಿಯ ಹೊಸ ಕಟ್ಟಡ ನಿರ್ಮಿಸಲು ಈ ಮುಂಚೆ ಸಿದ್ಧಪಡಿಸಿದ್ದ ವಿನ್ಯಾಸ ನಿರೀಕ್ಷೆಗೆ ಅನುಗುಣವಾಗಿರಲಿಲ್ಲ. ಧಾರವಾಡದ ಕರ್ನಾಟಕ ವಿ.ವಿ.,ಕೃಷಿ ವಿ.ವಿ., ಕೆಸಿಡಿಯಂತೆ ನಗರದ ಹೆಗ್ಗುರುತಾಗಿ ಗುರುತಿಸಲ್ಪಡುವ ಮಾದರಿಯಲ್ಲಿ ವಿಶಿಷ್ಟವಾಗಿ ವಿನ್ಯಾಸಗೊಳಿಸಲು ಸೂಚಿಸಿ ಪುನರ್ ರಚಿಸಲಾಯಿತು. ಅದರಂತೆ ಅತ್ಯಂತ ಸುಂದರ ಹಾಗೂ ಭವ್ಯವಾಗಿ ಈ ಕಟ್ಟಡ ತಲೆ ಎತ್ತಿದೆ. ಇಲ್ಲಿ ಐಐಐಟಿ ಸ್ಥಾಪನೆಯಾಗಲು ತಡಸಿನಕೊಪ್ಪ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ನೀಡಿದ ಸಹಕಾರ ಕೂಡ ಮಹತ್ವದ್ದಾಗಿದೆ. ಐಐಐಟಿಯು ಸರ್ಕಾರ ಹೂಡಿಕೆಯೊಂದಿಗೆ ನಿರ್ಮಾಣವಾಗುತ್ತವೆ, ಮುಂದೆ ಯಾವುದೇ ಅನುದಾನವಿಲ್ಲದೇ, ವಿದ್ಯಾರ್ಥಿಗಳ ಶುಲ್ಕ, ಸಂಶೋಧನೆ ಚಟುವಟಿಕಗಳ ಮೂಲಕ ಆರ್ಥಿಕ ಸಂಪನ್ಮೂಲ ಕ್ರೋಢೀಕರಿಸಿ ಸ್ವಾಯತ್ತವಾಗಿ ನಿರ್ವಹಿಸಲ್ಪಡುತ್ತದೆ ಎಂದರು.
ಐಐಐಟಿ ನಿರ್ದೇಶಕ ಡಾ.ಕವಿ ಮಹೇಶ, ರಿಜಿಸ್ಟ್ರಾರ್ ಚನ್ನಪ್ಪ ಅಕ್ಕಿ, ಮುಖಂಡರಾದ ಯಲ್ಲಪ್ಪ ಅರಿವಾಳದ, ಮಂಜುಳಾ ರವಿ ಅಕ್ಕೂರ ಮತ್ತಿತರರು ಉಪಸ್ಥಿತರಿದ್ದರು.