ಹಸಿವು ಮತ್ತು ಅಪೌಷ್ಟಿಕತೆಯ ಬೇನೆ

Source: sonews | By Staff Correspondent | Published on 12th November 2019, 5:51 PM | Special Report | Don't Miss |

ಆಹಾರ ಭದ್ರತೆ ಮತ್ತು ಪೌಷ್ಟಿಕಾಂಶ ಪೂರೈಕೆಯನ್ನು ಖಾತರಿಗೊಳಿಸುವ ನೀತಿಗಳಿಗೆ ಹೊಸ ಧೋರಣೆಯ ಹಾಗೂ ತುರ್ತು ಸಂವೇದನೆಯ ಅಗತ್ಯವಿದೆ.

ಭಾರತಕ್ಕೆ ಸ್ವಾತಂತ್ರ್ಯ ಬಂದು ದಶಕಗಳೇ ಉರುಳಿದರೂ ಮಕ್ಕಳ, ಮಹಿಳೆಯರ ಮತ್ತು ವಂಚಿತ ಸಮುದಾಯಗಳ ಜೀವ ಮತ್ತು ಆರೋಗ್ಯಗಳನ್ನು  ಅಪಾಯಕ್ಕೀಡುಮಾಡುತ್ತಿರುವ ಹಸಿವು ಮತ್ತು ಅಪೌಷ್ಟಿಕತೆಯ ಸಮಸ್ಯೆಗಳಿಂದ ಮುಕ್ತಗೊಳಿಸಲು ಆಗಿಲ್ಲವೆಂಬುದು ನಾಚಿಕೆಗೇಡಿನ ಸಂಗತಿಯಾಗಿದೆ. ಈ ವರ್ಷ ಪ್ರಕಟವಾಗಿರುವ ಜಾಗತಿಕ ಹಸಿವು ಸೂಚ್ಯಂಕ- ಗ್ಲೋಬಲ್ ಹಂಗರ್ ಇಂಡೆಕ್ಸ್- ಹಸಿವಿನ ಸಮಸ್ಯೆಯನ್ನು ನೀಗಿಸಲು ಆಯಾ ದೇಶಗಳು ಕೈಗೊಂಡಿರುವ ಕ್ರಮಗಳನ್ನು ಮಾಪನ ಮಾಡಲು - ಪೌಷ್ಟಿಕತೆಯ ಕೊರತೆ, ಮಕ್ಕಳ ತೂಕ ಮತ್ತು ಎತ್ತರಗಳ ಅಸಮರ್ಪಕ ಅನುಪಾತ (ಚೈಲ್ಡ್ ವೇಸ್ಟಿಂಗ್), ಮಕ್ಕಳು ವಯಸ್ಸಿಗೆ ತಕ್ಕಷ್ಟು  ಎತ್ತರಕ್ಕೆ ಬೆಳಯದಿರುವುದು (ಚೈಲ್ಡ್ ಸ್ಟಂಟಿಂಗ್)  ಮತ್ತು ಮಕ್ಕಳ ಮರಣ-ಗಳೆಂಬ ನಾಲ್ಕು ಮಾನದಂಡಗಳನ್ನು ಬಳಸಿದೆ. ಈ ಮಾನದಂಡಗಳನ್ನು ಆಧರಿಸಿ ಜಾಗತಿಕ ಸೂಚ್ಯಂಕವು ಭಾರತವನ್ನು "ಗಂಭೀರ"ವಾದ ಹಸಿವಿನ ಸಮಸ್ಯೆಗಳನ್ನು ಎದುರಿಸುತ್ತಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಸೇರಿಸಿದೆ.

ವಿಶ್ವಸಂಸ್ಥೆಯ ಸಹಸ್ರಮಾನದ ಗುರಿಗಳಲ್ಲಿ ೨೦೩೦ರ ವೇಳೆಗೆ ಇಡೀ ಜಗತ್ತನ್ನು ಹಸಿವು ಮುಕ್ತಗೊಳಿಸಬೇಕೆಂಬುದೂ ಒಂದು. ಆದರೆ ಅದನ್ನು ಸಾಧಿಸಬೇಕೆಂದರೆ ಸರ್ಕಾರದ ಮಧ್ಯ ಪ್ರವೇಶವಿರುವ ಯೋಜನೆಗಳು ಮತ್ತು ಕಾರ್ಯಕ್ರಮಗಳಲ್ಲಿ ಸೃಜನಶೀಲತೆ ಮತ್ತು ನಿರಂತರತೆಯ ಅಗತ್ಯವಿದೆ. ಮಾತ್ರವಲ್ಲದೆ ನಿರೀಕ್ಷಿತ ಫಲಿತಾಂಶಗಳನ್ನು ಪಡೆಯಬೇಕೆಂಬ ಧೃಢವಾದ ಛಲವೂ ಬೇಕಾಗಿದೆ. ಈ ಗುರಿಯನ್ನು ಈಡೇರಿಸುವ ಉದ್ದೇಶದಿಂದಲೇ ಜಾಗತಿಕ ಹಸಿವು ಸೂಚ್ಯಂಕವು ವಿವಿಧ ದೇಶಗಳಲ್ಲಿರುವ ಹಸಿವನ್ನು ಮಾಪನ ಮಾಡುತ್ತದೆ. ಭಾರತದಲ್ಲಿ ೨೦೧೩ರಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯನ್ನು ಜಾರಿಗೊಳಿಸಲಾಗಿದೆ iತ್ತು ಆಹಾರ ಸಾಮಗ್ರಿಗಳ ದಾಸ್ತಾನುಗಳು ಏರುತ್ತಲೇ ಇವೆ. ಆದರೂ ಈ ವರದಿಯು ಸೂಚಿಸುವಂತೆ ಅಗತ್ಯವಿರುವಷ್ಟು  ಆಹಾರವನ್ನು ಪಡೆದುಕೊಳ್ಳುವ ಹಕ್ಕಿಗೆ ಹಾನಿಯಾಗುವಂತೆ ವಿನಾಶಕಾರಿ ಹಸಿವು ಮಾತ್ರ ಮುಂದುವರೆಯುತ್ತಲೇ ಇದೆ. ಆದರೆ ಇದೇ ಅವಧಿಯಲ್ಲಿ ದಕ್ಷಿu ಏಶಿಯಾದ ನಮ್ಮ ನೆರೆಹೊರೆ ದೇಶಗಳು ಈ ವಿಷಯದಲ್ಲಿ ನಮಗಿಂತ ಉತ್ತಮ ಸಾಧನೆಯನ್ನು  ತೋರಿವೆ.

ಆ ವರದಿಯ ಪ್ರಕಾರ ಭಾರತದ ಅಪಾರ ಜನಸಂಖ್ಯೆಯ ಕಾರಣದಿಂದಾಗಿ  ಭಾರತದ ಕಳಪೆ ಸಾಧನೆಯು ಇಡೀ ಪ್ರದೇಶದ ಸಾಧನಾ ಮಟ್ಟವನ್ನು ಕೆಳಗೆ ಎಳೆಯುತ್ತಿದೆ. ಅದರ ಪ್ರಕಾರ ಭಾರತದಲ್ಲಿ ಎರಡು  ವರ್ಷದಿಂದ ಆರು ವರ್ಷಗಳ ನಡುವಿನ ವಯೋಮಾನದ ಮಕ್ಕಳಲ್ಲಿ ಶೇ. ೯.೬ರಷ್ಟು ಮಕ್ಕಳು ಮಾತ್ರ ಸರಿಪ್ರಮಾಣದ ಮತ್ತು ಸರಿಯಾದ ಅಹಾರವನ್ನು ಪಡೆದುಕೊಳ್ಳುತ್ತಿದ್ದಾರೆ. ಅಷ್ಟುಮಾತ್ರವಲ್ಲ. ಐದುವರ್ಷದೊಳಗಿನ ಮಕ್ಕಳಲ್ಲಿ ಎತ್ತರಕ್ಕೆ ಸರಿಯಾದಷ್ಟು ತೂಕವಿಲ್ಲದ ಮಕ್ಕಳು ಅಂದರೆ ಅತ್ಯಂತ ತೀವ್ರ ಅಪೌಷ್ಟಿಕತೆಗೆ ಗುರಿಯಾಗಿರುವ ಮಕ್ಕಳ ಸಂಖ್ಯೆ  ಭಾರತದಲ್ಲಿ ಶೇ.೨೮ರಶ್ಟು. ಇದು ವರದಿಯಲ್ಲಿ ಉಲ್ಲೇಖವಾಗಿರುವ ದೇಶಗಳಲ್ಲೇ ಅತಿ ಹೆಚ್ಚಿನ ಪ್ರಮಾಣದ್ದಾಗಿದೆ. ಹಾಗೂ ಐದು ವರ್ಷದೊಳಗಿನ ಮಕ್ಕಳಲ್ಲಿ ವಯಸ್ಸಿಗೆ ತಕ್ಕನಾದ ಎತ್ತರವಿಲ್ಲzರುವುದು ನಿರಂತರವಾಗಿ ಮುಂದುವರೆದಿರುವ ಅಪೌಷ್ಟಿಕೆತೆಯ ಸೂಚನೆಯಾಗಿದ್ದು ಅಂಥಾ ಮಕ್ಕಳ ಸಂಖ್ಯೆಯೂ ಭಾರತದಲ್ಲಿ ಶೇ. ೩೭.೯ರಷ್ಟಿದೆ. ಈ ವಿಭಾಗದಲ್ಲೂ ಸಹ ಭಾರತದ್ದೇ ದಾಖಲೆ. ಆದರೆ ಒಂದು ವರ್ಷದಿಂದ ಮತ್ತೊಂದು ವರ್ಷಕ್ಕೆ ಆUರುವ ಬೆಳವಣಿಗೆಯನ್ನು ಈ ಸೂಚ್ಯಂಕದ ಶ್ರೇಯಾಂಕ ಮತ್ತು ಮೌಲ್ಯಗಳಲ್ಲಿ ಅಳೆಯಲಾಗುವುದಿಲ್ಲವೆಂಬ ಕಾರಣವನ್ನು  ಮುಂದಿಟ್ಟುಕೊಂಡು ಈ ವರದಿಯನ್ನು ಟೀಕಿಸಲಾಗುತ್ತಿದೆ. ಇದರ ಜೊತೆಗೆ ಈ ವರದಿಯು ಪ್ರತಿವರ್ಷ ತನ್ನ ದತ್ತಾಂಶಗಳನ್ನು ಹಾಗೂ ಮಾಪನ ವಿಧಾನಗಳನ್ನು ಸುಧಾರಿಸಿಕೊಳ್ಳುತ್ತಿರುತ್ತದೆ ಹಾಗೂ ಹೊಸ ಹೊಸ ದೇಶಗಳನ್ನು ಸೇರಿಸಿಕೊಳ್ಳುತ್ತಿರುತ್ತದೆ. ಅದೇನೇ ಇದ್ದರೂ ಭಾರತದ ಮಕ್ಕಳ ಜೀವನವನ್ನು ಅಪಾಯಕ್ಕೊಡ್ಡುವ ಮಟ್ಟದಲ್ಲಿ  ತೀವ್ರವಾದ ಅಪೌಷ್ಟಿಕತೆ ತಾಂಡವವಾಡುತ್ತಿದೆ ಎಂಬ ಸತ್ಯವನ್ನು ವಿಶ್ವಸಂಸ್ಥೆಯ " ಸ್ಟೇಟ್ ಆಫ್ ದಿ ವರ್ಲ್ಡ್ಸ್ ಚಿಲ್ರನ್" (ಜಗತ್ತಿನ ಮಕ್ಕಳ್ ಪರಿಸ್ಥಿತಿ) ಎಂಬ ವರದಿಯೂ ಸಹ ಸಾಬೀತು ಮಾಡಿದೆ. ಈ ವರದಿಯು ಇತರ ಆರೋಗ್ಯ ಸಮಸ್ಯೆಗಳೊಂದಿಗೆ ನಿರ್ದಿಷ್ಟವಾಗಿ ಮಕ್ಕಳಲ್ಲಿನ ಅಪೌಷ್ಟಿಕತೆ, ರಕ್ತಹೀನತೆ, ಮತ್ತು ಡುಬ್ಬಹೊಟ್ಟೆಯಂಥ ಸಮಸ್ಯೆಗಳನ್ನು ಅಧ್ಯಯನ ಮಾಡಿದೆ. ಮತ್ತು ಮಕ್ಕಳಿಗೆ ಸಿಗುತ್ತಿರುವ ಆಹಾರದಲ್ಲಿ ಸರಿಯಾದ ಪೌಷ್ಟಿಕಾಂಶವಿಲ್ಲವೆಂಬ ಕಾರಣದಿಂದಲೇ ಅವರು ಸಾವನ್ನಪ್ಪುತ್ತಿದ್ದಾರೆ ಎಂದು ವರದಿ ಮಾಡಿದೆ. ಭಾರತzಲ್ಲಿ ಐದುವಯಸ್ಸಿನ ಒಳಗಿನ ಮಕ್ಕಳಲ್ಲಿ ಪ್ರತಿ ಸಾವಿರಕ್ಕೆ ೩೭ ಮಕ್ಕಳು ಮಾತ್ರ ಸಾವನ್ನಪ್ಪುತ್ತಿದ್ದರೂ ಒಟ್ಟೂ ಸಾವಿನ ಸಂಖ್ಯೆಯನ್ನು ನೋಡಿದರೆ ೨೦೧೮ರಲ್ಲಿ ಭಾರತದಲ್ಲಿ ೮,೮೨,೦೦೦ ಮಕ್ಕಳು ಸಾವನ್ನಪ್ಪಿವೆ. ಅದರಲ್ಲಿ ಶೇ. ೬೨ ಮಕ್ಕಳು ಹುಟ್ಟಿದ ಕೂಡಲೇ ಮರಣಹೊಂದಿವೆ. ಹೀಗಾಗಿ ಐದುವರ್ಷದೊಳಗಿನ ಮಕ್ಕಳಲ್ಲಿ ಶೇ.೬೯ರಷ್ಟು ಸಾವುಗಳು ಅಪೌಷ್ಟಿಕತೆಯಿಂದ ಸಂಭವಿಸುತ್ತಿದ್ದರೆ ಈ ವಯೋಮಾನದ ಇಬ್ಬರಲ್ಲಿ ಒಬ್ಬರು ಒಂದಲ್ಲಾ ಒಂದು ಬಗೆಯ ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ. ಈ ವರದಿಯ ಪ್ರಕಾರ ಭಾರತದಲ್ಲಿ ಶೇ.೩೫ರಶ್ಟು ಮಕ್ಕಳು ವಯಸ್ಸಿಗೆ ತಕ್ಕಷ್ಟು ಎತ್ತರವಿಲ್ಲ.  ಶೇ.೧೭ರಷ್ಟು ಮಕ್ಕಳಿಗೆ ಎತ್ತರಕ್ಕೆ ತಕ್ಕಷ್ಟು ತೂಕವಿಲ್ಲ. ಶೇ. ೩೩ರಷ್ಟು ಮಕ್ಕಳಿಗೆ  ಸರಿಯಾದ ತೂಕವಿಲ್ಲ. ಎರಡು ವರ್ಷದಿಂದ ಆರು ವರ್ಷದ ವಯೋಮಾನದ ಮಕ್ಕಳಲ್ಲಿ ಶೇ. ೪೨ರಷ್ಟು ಮಕ್ಕಳಿಗೆ ಮಾತ್ರ ಕಾಕಾಲಕ್ಕೆ ಆಹಾರ ಸಿಗುತ್ತಿದ್ದರೆ, ಅವರಲ್ಲಿ ಶೇ. ೨೧ರಷ್ಟು ಮಕ್ಕಳಿಗೆ ಮಾತ್ರ ವೈವಿಧ್ಯಮಯವಾದ ಆಹಾರ ಸಿಗುತ್ತಿದೆ.  ಮೇಲಾಗಿ ಪ್ರತಿ ಇಬ್ಬರು ಮಹಿಳೆಯರಲ್ಲಿ ಒಬ್ಬರು ರಕ್ತಹೀನತೆಯಿಂದ ಬಳಲುತ್ತಿದ್ದರೆ ಶೇ. ೪೦.೫ರಷ್ಟು ಮಕ್ಕಳೂ ಸಹ ಅದೇ ಪರಿಸ್ಥಿತಿಯಿಂದ ಬಳಲುತ್ತಿದ್ದಾರೆ. ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ನಡೆಸಿದ ೨೦೧೬-೧೮ರ ಸಾಲಿನ ರಾಷ್ಟ್ರೀಯ ಸಮಗ್ರ ಪೌಷ್ಟಿಕಾಂಶ ಸರ್ವೆ ಸಹ ಐದುವರ್ಶದೊಳಗಿನ ಮಕ್ಕಳಲ್ಲಿ ಶೇ. ೩೪.೭ರಷ್ಟು ಮಕ್ಕಳು ವಯಸ್ಸಿಗೆ ತಕ್ಕಷ್ಟು ಎತ್ತರವಿಲ್ಲವೆಂದೂ, ಶೇ.೧೭.೩ರಷ್ಟು ಮಕ್ಕಳಿಗೆ ಎತ್ತರಕ್ಕೆ ತಕ್ಕಷ್ಟು ತೂಕವಿಲ್ಲವೆಂದೂ ಮತ್ತು ಶೇ.೩೩.೪ರಷ್ಟು ಮಕ್ಕಳು ವಯಸ್ಸಿಗೆ ತಕ್ಕಷ್ಟು ತೂಕವನ್ನು ಹೊಂದಿಲ್ಲವೆಂದೂ ವರದಿ ಮಾಡಿದೆ. 

ಅಪೌಷ್ಟಿಕತೆಯು ಹಲವಾರು ಕಾರಣಗಳಿಂದ ಸಂಭವಿಸುತ್ತದೆ. ಮತ್ತು ಅದರಲ್ಲಿ ರಾಜ್ಯ-ರಾಜ್ಯಗಳ ನಡುವೆ ಮತ್ತು ರಾಜ್ಯದೊಳಗಡೆಯೂ ಹಲವಾರು ವ್ಯತ್ಯಾಸಗಳು ಕಂಡುಬರುತ್ತವೆ. ಬಡತನ, ಆಹಾರ ಧಾನ್ಯಗಳ ಮತ್ತು ಬೇಳೆಕಾಳುಗಳ ಅಲಭ್ಯತೆ, ಬಳಸುವ ಅಹಾರದಲ್ಲಿ ಪ್ರಮುಖ ಪೌಷ್ಟಿಕಾಂಶಗಳ ಕೊರತೆ, ಸಾರ್ವಜನಿಕ ಪಡಿತರದ ಅವ್ಯವಸ್ಥೆ ಮತ್ತು ಅಸಮಾನ ವಿತರಣೆ, ಕುಟುಂಬದಲ್ಲಿ ಮಹಿಳೆಯ ಸಾಪೇಕ್ಷ ಸ್ಥಾನಮಾನ, ಸ್ವಚ್ಚ ಕುಡಿಯುವ ನೀರಿನ ಅಲಭ್ಯತೆ ಮತ್ತು ನೈರ್ಮಲ್ಯದ ಕೊರತೆ ಮತ್ತು ಹಲವಾರು ಅನುವಂಶೀಯ ಹಾಗೂ ಪರಿಸರ ಸಂಬಂಧೀ ಕಾರಣಗಳೂ ಇದರಲ್ಲಿ ಸೇರಿಕೊಂಡಿವೆ. ಇಂದಿನ ಈ ಪರಿಸ್ಥಿತಿಗೆ ಆಳಿಕೊಂಡು ಬಂದ ಸರ್ಕಾರಗಳಲ್ಲಿ ರಾಜಕೀಯ ಬದ್ಧತೆಯ ಕೊರತೆ ಮತ್ತು ಫಲಿತಾಂಶಗಳನ್ನು ಪರಿಣಾಮಕಾರಿಯಾಗಿ ತಂದುಕೊಡುವಲ್ಲಿ ಅಸಮರ್ಥವಾಗಿರುವ ಹಾಲಿ ವ್ಯವಸ್ಥೆ ಮತ್ತು ನೀತಿಗಳೆರಡೂ ಕಾರಣವಾಗಿವೆ.

ಮಕ್ಕಳಲ್ಲಿ ಕಂಡುಬರುತ್ತಿರುವ ವಯಸ್ಸಿಗೆ ತಕ್ಕ ಎತ್ತರದ ಕೊರತೆ ಮತ್ತು  ಪೌಷ್ಟಿಕಾಂಶದ ಕೊರತೆಗಳನ್ನು ಶೀಘ್ರವಾಗಿ ಕಡಿಮೆ ಮಾಡಿ ೨೦೨೨ರ ವೇಳೆಗೆ ಭಾರತವನ್ನು ಅಪೌಷ್ಟಿಕತೆಯಿಂದ ಮುಕ್ತಗೊಳಿಸಲು ಗರ್ಭಿಣಿಯರಿಗೆ ಮತ್ತು ಹಾಲುಣಿಸುವ ತಾಯಂದಿರಿಗೆ ಶರತ್ತುಬದ್ಧವಾಗಿ ಹಣವನ್ನು ವರ್ಗಾವಣೆ ಮಾಡುವ ಪ್ರಧಾನ ಮಂತ್ರಿ ಮಾತೃವಂದನಾ ಯೋಜನಾ ಮತ್ತು ಪೋಷಣೆ ಅಭಿಯಾನ, ರಾಷ್ಟ್ರೀಯ ಪೌಷ್ಟಿಕಾಂಶ ಅಭಿಯಾನಗಳು ಈಗ ಜಾರಿಯಲ್ಲಿವೆ. ಇತ್ತೀಚಿನ ಸಂಶೋಧನಾ ವರದಿಯೊಂದು ಹೇಳುವಂತೆ ಇವುಗಳು ಜಾರಿಯಾಗುತ್ತಿರುವ  ರೀತಿ ಮತ್ತು ವೇಗಗಳನ್ನು ನೋಡಿದರೆ ಅಂದುಕೊಂಡಿರುವ ಗುರಿಯನ್ನು ಮುಟ್ಟುವುದು ಸಂದೇಹ. ಆದರೆ ಇತ್ತೀಚಿನ ಕ್ರೆಡಿಟ್ ಸೂಸಿ ಗ್ಲೋಬಲ್ ವೆಲ್ತ್ ರಿಪೋರ್ಟಿನ ಪ್ರಕಾರ ಅತಿ ವೇಗವಾಗಿ ಸಂಪತ್ತನ್ನು ಸೃಷ್ಟಿಸುತ್ತಿರುವ ದೇಶಗಳಲ್ಲಿ ಭಾರತವೂ ಒಂದಾಗಿದ್ದರೂ ಭಾರತದಲ್ಲಿ ಹಸಿವು ಮತ್ತು ತೀವ್ರತರನಾದ ಅಪೌಷ್ಟಿಕತೆಯನ್ನು ನಿವಾರಿಸಲಾಗದಿರುವುದು ಒಂದು ವಿಪರ್ಯಾಸವಲ್ಲವೇ? ಆದ್ದರಿಂದ ಸರ್ಕಾರವು ಅಗತ್ಯವಿರುವಷ್ಟು ಆಹಾರ ಮತ್ತು ಪೌಷ್ಟಿಕತೆಯನ್ನು ಖಾತರಿಪಡಿಸುವುದಕ್ಕೆ ಅತ್ಯಂತ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಬೇಕು. ಅದಕ್ಕಾಗಿ ಪೌಷ್ಟಿಕಾಂಶಗಳನ್ನು ಒದಗಿಸ ಬೇಕಾದ ಸರ್ಕಾರಿ ಮಧ್ಯಪ್ರವೇಶಗಳಿಗೆ ಎಷ್ಟು ಅಗತ್ಯವಿದೆಯೋ ಅಷ್ಟು ಹೂಡಿಕೆಯನ್ನು ಮಾಡಬೇಕು. ಆ ಮೂಲಕ ಬದುಕುಳಿಯುವ ಮತ್ತು ಮಾನವರ ಶಕ್ತಿ ಸಾಮರ್ಥ್ಯಗಳಿಗೆ ತಕ್ಕಷ್ಟು ಬೆಳೆಯುವ ಅವಕಾಶಗಳನ್ನು ಖಾತರಿಗೊಳಿಸಬೇಕು.

ಕೃಪೆ: Economic and Political Weekly ಅನು: ಶಿವಸುಂದರ್ 

 

Read These Next

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...