ಹುಬ್ಬಳ್ಳಿ: ಇನ್ಮುಂದೆ ಶ್ರೀ ಸಿದ್ದಾರೂಢ ಸ್ವಾಮೀಜಿ ರೈಲ್ವೆ ನಿಲ್ದಾಣ.
ಹುಬ್ಬಳ್ಳಿ: ಉತ್ತರಕರ್ನಾಟಕ ಭಾಗದ ಜನರ ಮತ್ತು ರಾಜ್ಯ ನಾಯಕರ ದೀರ್ಘಕಾಲದ ಬೇಡಿಕೆಯೊಂದು ಈಡೇರಿದೆ.
ರಾಜ್ಯದ ಪ್ರಮುಖ ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ಶ್ರೀ ಸಿದ್ದಾರೂಢ ಸ್ವಾಮೀಜಿ ಅವರ ಹೆಸರು ನಾಮಕರಣ ಮಾಡಲು ಕೇಂದ್ರ ಗೃಹ ಇಲಾಖೆ ಆದೇಶಿಸಿದೆ.
ಈ ವಿಷಯದಲ್ಲಿ ಕೇಂದ್ರವು ರಾಜ್ಯದ ಕಂದಾಯ ಇಲಾಖೆಗೆ ಪತ್ರ ಕಳಿಸಿದೆ.
ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಈ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಲ್ಲದೆ ಗೃಹ ಸಚಿವ ಅಮಿತ್ ಶಾ ಹಾಗೂ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರುಗಳಿಗೆ ಧನ್ಯವಾದ ಹೇಳಿದ್ದಾರೆ.
ಉತ್ತರಕರ್ನಾಟಕ ಭಾಗದ ಜನರ ಭಾವನೆಗಳಲ್ಲೊಂದಾದ ಶ್ರೀ ಸಿದ್ದಾರೂಢ ಸ್ವಾಮೀಜಿ ಅವರ ಹೆಸರು ಇಡುತ್ತಿರುವುದಕ್ಕೆ ಎಲ್ಲೆಡೆ ಸಂತಸ ವ್ಯಕ್ತವಾಗಿದೆ.