ಭಟ್ಕಳ: ತನ್ನ ಕೈ ಕೆಳಗೆ ನೂರಾರು ಮಂದಿ ಕೆಲಸಗಾರರಿದ್ದರೂ ಹಿರಿಯರ ಸಂಪ್ರದಾಯವನ್ನು ಪಾಲಿಸಲು ಹಿಂಜರಿಯದ ಹೋಟೆಲ್ ಉದ್ಯಮಿ ಭಟ್ಕಳ ಮೂಲದ ಮುಂಬೈ ನಿವಾಸಿ ವಿಠಲ್ ರಾಮಚಂದ್ರ ಕಾಮತ್, ಪ್ರತಿವರ್ಷ ಗಣೇಶ ಚೌತಿಗೆ ಒಂದು ತಿಂಗಳು ಮುಂಚೆ ಭಟ್ಕಳಕ್ಕೆ ಬಂದು ತನ್ನ ಕೈಯಿಂದ ಗಣೇಶನ ಸುಂದರ ವಿಗ್ರಹವನ್ನು ನಿರ್ಮಿಸಿ ಗಣಪತಿಹಬ್ಬವನ್ನು ಅತ್ಯಂತ ವಿಜೃಂಬಣೆಯಿಂದ ನೆರವೇರಿಸಿಕೊಂಡು ಬರುತ್ತಿದ್ದಾರೆ.
ಹಿರಿಯರು ಪಾಲಿಸಿ ಬಂದ ಸಂಸ್ಕøತಿ, ಪರಂಪರೆಯನ್ನು ಇಂದಿಗೂ ಮುಂದುವರೆಸಿ, ತಿಂಗಳುಗಟ್ಟಲೆ ಹೋಟೆಲ್ ಉದ್ಯಮ ಬಿಟ್ಟು ತಮ್ಮ ಗಣಪತಿಯನ್ನು ತಾವೆ ನಿರ್ಮಿಸಿ ವಿಜೃಂಬಣೆಯಿಂದ ಗಣಪತಿ ಹಬ್ಬವನ್ನು ಆಚರಿಸಲು ಕಾಮತ ಕುಟುಂಬ ಸಜ್ಜಾಗುತ್ತಿದೆ.
ಮೂಲತಃ ಭಟ್ಕಳ ನಿವಾಸಿ, ಮಹಾರಾಷ್ಟ್ರದ ಕಣ್ಕೌಲಿಯಲ್ಲಿ ಮಂಜುನಾಥ ಹೋಟೆಲ್ ಉದ್ಯೋಗ ನಡೆಸುತ್ತಿರುವ ವಿಠಲ್ ರಾಮಚಂದ್ರ ಕಾಮತ ಕುಟುಂಬ ತಮ್ಮ ಮನೆಯ ಗಣಪತಿಯನ್ನ ತಾವೆ ನಿರ್ಮಿಸುತ್ತಿದ್ದಾರೆ . ಸುಮಾರು 60ವರ್ಷಗಳ ಹಿಂದೆ ಅವರ ಪೂರ್ವಿಕರು ಊರಿಗೆಲ್ಲಾ ಗಣಪತಿ ಮೂರ್ತಿ ಮಾಡಿಕೋಡುತ್ತಿದ್ದರು. ಮನೆಯ ಸದಸ್ಯರು ಉದ್ಯೋಗ ಆರಿಸಿ ಪರ ಊರಿಗೆ ವಲಸೆ ಹೋದ ಪರಿಣಾಮ ಕ್ರಮೇಣ ಗಣಪತಿ ಮೂರ್ತಿ ಮಾಡುವ ಕಾಯಕ ಅಲ್ಲಿಗೆ ನಿಂತಿತು. ಆದರೆ ಅವರ ಕುಟುಂಬದ ಹಿರಿಯರು ನಮ್ಮ ಮನೆಯ ಗಣಪತಿ ನಾವೆ ತಯಾರಿಸಬೇಕು, ನಾವು ಆರಾಧಿಸುತ್ತಿದ್ದ ವಡೇರ ಮಠಕ್ಕೂ ನಮ್ಮ ವಂಶಸ್ಥರ ಕೈಯಿಂದ ನಿರ್ಮಿಸಿದ ಗಣಪತಿಯನ್ನು ನೀಡಬೇಕು ಎಂದು ಬಯಸಿದ್ದರು. ಅದನ್ನು ಚಾಚು ತಪ್ಪದೆ ಈ ಕುಟುಂಬ ಪಾಲಿಸಿ ಬಂದಿದ್ದು ಗಣಪತಿಯ ಹಬ್ಬಕ್ಕೆ ತಿಂಗಳು ಇರುವಾಗ ಅವರ ಕುಟುಂಬದ ವಿಠಲ್ ಕಾಮತ ಭಟ್ಕಳಕ್ಕೆ ಬಂದು ವಿಗ್ರಹದ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಳ್ಳುತ್ತಾರೆ. ಇವರು ಒಟ್ಟಾರೆಯಾಗಿ 3 ಗಣಪತಿ ನಿರ್ಮಿಸುತ್ತಾರೆ. ಅದರಲ್ಲೂ ಸಂಪ್ರದಾಯದಂತೆ ಜೇಡಿಮಣ್ಣಿನ ಪರಿಸರ ಸ್ನೇಹಿ ಸುಂದರ ಗಣಪತಿ ವಿಗ್ರಹ ನಿರ್ಮಿಸುತ್ತಾರೆ.
ಮಹರಾಷ್ಟ್ರದ ಕಣಕೌಲಿಯಲ್ಲಿ ಹೊಟೇಲ್ ಉದ್ಯೋಗ ನಡೆಸುತ್ತಿರುವ ಇವರ ಕೈಕೆಳಗೆ ನೂರಾರು ಜನ ಕೆಲಸ ಮಾಡುತ್ತಿದ್ದಾರೆ. ಹಣವೊಂದೆ ಮುಖ್ಯವಲ್ಲ, ಹಿರಿಯರ ಸಂಪ್ರದಾಯ, ಆಚರಣೆಯನ್ನು ಪಾಲಿಸಿಕೊಂಡು ಹೋಗಬೇಕು. ಇದರಿಂದ ಮನಸ್ಸಿಗೆ ತೃಪ್ತಿ ದೊರೆಯುವದಲ್ಲದೆ, ಧಾರ್ಮಿಕ ಕಾರ್ಯದಲ್ಲಿ ತೊಡಗೊಕೊಂಡ ಸಂತೋಷವೂ ದೊರಕುತ್ತದೆ ಎನ್ನುತ್ತಾರೆ ವಿಠಲ್ ಕಾಮತ. ತಿಂಗಳುಗಟ್ಟಲೆ ವ್ಯವಹಾರವನ್ನು ಬದಿಗಿರಿಸಿ ಸ್ವತಃ ಗಣಪತಿ ತಯಾರಿಸುವ ಬದಲು ಮೂರ್ತಿ ತಯಾರಿಸುವವರ ಹತ್ತಿರ ಮಾಡಿಸಬಹುದಿತ್ತು. ಆದರೆ ಹಿರಿಯರ ಸಂಪ್ರದಾಯ, ಬದ್ದತೆ, ಪರಂಪರೆ ನಮ್ಮ ಮುಂದಿನ ಪೀಳಿಗೆಯೂ ಪಾಲಿಸಬೇಕು ಎನ್ನವದು ಅವರ ಬಯಕೆ.