ಹೆಚ್‍ಐವಿ ಸೋಂಕಿತರನ್ನು ಎಲ್ಲರಂತೆ ಸಮಾನವಾಗಿ ಕಾಣಬೇಕು: ಡಾ. ರಘುನಂದನ್

Source: SO News | By Laxmi Tanaya | Published on 1st December 2021, 8:20 PM | State News | Don't Miss |

ಶಿವಮೊಗ್ಗ : ಏಡ್ಸ್ ರೋಗದ ಬಗ್ಗೆ ಎಲ್ಲರಲ್ಲಿ ಜಾಗೃತಿ ಮೂಡಿಸುವುದು ಮತ್ತು ಹೆಚ್‍ಐವಿ ಸೋಂಕಿತರಿಗೆ ಉತ್ತಮ ಚಿಕಿತ್ಸೆ ಮತ್ತು ಮಾನಸಿಕ ಸ್ಥೈರ್ಯ ತುಂಬುವುದೇ ವಿಶ್ವ ಏಡ್ಸ್ ದಿನಾಚರಣೆಯ ಮುಖ್ಯ ಉದ್ದೇಶವಾಗಿದ್ದು, ಹೆಚ್‍ಐವಿ ಸೋಂಕಿತರನ್ನು ಎಲ್ಲರಂತೆ ಸಮಾನವಾಗಿ ಕಾಣಬೇಕೆಂದು ವಿಡಿಎಲ್ ಉಪನಿರ್ದೇಶಕ ಡಾ.ರಘುನಂದನ್ ಹೇಳಿದರು.

       ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಭಾರತೀಯ ವೈದ್ಯಕೀಯ ಸಂಘ, ಜಿಲ್ಲಾ ಏಡ್ಸ್ ತಡೆಗಟ್ಟುವ ಮತ್ತು ನಿಯಂತ್ರಣ ಘಟಕ, ಜಿಲ್ಲಾ ನ್ಯಾಯವಾದಿಗಳ ಸಂಘ ಶಿವಮೊಗ್ಗ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಾಪೂಜಿನಗರ, ಎನ್.ಎಸ್.ಎಸ್ ಘಟಕ-1,2,3, ಹಾಗೂ ಸರ್ಕಾರೇತರ ಸಂಘ ಸಂಸ್ಥೆಗಳು, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ನಗರದ ಐಎಂಎ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಏಡ್ಸ್ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

     ಏಡ್ಸ್ ಖಾಯಿಲೆ ಬಗ್ಗೆ ತಿಳಿಯುವುದು ಅತ್ಯವಶ್ಯವಾಗಿದೆ. ಆದರೆ ಏಡ್ಸ್ ಪ್ರಸ್ತುತ ಮಾರಣಾಂತಿಕವಲ್ಲ. ಸೂಕ್ತ ಮತ್ತು ನಿಯಮಿತ ಚಿಕಿತ್ಸೆಯಿಂದ ಇದನ್ನು ನಿಯಂತ್ರಿಸಬಹುದು. ಹೆಚ್‍ಐವಿ ಪೀಡಿತರನ್ನು ಎಲ್ಲರಂತೆ ಕಾಣಬೇಕು. ಏಡ್ಸ್ ಬಗ್ಗೆ ಇರುವ ಮೌಢ್ಯತೆಯನ್ನು ಮಟ್ಟ ಹಾಕುವ ದಿನ ಇದಾಗಿದ್ದು, ಇದೂ ಕೂಡ ಸಕ್ಕರೆ ಮತ್ತು ಇತರೆ ಖಾಯಿಲೆ ರೀತಿಯ ಒಂದು ಖಾಯಿಲೆಯಾಗಿದೆ. ಚಿಕಿತ್ಸೆಯಿಂದ ಸೂಕ್ತವಾಗಿ ನಿಯಂತ್ರಿಸಬಹುದು ಹಾಗೂ ಈ ಸೋಂಕಿನ ಕುರಿತಾದ ಅರಿವಿನಿಂದ ಇದನ್ನು ದೂರ ಇಡಬಹುದು.

    ಕೇವಲ ಅಸುರಕ್ಷಿತ ಲೈಂಗಿಕತೆಯಿಂದ ಮಾತ್ರ ಈ ಸೋಂಕು ಬರುವುದಿಲ್ಲ. ಆದ್ದರಿಂದ ಇವರನ್ನು ತಾರತಮ್ಯದಿಂದ ನೋಡದೆ ಎಲ್ಲರಂತೆ ಕಾಣಬೇಕು ಎಂದು ಕಿವಿಮಾತು ಹೇಳಿದರು.

       ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಅಧ್ಯಕ್ಷ ಡಾ.ಶಿವಯೋಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, 1981 ರಲ್ಲಿ ಮೊತ್ತ ಮೊದಲಿಗೆ ಅಮೇರಿಕಾದ ಲಾಸ್ ಏಂಜಲೀಸ್ ಪ್ರದೇಶದಲ್ಲಿ ವ್ಯಕ್ತಿಯೋರ್ವನಲ್ಲಿ ಹೆಚ್‍ಐವಿ ಸೋಂಕು ಕಂಡು ಬಂದಿತು. ಇದೊಂದು ಮಾರಣಾಂತಿಕ ಸೋಂಕಾಗಿದ್ದು ಈ ಕುರಿತು ಜಾಗೃತಿ ಮೂಡಿಸಲು ಮತ್ತು ನಿಯಂತ್ರಣ ಸಾಧಿಸುವ ಸಲುವಾಗಿ 1988 ರಿಂದ ವಿಶ್ವ ಏಡ್ಸ್ ದಿನಾಚರಣೆ ಮಾಡಲಾಗುತ್ತಿದೆ. 

    ಹೆಚ್‍ಐವಿ ಸೋಂಕು ಅಸುರಕ್ಷಿತ ಲೈಂಗಿಕ ಸಂಪರ್ಕ, ಸಂಸ್ಕರಿಸದ ಸೂಜಿ ಮತ್ತು ಸಿರಂಜ್ ಬಳಕೆ, ತಪಾಸಣೆಗೊಳಪಡಿಸದ ರಕ್ತ ಮತ್ತು ಅದರ ಪದಾರ್ಥಗಳು ಹಾಗೂ ಗರ್ಭದಿಂದ ತಾಯಿಯಿಂದ ಮಗುವಿಗೆ ಈ ನಾಲ್ಕು ಮಾರ್ಗಗಳಿಂದ ಬರುತ್ತದೆ. ಆದರೆ ಇತ್ತೀಚಿನ ಸುಧಾರಣೆಗಳಿಂದಾಗಿ ರಕ್ತ, ಸೂಜಿ ಮತ್ತು ತಾಯಿಯಿಂದ ಮಗುವಿಗೆ ಬರುವುದನ್ನು ನಿಯಂತ್ರಿಸಲಾಗಿದೆ. ಆದರೆ ಜನರು ತಮ್ಮ ಅರಿವನ್ನು ಹೆಚ್ಚಿಸಿಕೊಂಡು ಅಸುರಕ್ಷಿತ ಲೈಂಗಿಕತೆಯಿಂದ ಸೋಂಕು ತಗುಲುವುದನ್ನು ನಿಯಂತ್ರಿಸಬೇಕು. ಲೈಂಗಿಕತೆಯ ಮಡಿವಂತಿಕೆಯಿಂದ ಕೂಡ ಈ ಸೋಂಕು ಹೆಚ್ಚಾಗುತ್ತಿದ್ದು ಈ ಬಗ್ಗೆ ಶಿಕ್ಷಣ ಮತ್ತು ಅರಿವು ಹೆಚ್ಚಬೇಕು ಎಂದ ಅವರು ನಿಯಮಿತ ಚಿಕಿತ್ಸೆಯಿಂದ ಇದನ್ನು ಪರಿಣಾಮಕಾರಿಯಾಗಿ ನಿಯಂತ್ರಣದಲ್ಲಿಡಲು ಸಾಧ್ಯ ಎಂದರು.

     ಜಿಲ್ಲಾ ಕ್ಷಯ ಮತ್ತು ಏಡ್ಸ್ ನಿಯಂತ್ರಣಾಧಿಕಾರಿ ಡಾ.ದಿನೇಶ್.ಜಿ.ಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಪಂಚದಲ್ಲಿ ಹೆಚ್‍ಐವಿ ಸೋಂಕಿತರ ಸಂಖ್ಯೆಯಲ್ಲಿ ಭಾರತವು 3ನೇ ಸ್ಥಾನದಲ್ಲಿದೆ. ನ್ಯಾಕೋ(ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ) ಅಂಕಿ ಅಂಶದ ಪ್ರಕಾಋ ಭಾರತದಲ್ಲಿ 2.1 ಮಿಲಿಯನ್ ಜನರು ಹೆಚ್‍ಐವಿ ಸೋಂಕಿನೊಂದಿಗೆ ಬದುಕುತ್ತಿದ್ದಾರೆ. ಶೇ.95 ರಷ್ಟು ಹೆಚ್‍ಐವಿ ಸೋಂಕಿರುವವರಿಗೆ ತಮ್ಮ ಸ್ಥಿತಿ ತಿಳಿಸುವುದು, ಸೋಂಕಿತರಿಗೆ ಎಆರ್‍ಟಿ ಚಿಕಿತ್ಸೆ ನೀಡುವುದು ಮತ್ತು ಚಿಕಿತ್ಸೆ ಪಡೆಯುತ್ತಿರುವವರಲ್ಲಿ ವೈರಸ್ ಸಂಖ್ಯೆಯನ್ನು ಕಡಿಮೆಗೊಳಿಸುವುದು ವಿಶ್ವ ಏಡ್ಸ್ ದಿನಾಚರಣೆ ಉದ್ದೇಶವಾಗಿದೆ.

    ಹೆಚ್‍ಐವಿ ಸೋಂಕಿನ ಕುರಿತು ಅರಿವು ಮೂಡಿಸಲು ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಇಂದು ಸೈಕಲ್ ಜಾಥಾ, ಕಾಲ್ನಡಿಗೆ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಹಾಗೂ ಏಡ್ಸ್ ನಿಯಂತ್ರಣ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಸಂಘ ಸಂಸ್ಥೆಗಳು, ಕಾಲೇಜುಗಳು, ದಾನಿಗಳನ್ನು ಗುರುತಿಸಲು ಸನ್ಮಾನಿಸಲಾಗುತ್ತಿದೆ ಎಂದರು.

    ಶಿವಮೊಗ್ಗ ಜಿಲ್ಲೆಯಲ್ಲಿ 2015-16 ರಿಂದ ಅಕ್ಟೋಬರ್ 2021 ರವರೆಗೆ 4,24,017 ಸಾಮಾನ್ಯ ವ್ಯಕ್ತಿಗಳಿಗೆ ಹೆಚ್‍ಐವಿ ಪರೀಕ್ಷೆ ಮಾಡಿದ್ದು ಈ ಪೈಕಿ 2054 ಸೋಂಕಿತರು ಪತ್ತೆಯಾಗಿದ್ದಾರೆ. ಈ ಅಔದಿಯಲ್ಲಿ 2,21,600 ಗರ್ಭಿಣಿಯರಿಗೆ ಹೆಚ್‍ಐವಿ ಪರೀಕ್ಷೆ ಮಾಡಿದ್ದು ಇವರಲ್ಲಿ 79 ಗರ್ಭಿಣಿ ಸ್ತ್ರೀಯರಿದ್ದಾರೆ. ಹೆಚ್‍ಐವಿ ಚಿಕಿತ್ಸೆಗಾರಿ ಎಆರ್‍ಟಿ ಕೇಂದ್ರದಲ್ಲಿ 2008 ರಿಂದ 2021 ರವರೆಗೆ 6249 ವ್ಯಕ್ತಿಗಳು ನೋಂದಾಯಿಸಿಕೊಂಡಿದ್ದು 3161 ಜನರು ಚಿಕತ್ಸೆ ಪಡೆದು ಬದುಕುತ್ತಿದ್ದಾರೆ. 2089 ಜನರು ಸೋಂಕಿನಿಂದ ಮರಣ ಹೊಂದಿದ್ದಾರೆ. ರಾಜ್ಯದಲ್ಲಿ ಹೆಚ್‍ಐವಿ ಸೋಂಕಿನಲ್ಲಿ ಶಿವಮೊಗ್ಗ ಜಿಲ್ಲೆ 14 ನೇ ಸ್ಥಾನದಲ್ಲಿದೆ. ಜಿಲ್ಲಾಸ್ಪತ್ರೆಯಲ್ಲಿ 01 ಎಆರ್‍ಟಿ ಕೇಂದ್ರ ಮತ್ತು 11 ಉಪ ಕೇಂದ್ರಗಳು, 02 ಲೈಂಗಿಕ ರೋಗಗಳ ಚಿಕಿತ್ಸಾ ಕೇಂದ್ರ, 08 ರಕ್ತನಿಧಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದ್ದು, 12 ಆಪ್ತಸಮಾಲೋಚನಾ ಹಾಗೂ ಪರೀಕ್ಷಾ ಕೇಂದ್ರಗಳು, 106 ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು 15 ಖಾಸಗಿ ಆಸ್ಪತ್ರೆಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. 

   ಹಾಗೂ ಸರ್ಕಾರೇತರ ಸಂಸ್ಥೆಗಳಾದ ಅಭಯಧಾಮ ಹೆಚ್‍ಐವಿ ಸೋಂಕಿತರ ಬೆಂಬಲ ಸಂಘ, ರಕ್ಷ ಸಮುದಾಯ ಸಂಘ, ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್ ಅಂತಹ ಸಂಸ್ಥೆಗಳು ಹೆಚ್‍ಐವಿ ನಿಯಂತ್ರಣ ಕಾರ್ಯಕ್ರಮದಡಿ ಕೆಲಸ ಮಾಡುತ್ತಿವೆ ಎಂದು ಮಾಹಿತಿ ನೀಡಿದರು.

    ಕಾರ್ಯಕ್ರಮದಲ್ಲಿ ಏಡ್ಸ್ ನಿಯಂತ್ರಣ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಸಂಘ ಸಂಸ್ಥೆಗಳು, ಕಾಲೇಜುಗಳು, ದಾನಿಗಳು, ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು.

      ಕಾರ್ಯಕ್ರಮದಲ್ಲಿ , ಕುವೆಂಪು ವಿವಿ ಎನ್‍ಎಸ್‍ಎಸ್ ಜಿಲ್ಲಾ ಕಾರ್ಯಕ್ರಮಾಧಿಕಾರಿ ಪರಿಸರ ನಾಗರಾಜ್, ಕುಟುಂಬ ಕಲ್ಯಾಣ ಕಾರ್ಯಕ್ರಮಾಧಿಕಾರಿ ಡಾ.ಮಂಜನಾಥ್ ನಾಗಲೀಕರ್, ಶಿವಮೊಗ್ಗ ತಾಲ್ಲೂಕು ವೈದ್ಯಾಧಿಕಾರಿ ಡಾ.ಚಂದ್ರಶೇಖರ್, ಎಫ್‍ಪಿಎಐ ಅಧ್ಯಕ್ಷೆ ಪುಷ್ಪಾ ಶೆಟ್ಟಿ, ಸ್ಪಂದನಾ ಫೌಂಡೇಷನ್ ನ ಮಂಜುನಾಥ್ ಅಪ್ಪಾಜಿ, ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಎನ್‍ಎಸ್‍ಎಸ್ ಕಾರ್ಯಕ್ರಮಾಧಿಕಾರಿಗಳು, ಆರೋಗ್ಯ ಇಲಾಖೆ ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಜರಿದ್ದರು.

      ಜ್ಯೋತಿ  ಸಭಾ ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾ ಮೆಗ್ಗಾನ್ ಆಸ್ಪತ್ರೆ ಆವರಣದಿಂದ ಸೈಕಲ್ ಜಾಥಾ ಹಾಗೂ  ಕೋರ್ಟ್ ಆವರಣದಿಂದ ಐಎಂಎ ಹಾಲ್‍ವರೆಗೆ ಕಾಲ್ನಡಿಗೆ ಜಾಥಾ ಏರ್ಪಡಿಸಲಾಗಿತ್ತು.

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...