ಭಟ್ಕಳ: ಇಲ್ಲಿನ ಶಿರಾಲಿ ಪೇಟೆ ವ್ಯಾಪ್ತಿಯಲ್ಲಿ ಶುಕ್ರವಾರದಂದು ಐಆರ್ಬಿ ಕಂಪನಿಯಿಂದ ಜೆಸಿಬಿ ಮೂಲಕ ಹೆದ್ದಾರಿಯ ಚರಂಡಿ ಕಾಮಗಾರಿ ಆರಂಭಿಸಲು ಮುಂದಾಗಿದ್ದು, ಕಾಮಗಾರಿಯೂ 30 ಮೀ. ವ್ಯಾಪ್ತಿಯೊಳಗೆ ನಡೆಯುತ್ತಿದೆ ಎಂದು ಸ್ಥಳಿಯರು ಆರೋಪಿಸಿ ಕಾಮಗಾರಿ ಮಾಡಲು ಅವಕಾಶ ನೀಡದೇ ತಡೆವೊಡ್ಡಿ ವಾಪಸ್ಸು ಕಳುಹಿಸಿದ್ದಾರೆ.
ಈ ಹಿಂದೆ ಶಿರಾಲಿಯಲ್ಲಿ 30 ಮೀ.ಗೆ ಅಳತೆ ಸರ್ವೇ ಕಾರ್ಯ ನಡೆದಿರುವಂತೆ ಚರಂಡಿ ಕಾಮಗಾರಿಯನ್ನು ಆರಂಭಿಸಿರುವುದು ಸ್ಥಳಿಯರ ಹಾಗೂ ಸಾರ್ವಜನಿಕರ ಆಗ್ರಹಕ್ಕೆ ಕಾರಣವಾಯಿತು. ಕಾಮಗಾರಿಗೆ ಸ್ಥಳಿಯರು ತಡೆವೊಡ್ಡಿದ ವಿಷಯ ತಿಳಿದು ಸ್ಥಳಕ್ಕೆ ಸಹಾಯಕ ಆಯುಕ್ತ ಸಾಜಿದ್ ಅಹ್ಮದ್ ಮುಲ್ಲಾ ಹಾಗೂ ಗ್ರಾಮೀಣ ಠಾಣೆ ಪೊಲೀಸರು ತೆರಳಿ ಜನರ ಆಗ್ರಹವನ್ನು ಆಲಿಸಿದ್ದಾರೆ. ಈಗಾಗಲೇ ಶಿರಾಲಿ ಪಂಚಾಯತನಿಂದ 45 ಮೀ. ಅಗಲೀಕರಣಕ್ಕೆ ಜಿಲ್ಲಾಧಿಕಾರಿಗಳಿಗೆ ಎಲ್ಲಾ ದಾಖಲೆಯನ್ನು ಸಲ್ಲಿಸಲಾಗಿದ್ದು ಈ ಬಗ್ಗೆ ಮುಂದಿನ ಕ್ರಮದ ವಿಚಾರ ತಿಳಿಸುವುದಾಗಿ ಜಿಲ್ಲಾಧಿಕರಿಗಳು ತಿಳಿಸಿದ್ದರು. ಆದರೆ ಐಆರ್ಬಿ ಕಂಪನಿ ಮತ್ತೆ 30 ಮೀ. ಅಳತೆಗೆ ಕಾಮಗಾರಿ ಆರಂಭಿಸಲಾಗಿದೆ ಎಂದು ಸ್ಥಳಿಯರು ಆರೋಪಿಸಿದರು. ಈ ವೇಳೆ ಸ್ಥಳಿಯರು ಟೇಪ್ ಹಿಡಿದು ರಸ್ತೆ ಅಳತೆಯನ್ನು ಸಹ ಮಾಡಲಾಗಿದ್ದು 30 ಮೀ. ಗಿಂತಲೂ ಕಡಿಮೆ ಇರುವುದು ಕಂಡು ಬಂದಿದೆ ಎಂದು ಸಹಾಯಕ ಆಯುಕ್ತರಿಗೆ ತಿಳಿಸಿದರು. ಈ ಬಗ್ಗೆ ಸಹಾಯಕ ಆಯುಕ್ತ ಸಾಜಿದ ಅಹ್ಮದ ಮುಲ್ಲಾ ಭೂ ಸ್ವಾಧಿನಕ್ಕೊಳಪಟ್ಟವರ ಪಟ್ಟಿಯಲ್ಲಿ ಇನ್ನು ತನಕ ಯಾರೊಬ್ಬರು ಸಹ ಒಪ್ಪಿಗೆ ಸೂಚಿಸಲಾಗಿದ್ದು, ಲಿಖಿತ ರೂಪದಲ್ಲಿ ಒಪ್ಪಿಗೆ ಸೂಚಿಸದಿದ್ದಲ್ಲಿ ಜಾಗ ಸ್ವಾಧೀನ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದರು. ಇದಕ್ಕೆ ಶಿರಾಲಿ ಗ್ರಾಮ ಪಂಚಾಯತ ಅಧ್ಯಕ್ಷ ವೆಂಕಟೇಶ ನಾಯ್ಕ ನಾಲ್ಕು ತಿಂಗಳ ಹಿಂದೆ ಪಂಚಾಯತ ನಿಯೋಗವೂ 3ನೇ ಬಾರಿಗೆ ಶಿರಾಲಿಯಲ್ಲಿ 45 ಮೀ. ರಸ್ತೆ ಅಗಲೀಕರಣಕ್ಕೆ ಒಪ್ಪಿಗೆ ಸೂಚಿಸುವಂತೆ ಮನವಿ ಮಾಡಿಕೊಂಡಿದ್ದು ಆಗ ಜಿಲ್ಲಾಧಿಕಾರಿಗಳು ಆಗ 8 ಮಂದಿ ಭೂಮಾಲೀಕರ ಸಹಿ ಹಾಗೂ ಒಪ್ಪಿಗೆಯನ್ನು ಪಡೆದುಕೊಂಡು ಬಂದಿದ್ದಲ್ಲಿ ಮುಂದಿನ ಕ್ರಮವಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ತಿಳಿಸಿದ್ದರು. ಆದರೆ ಈಗ ಇನ್ನು ಕೆಲವರ ಹೆಸರಿರುವುದು ನಿಮ್ಮಿಂದಲೇ ತಿಳಿಸಿದು ಬಂದಿದ್ದಾಗಿದ್ದು ಈ ಬಗ್ಗೆ ಅವರ ಪಟ್ಟಿ ನೀಡಿದ್ದಲ್ಲಿ ಅವರನ್ನು ಭೇಟಿ ಮಾಡಿ ಅವರ ಒಪ್ಪಿಗೆ ಸಹ ಪಡೆದುಕೊಳ್ಳಲು ಪ್ರಯತ್ನಿಸುವದಾಗಿ ತಿಳಿಸಿದರು. ಕೊನೆಯಲ್ಲಿ 30 ಮೀ. ಅಳತೆಯಲ್ಲಿ ನಡೆಯುತ್ತಿದ್ದ ಚರಂಡಿ ಕಾಮಗಾರಿಯನ್ನು ಸ್ಥಳಿಯರು ನಿಲ್ಲಿಸಿದರು.
ಈ ಬಗ್ಗೆ ಮಾತನಾಡಿದ ಶಿರಾಲಿ ಪಂಚಾಯತ ಅಧ್ಯಕ್ಷ ವೆಂಕಟೇಶ ನಾಯ್ಕ ‘ಜನರಿಗೆ ಶಿರಾಲಿ ಹೆದ್ದಾರಿ ಅಗಲೀಕರಣದಲ್ಲಿ ಸರಿಯಾದ ಮಾಹಿತಿ ಸಿಗುತ್ತಿಲ್ಲವಾಗಿದೆ. 45 ಮೀ. ಅಗಲೀಕರಣವಾದರೆ ಮಾತ್ರ ಒಪ್ಪಿಗೆ ಇದ್ದು ಇಲ್ಲವಾದಲ್ಲಿ ಈಗ ಇದ್ದ ರೀತಿಯಲ್ಲಿಯೇ ರಸ್ತೆ ಇರಲಿ ಎಂಬುದು ಅವರ ಆಗ್ರಹವಾಗಿದೆ. ಈಗಾಗಲೇ ಸಾಕಷ್ಟು ಗೊಂದಲಗಳಿದ್ದು, ಈ ಬಗ್ಗೆ ಹೆದ್ದಾರಿ ಪ್ರಾಧಿಕರದ ಅಧಿಕಾರಿಗಳು ಶನಿವಾರದಂದು ಶಿರಾಲಿಗೆ ಬರಲಿದ್ದು ಈ ಕುರಿತು ಶಿರಾಲಿ ಪಂಚಾಯತನಲ್ಲಿ ಸಹಾಯಕ ಆಯುಕ್ತರ ನೇತೃತ್ವದಲ್ಲಿ ಸಭೆಯ ನಡೆಯಲಿದ್ದು ಮುಂದಿನ ತೀರ್ಮಾನ ತಿಳಿದು ಬರಲಿದೆ ಎಂದು ಹೇಳಿದರು.